ಟೈಂ ಪಾಸ್ ಬರಹಗಳು

ಆಗಷ್ಟ್ 3, 2010

ಮೈತ್ರೀಂ ಭಜತ

Filed under: ತರ್ಜುಮೆಗಳು — saagari @ 7:12 ಅಪರಾಹ್ನ

ಈ ಹಾಡನ್ನು ಎಮ್.ಎಸ್.ಸುಬ್ಬುಲಕ್ಷ್ಮಿಯವರು ಯು.ಎನ್.ಕಾನ್ಫರೆನ್ಸಿನಲ್ಲಿ ಹಾಡಿದ್ದರು. ಇದನ್ನು ಬರೆದವರು ಶೃಂಗೇರಿಯ ಆಗಿನ ಮಠಾಧಿಪತಿಗಳು.ಅದರ ತರ್ಜುಮೆ ಮಾಡಿಟ್ಟಿದ್ದೆ ಯಾವಾಗಲೋ…ಇಂದು ಹಾಕುವ ಮನಸ್ಸಾಯ್ತು, ಅದಕ್ಕೆ ನಿಮ್ಮ ಮುಂದೆ.

मैत्रीं भजत, अखिल हृज्जैत्रीम्
आत्मवतॆव परानपि पश्यत
युद्धं त्यजत, स्पर्धां त्यजत
त्यजत परॆष्वक्रममाक्रमणम् ॥

जननी पृथिवी कामदुघास्तॆ
जनकॊ दॆवः सकल दयालुः
दाम्यत दत्त दयध्वं जनता
श्रॆयॊ भूयात् सकल जनानाम् ॥

ಎಲ್ಲರ ಮನ ಗೆಲ್ಲಬಲ್ಲ
ಮೈತ್ರಿಯನು ಭಜಿಸು ನೀ |
ಕಾಣಬೇಕು ಪರರ ಕೂಡ
ನಿನ್ನವರ ಹಾಗೆ ನೀ ||

ಯುದ್ಧ ಬಿಟ್ಟು ಸ್ಪರ್ಧೆ ತೊರೆದು
ಶಾಂತಿಯ ಬರಮಾಡೋಣ |
ನಿಲ್ಲಿಸೋಣ ಪರರ ಮೇಲೆ
ಅಕ್ರಮದ ಆಕ್ರಮಣ ||

ನಮ್ಮ ತಾಯಿ ಭೂಮಿ ತಾಯಿ
ಎಲ್ಲ ಕೊಡುವ ಧಾತ್ರಿಯು |
ಪರಮ ದಯಾಳು ನಮ್ಮ ತಂದೆ
ಸಕಲ ದೇವರೊಡೆಯನು ||

ದುರಾಸೆಯ ಅಶ್ವಕೆ
ಜೀನನು ಬಿಗಿಯುತ |
ಬಾಳುನೀ ದಯೆ ಕರುಣೆ
ಪ್ರೀತಿಯ ತೋರುತ ||

ನಿನ್ನಂತೆಯೇ ಪರರ ಕಾಂಬ
ದೃಷ್ಟಿಯದು ದಿವ್ಯವು |
ಆಗಲೇ ಸಾಧ್ಯ ಜಗದಿ
ಪ್ರತಿಯೊಬ್ಬರ ಶ್ರೇಯವು ||

ಜುಲೈ 8, 2010

ಹೇಗೆ ನಡೆಯುತ್ತಿದೆ ಜೀವನ ?

Filed under: Uncategorized — saagari @ 3:01 ಅಪರಾಹ್ನ
ನಾನು ಯಾರನ್ನಾದರು “ಹೇಗೆ ನಡೆಯುತ್ತಿದೆ ಜೀವನ ?” ಅಂತ ಕೇಳಿದರೆ, ಅವರು “ವಿಶೇಷವೇನಿಲ್ಲ ” ಎಂದಷ್ಟೇ ಹೇಳಿ ಮುಗಿಸಿಬಿಡುತ್ತಾರೆ. ಆದರೆ ದುರದೃಷ್ಟ ನೋಡಿ, ನನಗ್ಯಾಕೋ ಅವರಂತೆಯೇ ಹೇಳಿ ಮಾತು ಮುಗಿಸಲು ಬರುವುದಿಲ್ಲ. ನಾನು” ಚೆನ್ನಾಗಿದೆ, ಸಖತ್ತಾಗಿದೆ, ಚೆನ್ನಾಗಿಲ್ಲ, ಹೊಪ್ಲೆಸ್ಸಾಗಿದೆ” ಇವೆ ಮುಂತಾದ ಪದಗಳನ್ನ ಪ್ರಯೋಗಿಸಿಬಿಡುತ್ತೇನೆ. ಅವರು ನನ್ನನ್ನು ಮುಂದೆ ಮಾತಿಗೆಳೆಯುತ್ತಾರೆ. ಅದು ಎಲ್ಲೆಲ್ಲೋ ಸಾಗುತ್ತದೆ. ಆಮೇಲೆ ನನಗೆ ಬರುವ ಬಿರುದು “ಸಿಕ್ಕಾಪಟ್ಟೆ ಮಾತಾಡ್ತಾಳೆ” ಈ ಹುಡುಗಿ !ತಪ್ಪು ನನ್ನದಾ ? ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವುದೇ ತಪ್ಪಾ ? ಅಥವಾ ನಾವು ” ಜೀವನದಲ್ಲಿ ಏನು ನಡೆಯುತ್ತಿಲ್ಲ ” ಅಂದು ಹೇಳಿ ಪ್ರಶ್ನೆಗೆ, ಮಾತಿಗೆ, ಚರ್ಚೆಗೆ ತೆರೆಯೆಳೆಯುತ್ತಿದ್ದೆವಾ ?
ಅದಕ್ಕೆ , ಜನರ ಈ ಧೋರಣೆಯನ್ನು ಬಹಳ ಸರ್ತಿ ನೋಡಿ, ಕೇಳಿ ನಾನು ಇತ್ತೀಚಿಗೆ ಜನರೊಟ್ಟಿಗೆ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೇನೆ. ಚರ್ಚೆಗೆ ಇಳಿಯುವುದು, ಅದು ವಾದವಾಗುವುದು, ನಂತರ ಜಗಳ ಆಡುವುದು ಇವೆಲ್ಲಾ ಯಾಕೆ ಅಂತ ನಾನು ಸಹ ಅವರಂತೆಯೇ ಸುಮ್ಮನೆ ಇದ್ದುಬಿಡಲು ನಿರ್ಧರಿಸಿದ್ದೇನೆ. ಆದರು ನನ್ನೊಳಗೆ ಉಧ್ಭವಿಸಿರುವ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಮ್ಮ ಜೀವನದಲ್ಲಿ ದಿನಾಗಲು ಏನು ವಿಶೇಷ ನಡೆಯುವುದಿಲ್ಲವಾ?ಅಥವಾ ವಿಶೇಷ ನಡೆದರೂ ನಾವು  ಅದನ್ನೂಸಹ  ಹಂಚಿಕೊಳ್ಳದಷ್ಟು ಸ್ವಾರ್ಥಿಗಳಾಗಿದ್ದೆವಾ ?  ನಮ್ಮ ಅನುಭವ ಬೇರೊಬ್ಬರಿಗೆ ದಾರಿದೀಪವಲ್ಲವೆ  ? ನಮ್ಮ ಜೀವನದಲ್ಲಿ   ಜರುಗುವ ಅತಿ ಸಾಮಾನ್ಯ  ಸಂಗತಿ ಬೇರೊಬ್ಬರಿಗೆ ವಿಶೇಷವಾಗಿರಬಹುದು, ಅಥವಾ ನಮ್ಮ ಜೀವನದ ಅತ್ಯಂತ ವಿಶೇಷ ಸಂಗತಿ ಬೇರೊಬ್ಬರಿಗೆ ಅತಿಸಾಮಾನ್ಯ ಸಂಗತಿಯಾಗಿರಬಹುದು. ದೃಷ್ಟಿಯ ಈ ವೈಪರೀತ್ಯಗಳನ್ನು ಮೀರಿದ ಒಂದು ವಿಭಿನ್ನ, ವಿಶಿಷ್ಟ ದೃಷ್ಟಿಕೋನವನ್ನು ಪಡೆಯಲು ಈ ಅನುಭವ ಹಂಚಿಕೆ ಬಹುಮುಖ್ಯ ಅಲ್ಲವೇ ?
ಮೊದಮೊದಲು ನಮ್ಮೊಟ್ಟಿಗೆ ಸುಖ ದುಃಖ ಹಂಚಿಕೊಳ್ಳಲು ಸ್ನೇಹಿತರು ನಮ್ಮ ಮನೆಯ ಸುತ್ತ ಮುತ್ತ, ಶಾಲೆಗಳಲ್ಲಿ ಇರುತ್ತಿದ್ದರು. ನಂತರ ನಾವು ನೆರೆಹೊರೆಯವರನ್ನೇ ಮಾತನಾಡಿಸದಷ್ಟು ದೊಡ್ದವರಾಗಿಬಿಟ್ಟೆವು.
ಶಾಲೆಗಳಲ್ಲಿಯೂ ಬರುಬರುತ್ತಾ ಗೆಳೆತನ ನೋಟ್ಸಿಗಾಗಿಯೇ  ಮೀಸಲಾಗಿಹೋಯ್ತು.  ಇನ್ನು ಕಂಪ್ಯೂಟರ್ರು, ಅಂತರ್ಜಾಲ ಇವೆಲ್ಲಾ ಬಂದಮೇಲೆ ಕಣ್ಣಿಗೆ ಕಾಣದವರೆಲ್ಲಾ ಮನಸ್ಸಿಗೆ ಹತ್ತಿರವಾಗಲು ಪ್ರಾರಂಭಿಸಿದರು. ಮಾನಿಟರ್ರು ನಮ್ಮ ಮನದ ಕಿಟಕಿಯಾಯ್ತು.    ಭಾವನೆಗಳು ಅಕ್ಷರರೂಪ ತಾಳಲಾರಂಭಿಸಿದವು . ನಾವು ನಮ್ಮ ಖಾಸಗಿ ಡೈರಿಯನ್ನು ಅಂತರ್ಜಾಲದಲ್ಲಿ ಬರೆದಿಡುವಷ್ಟರಮಟ್ಟಿಗೆ ತಲುಪಿತು ನಮ್ಮ ಜೀವನ.
ಮುಖಕ್ಕೆ ಮುಖ ಕೊಟ್ಟು ಮಾತಾಡುವ ಸಂಪ್ರದಾಯ ಹೋಯ್ತು , ಫೋನ್ ಕಾಲ್ ಗಳು ಕಡಿಮೆಯಾಗತೊಡಗಿದವು.  ಆದರೆ ಬ್ಲಾಗುಗಳು ಮಾತ್ರ ಶ್ರೀಮಂತವಾಗತೊಡಗಿದವು . ನಮ್ಮ ಅಪ್ಪ ಅಮ್ಮನ ಜೊತೆ ಒಂದು ನಿಮಿಷಕ್ಕಿಂತ ಹೆಚ್ಚು ಮಾತಾಡದ ನಾವು ಕಾಣದವರ ಜೊತೆ ಘಂಟೆಗಟ್ಟಲೆ ಆರ್ಕುಟ್ಟು ಫೆಸ್ ಬುಕ್ಕುಗಳಲ್ಲಿ ಹರಟೆ ಕೊಚ್ಚೋದು ವಿಪರ್ಯಾಸವೋ, ವಿಶೇಷವೋ, ಇದನ್ನ ನಾವಿನ್ನು ಕಂಡುಹಿಡಿದುಕೊಳ್ಳಬೇಕಾಗಿದೆ  . ಇತ್ತೀಚಿಗೆ ಇದು ಬೇಜಾರಾಗಿಹೋಗಿದೆ.

 

ಇದೆಲ್ಲ ನೋಡಿ, ನನ್ನ ತಲೆ ಕೆಟ್ಟು ನಾನು ಕಂಗಾಲಾಗಿರುವುದು ನನ್ನ ಜೀವನದಲ್ಲಿ ನಡೆಯುತ್ತಿರುವ ಸಧ್ಯದ ವಿಶೇಷ . ಹಾಗಾಗಿ, ನಾನು ಈಗ ಮೌನವನ್ನಾಧರಿಸಿ, ಇದೆಲ್ಲಾ ಏನು ಹಿಂಗಾಗಿಹೋಯ್ತಲ್ಲ ಅಂತ ಕಾರಣ ಹುಡುಕುತ್ತಿದ್ದೇನೆ. ನನಗೆ ಪರಿಚಯವಿರುವ ಎಲ್ಲರು ಇತ್ತೀಚಿಗೆ ಮೌನವಾಗಿದ್ದಾರೆ. ಅವರು ಪ್ರಾಯಶಃ ಇದೆ ಅವಲೋಕನದಲ್ಲಿ ಮಗ್ನರಾಗಿರಬಹುದು. ಈಗ ನಾನು ಅವರ ತರಹವೇ ಮೌನದ ಮೊರೆಹೋಗುತ್ತಿದ್ದೇನೆ. ಇದು ಇವತ್ತಿನ,  ಈ ಕ್ಷಣದ  ವಿಶೇಷ.
ಇನ್ಮೇಂದ    ಯಾರಾದರೂ ನನ್ನನ್ನು  ಕುರಿತು  , ” ಏನ್ಸಮಾಚಾರ ?” ಅಂದರೆ ನನ್ನ ಉತ್ತರ ಮೌನ. ” ಹೇಗೆ ನಡೆಯುತ್ತಿದೆ ಜೀವನ ?” ಅಂತಂದರೆ ನನ್ನ ಉತ್ತರ ಮುಗುಳ್ನಗು ಅಷ್ಟೇ.

ಏಪ್ರಿಲ್ 13, 2010

ಜೀವನಕ್ಕೊಂದು reset,rewind ಮತ್ತು forward button ಇದ್ದಿದ್ದರೆ..?!

Filed under: ಜಸ್ಟ್ ಲೈಕ್ ದಟ್ — saagari @ 9:20 ಅಪರಾಹ್ನ

ಹೇಗಿರ್ತಿತ್ತು ಅಲ್ವಾ? just imagine  ಮಾಡ್ಕೊಳಿ ! ನಾವು ಮಾಡಿದ ತಪ್ಪುಗಳನ್ನೆಲ್ಲಾ erase ಮಾಡಿಬಿಡಬಹುದಿತ್ತು. ಕಹಿ ನೆನಪುಗಳನ್ನೆಲ್ಲಾ format  ಮಾಡಿಬಿಡಬಹುದಿತ್ತು. ಎದೆಭಾರವೇ ಇಲ್ಲದೇ, ಯಾವುದೇ ಖಾಯಿಲೆ ಕಸಾಲೆ ಕಾಡದೇ ಹಾಯಾಗಿ ನೂರಿನ್ನೂರು ವರ್ಷ ಬದುಕಬಹುದಿತ್ತು ! ರೆಸೆಟ್ ಬಟನ್ ಗೆ ಎಂಥಾ ಮಾಂತ್ರಿಕ ಶಕ್ತಿ ಇದೆ ಅಲ್ವಾ ?

ನಾವು ಚಿಕ್ಕವಯಸ್ಸಿನಲ್ಲಿ ಗಾಳಿಪಟ ಹಾರಿಸಿಲ್ಲಾ ಅಂತ ಇಟ್ಟುಕೊಳ್ಳಿ. ಈಗ ಮಕ್ಕಳು ಗಾಳಿಪಟ ಹಾರಿಸುವುದನ್ನ ನೋಡಿದಾಗ ನಾವೂ ಮಕ್ಕಳ ಹಾಗೆಯೇ ಗಾಳಿಪಟ ಹಾರಿಸಬೇಕೂ ಅನ್ಸತ್ತೆ ಅಲ್ವಾ ? ಆಗ  rewind ಬಟನ್ ನ ಒತ್ತಿ ನಾವೂ ಮಕ್ಕಳಾಗಿಹೋಗಬೇಕು. ಅವರೊಟ್ಟಿಗೆ ಗಾಳಿಪಟ ಹಾರಿಸಬೇಕು. ಆಮೇಲೆ ಮತ್ತೆ forward ಆಗಿ, ದೊಡ್ಡವರಾಗಿ ಸುಮ್ಮನೆ ರಸ್ತೆಯಲ್ಲಿ ನಡೆದುಕೊಂಡು ಹೋಗಿಬಿಡಬೇಕು. ಹೇಗಿದೆ ಐಡಿಯಾ ?

ಮನಃಕ್ಲೇಶಗಳಾಗುತ್ತವಲ್ಲಾ ಜೀವನದಲ್ಲಿ,ಆಗ ನಮಗೆ ರಿಸೆಟ್ ಬಟನ್ ನ ಹೆಚ್ಚು ಅವಶ್ಯಕತೆ ಇರತ್ತೆ. ಮನಸ್ಸಿನ್ನಿಂದ ಆ ವ್ಯಕ್ತಿಯನ್ನ, ಅವರೊಟ್ಟಿಗೆ ಕಳೆದ ಸಮಯದ ನೆನಪನ್ನ ಹಾಗೇ ಅಳಿಸಿಹಾಕಿಬಿಡಬೇಕು, ಯಾರದೇ ಮುಖ ಮುಲಾಜು ನೋಡದೇ. ಅಲ್ಲಿ ರಿವೈಂಡು ಫಾರ್ವರ್ಡು ಬಟನ್ ಗಳು disable  ಆಗಬೇಕು.  ಆ ನೆನಪುಗಳು ನಮ್ಮನ್ನೆಂದೂ ಕಾಡಬಾರದು. ಸವಿ ನೆನಪುಗಳಿಗೆ ಮಾತ್ರ ರಿವೈಂಡ್ ಇರಬೇಕು 🙂

ನೀವೇನೇ ಹೇಳಿ, ನೆನಪೊಂದು Slow poison. ನಿಧಾನಕ್ಕೆ ಇರಿಯುತ್ತಾ ಕೊಲ್ಲುವ ಚಾಕು ಅದು. ಅದರ ಇರಿತ ನಮಗೆ ಮಾತ್ರ ಅರಿವಾಗತ್ತೆ, ರಕ್ತಕಣ್ಣೀರು ಹರಿಯುತ್ತಲೇ ಇರುತ್ತದೆ.ಈ ಇರಿತಕ್ಕೆ ಮದ್ದಾಗಿ ಆ ಸೋ ಕಾಲ್ಡ್ ದೇವರು ಈ ಮೂವರು ಬಟನ್ ಗಳನ್ನು ಯಾಕೆ ದಯಪಾಲಿಸಲಿಲ್ಲ ? ಜೀವನಕ್ಕೆ ಪ್ಲೇ ಬಟನ್ ಮಾತ್ರ ಕೊಟ್ಟು ನಮಗೆ ಅನ್ಯಾಯ ಮಾಡಿಲ್ವಾ ದೇವರು ?

Love Failureಗಳಾದಾಗ ನಮ್ಮ ಮನಸ್ಸನ್ನೇ ಕಿತ್ತು ಬಿಸಾಕುವಷ್ಟು ಜಿಗುಪ್ಸೆ ಬಂದಿರತ್ತೆ. ಆಗ ರಿಸೆಟ್ ಬಟನ್ ಇದ್ರೆ ನಾವು ರಿಸೆಟ್ ಆಗಿ ಮುಂದಿನ ಜೀವನದ ಕಡೆಗೆ ಗಮನ ಹರಿಸಬಹುದಿತ್ತು. ದೇವದಾಸ್ ಪರಿಸ್ಥಿತಿ ಎಲ್ಲಾ ಬರಲ್ಲ. infact,  ದೇವದಾಸ್ ಗೆ ದೇವದಾಸ್ ಗತಿ ಬರ್ತಿರ್ಲಿಲ್ಲ !

ಪ್ರಾಣ ಸ್ನೇಹಿತೆಯರೊಂದಿಗೆ ಜಗಳ ಆದಾಗ ಆ ಜಗಳವನ್ನಷ್ಟೇ “‘delete selection” ಅಂತ ಒಂದೇ ಒಂದು ಬಟನ್ ಇಂದ ಅಷ್ಟೆಲ್ಲಾ ಕೋಪ , ಮಾತು ಕತೆ, ವಾದ,, ತರ್ಕ, ಕ್ಲೇಶ ಎಲ್ಲಾ ಒಟ್ಟಿಗೆ ಕಿತ್ತುಹಾಕಿಬಿಡುವಂತಿದ್ದರೆ….

ಜೀವನದ mp3 ಸದಾ ಕಾಲ ಒಳ್ಳೊಳ್ಳೆ ಹಾಡನ್ನೇ ಕೇಳಿಸುತ್ತಿರಬೇಕೆಂದರೆ ಈ ಬಟನ್ನುಗಳ ಅವಶ್ಯಕತೆ ಇದೆ ಅಲ್ವಾ ?

ಅಕ್ಟೋಬರ್ 12, 2009

ಹಳೆ ನೆನಪುಗಳ ಕಂತೆ ತೆಗೆದಾಗ..

Filed under: ಜಸ್ಟ್ ಲೈಕ್ ದಟ್ — saagari @ 7:14 ಅಪರಾಹ್ನ

“ಟೇಬಲ್ ಕ್ಲೀನ್ ಮಾಡದಿದ್ದರೆ ಮನೆಯಿಂದ ಓಡಿಸುತ್ತೇನೆ ” ಅನ್ನೋ ಅಮ್ಮಂದಿರ ಬೆದರಿಕೆ ಪ್ರಾಯಶಃ ಎಲ್ಲರ ಜೀವನದಲ್ಲೂ ಸಾಮಾನ್ಯವೆನಿಸುತ್ತದೆ. ಕೆಲವೊಮ್ಮೆ ಅಮ್ಮಂದಿರೇ ಕ್ಲೀನ್ ಮಾಡಲಿಕ್ಕೂ ಹೋಗಿರುತ್ತಾರೆ. ಅವರು ಕ್ಲೀನ್ ಮಾಡಿದರೆ ನಾವು ಬಚ್ಚಿಟ್ಟುಕೊಂಡ ವಸ್ತುಗಳೆಲ್ಲಾ ಹೊರಗೆಬಂದು, ” ಇದೆಲ್ಲಾ ಯಾಕೆ ಇಟ್ಟುಕೊಂಡಿದಿಯಾ ? ಸುಮ್ಮನೆ ಜಾಗ ಹಾಳುಮಾಡ್ತಿ” ಅಂತೆಲ್ಲಾ ಬೈದು, ಕೆಲ ಅತ್ಯಮೂಲ್ಯ ವಸ್ತುಗನ್ನು ನಿರ್ದಾಕ್ಷಿಣ್ಯವಾಗಿ ಕಸದಬುಟ್ಟಿಗೆ ರವಾನಿಸುತ್ತಾರಾದ್ದರಿಂದ ನಾವೇ ನಮ್ಮ ಟೇಬಲ್ಲು, ಕಪಾಟುಗಳನ್ನು ಶುದ್ಧಗೊಳಿಸಿಕೊಳ್ಳುವುದು ನಮ್ಮ ಜಾಣ್ಮೆಯನ್ನು ತೋರಿಸುತ್ತದೆ.

ನಿಜ ಹೇಳಬೇಕೆಂದರೆ ಅಮ್ಮಂದಿರಿಗೆ ಒಂದು ವಿಷಯ ಅರ್ಥವೇ ಆಗೊಲ್ಲ. ನಮ್ಮ ಟೇಬಲ್ಲು ಚೆನ್ನಾಗಿಲ್ಲದಿದ್ದರೇನೆ ನಮಗೆ ಬೇಕಾದ ವಸ್ತುಗಳು ಸಿಕ್ಕೋದು ! ನೀಟಾಗಿ, ಜೋಪಾನವಾಗಿ ವಸ್ತುಗಳನ್ನ ಇದ್ದಲ್ಲಿ ಇಟ್ಟುಬಿಡಿ, ಆಮೇಲೆ ನಿಮಗೆ ಬೇಕಾದಾಗ ಅವುಗಳು ಸಿಗುತ್ತವಾ ನೋಡಿ !

ಇದೇ ವಾದವನ್ನು ಮಂಡಿಸಿದೆ ನಾನು ನಮ್ಮಮ್ಮನ ಮುಂದೆ ಇವತ್ತು. ಅಮ್ಮ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿಬಿಟ್ಟರು ! ” ಇದೆಲ್ಲಾ ಸೋಮಾರಿತನದ ಲಕ್ಷಣ. ಮರ್ಯಾದೆಯಾಗಿ ಕ್ಲೀನ್ ಮಾಡಿಕೊಂಡರೆ ಸರಿ, ಇಲ್ಲಾಂದ್ರೆ  ನಿಜವಾಗಲು ಮನೆಯಿಂದ ಹೊರಗೇನೆ ಹೋಗ್ತಿ ನೀನು” ಅಂದದ್ದೇ ಸೂಟ್ಕೇಸ್ ಕೆಳಗಿಳಿಸಿದರು !

ಸೂಟ್ ಕೇಸ್ ನೋಡಿದ್ದೇ ನನಗೆ ಪುಕಪುಕಶುರುವಾಯ್ತು. ನಾನು  ಮನೆಬಿಟ್ಟು ಹೋಗೋದು, ಪಾರ್ಕಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಮಲಗೋದು…ಇವೆಲ್ಲ ಕಣ್ಣೆಂಬ ಸೆವೆಂಟಿ ಎಮೆಮ್ ಪರದೆಯ ಮೇಲೆ ಒಮ್ಮೆ ಬಂದು ಹೋದವು. ಯಾಕಿವೆಲ್ಲಾ ಸುಮ್ಮನೆ ಅಂತ ನನ್ನ ಟೇಬಲ್ಲನ್ನು ಕ್ಲೀನ್ ಮಾಡಲು ಟೊಂಕ ಕಟ್ಟಿ ನಿಂತೆ.

ಹೇಳಿಕೊಳ್ಳುವಂಥಾ ಕಷ್ಟಕರವಾದ ಮತ್ತು  ದೊಡ್ಡ ಕೆಲಸವೇನಲ್ಲ ಎಂದುಕೊಂಡಿದ್ದ ನನ್ನ ಉತ್ತರಕುಮಾರನಂತಹ ಪೌರುಷ ಟೇಬಲ್ ಮುಂದೆ ಸಾಲದಾಯ್ತು. ಅದು ಏನೇನು ತುಂಬಿಸಿದ್ದೆ ನಾನು ಅದರ ಮೇಲೆ ! ಏನೆಲ್ಲ ತುಂಬಿಸಿಲ್ಲಾ ಅಂತ ಕೇಳಬೇಕು ನ್ಯಾಯವಾಗಿ ! ಹೋದ ವರ್ಷದ ಪ್ರಜಾವಾಣಿ ದೀಪಾವಾಳಿ ಕಥಾಸ್ಪರ್ಧೆಯ ಪೇಪರ್ ಕಟಿಂಗ್ ಇಂದ ಹಿಡಿದು ಮೊನ್ನೆ ನೆರೆ ಸಂತ್ರಸ್ಥರ ಪರಿಹಾರಧನಕ್ಕೆ ಕೊಟ್ಟ ಹಣಕ್ಕೆ ರಸೀತಿಯವರೆಗೂ ಎಲ್ಲಾ ಇದ್ದವು !

ಇದ್ದ ಹಾಳೆಗಳ ರಾಶಿಯಲ್ಲಿ ಯಾವ್ಯಾವುದನ್ನು ಬಿಸಾಕಲಿ ಅಂತ ತೀರ್ಮಾನಿಸುವುದರಲ್ಲಿ ನನ್ನ ಜೀವಮಾನವೇ ಕಳೆದುಹೋಗುತ್ತದೆ ಅನ್ನೋ ಅನುಮಾನ ನನಗೆ ಬರದಿರಲಿಲ್ಲ. ಅಮ್ಮ ಬೇರೆ ಎರಡು ಘಂಟೆಗಳ ಗಡುವು ಕೊಟ್ಟಿದ್ದರು. ನಾನು ಏನು ಮಾಡಲಿ ಅಂತ ಯೋಚನೆ ಮಾಡುವಷ್ಟರಲ್ಲಿಯೇ ಅರ್ಧಘಂಟೆ ಆಗಿಹೋಗಿತ್ತು. ” ಎರಡು ಘಂಟೆಯಲಲ್ಲಿ ಖಂಡಿತಾ ಕ್ಲೀನ್ ಮಾಡಕ್ಕೆ ಆಗಲ್ಲ ” ಅಂತ ಗೊಣಗಿದೆ. ಅಮ್ಮ  ಅಷ್ಟೇ ನಿರ್ಲಿಪ್ತರಾಗಿ ” ಕ್ಲೀನ್ ಆಗೋವರ್ಗು ಊಟ ಇಲ್ಲ” ಅಂದುಬಿಟ್ರು !

ಉದರನಿಮಿತ್ತಂ ಬಹುಕೃತವೇಷಂ ಅಂತ ಸುಮ್ಮನೇ ಬರೆದಿಲ್ಲ ಹಿರಿಯರು ಅಂದುಕೊಂಡೆ.

ರಾಶಿ ಬಿದ್ದಿದ್ದ ಒಂದೊಂದೆ ಹಾಳೆ ಓದುತ್ತಾ ಹೋದೆ. “ಇದಿರಲಿ, ಇದು ಬೇಕಾಗತ್ತೆ, ಯಾವುದಕ್ಕೂ ಇರಲಿ, ಹಾಳಾಗೋಗ್ಲಿ ಹತ್ತರ ಮಧ್ಯ ಹನ್ನೊಂದು” ಅಂತ ಇಟ್ಟುಕೊಂಡಿದ್ದ ಹಾಳೆಗಳನ್ನೆಲ್ಲಾ ಮುಖಾ ಮುಲಾಜಿಲ್ಲದೇ ಬಿಸಾಕಿದೆ. ಮತ್ತೆ ಅದರ ಕಡೆ  ನೋಡಿದರೆ ಎಲ್ಲಿ ಮನಸ್ಸು ಬದಲಾಯಿಸಿಬಿಡುತ್ತೀನೋ ಅಂತ ಕವರ್ ಒಳಗೆ ಹರಿದು ಹರಿದು ಹಾಕಿದೆ. ಅದೂ ಕಣ್ಣು ಮುಚ್ಚಿಕೊಂಡು !ರೀಫಿಲ್ ಇಲ್ಲದ, ರೀಫಿಲ್ ಸಿಗದ ಪೆನ್ನುಗಳನ್ನು ನಿರ್ದಾಕ್ಷಿಣ್ಯವಾಗಿ ಬಿಸಾಕಬೇಕಾಯ್ತು. ಮುದ್ದು ಮುದ್ದಾದ,ಚೆನ್ನಾಗಿ ಬರೆಯುತ್ತಿದ್ದ ಪೆನ್ನುಗಳಿದ್ದವಾದರೂ ಅವೆಲ್ಲ ” use and throw ”  ಆಗಿದ್ದವು. ಉಪಯೋಗಿಸಿದ್ದೆ, ಬಿಸಾಡಿರಲಿಲ್ಲ, ಅದನ್ನೂ ಮಾಡಿ ಆಯ್ತು.

ನನ್ನ ಟೇಬಲ್  ಕ್ಲೀನಾಯ್ತು.ಇನ್ನು ಕಪಾಟಿನ  ಸರದಿ. ಮೊದಲನೆಯ  ವಿಭಾಗದಲ್ಲಿ ಕೆಲ ಮುಖ್ಯ ದಾಖಲೆಗಳ ಜೆರಾಕ್ಸುಗಳು ಅನಾಥವಾಗಿ ಬಿದ್ದಿದ್ದವು. ಇದ್ದ ದಾಖಲೆಗಳನ್ನೇ ಇಲ್ಲವೆಂದುಕೊಂದು ಹಲವಾರು ಬಾರಿ ಜೆರಾಕ್ಸ್ ಮಾಡಿಸಿದ ನನ್ನ ಅವಸರಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಎಲ್ಲವನ್ನು ಒಂದು ಫೈಲಿನಲ್ಲಿ ಹಾಕಿಟ್ಟು, ಯಾವ್ಯಾವ ದಾಖಲೆ ಎಷ್ಟೆಷ್ಟು ಪ್ರತಿಗಳಿವೆ ಎಂದು ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡೆ. ಆಮೇಲೆ ಈಡೈರಿಯನ್ನು ಹುಡುಕಬೇಕಾದ ಪರಿಸ್ಥಿತಿ ಬರಬಹುದು ಅನ್ನೋದು ನನಗೆ ಆಗ ಹೊಳೆದಿರಲಿಲ್ಲ.

ಎರಡನೆಯ ಕಪಾಟಿನಲ್ಲಿ ನನ್ನ ನೆನಪಿನ ಕಂತೆಗಳಿದ್ದವು. ಹೈ ಸ್ಕೂಲಿನ ಮೊದಲನೆಯ ದಿನ ಸಿಕ್ಕ ಗೆಳತಿಯ “books to buy” ಹಾಳೆ, ನವಿಲುಗರಿ, ಫೇವರೈಟ್ ಟೀಚರ್ ಕೊಟ್ಟ ಪೆನ್ನು, ಬಹಳ ಕಷ್ಟಪಟ್ಟು ಆರಿಸಿ ಹುಡುಕಿ ಜತನದಿಂದ ಕಾಪಾಡಿದ್ದ ಪೆನ್ ಪೆನ್ಸಿಲ್ಲು,…ಇವೆಲ್ಲವನ್ನು ಹೊರಹಾಕಲು ನನಗೆ ಮನಸ್ಸೇ ಬರಲಿಲ್ಲ. ನಾನು ನನ್ನ ಆಪ್ತಗೆಳತಿ ಆಡದ ಗಾಸಿಪ್ಪಿರಲಿಲ್ಲ, ಅರಿಯದ ಕೋಡ್ language ಇರಲಿಲ್ಲ ! ಅವೆಲ್ಲದರ ಒಂದೊಂದು ಪ್ರತಿ ಇಟ್ಟುಕೊಳ್ಳಬೇಕೆನಿಸಿತ್ತು ನನಗೆ, ಆದರೆ ಅದೇಕೋ ಆಗಲಿಲ್ಲ. ಹುಡುಗರು ನನ್ನ ಪೆನ್ ಪೆನ್ಸಿಲ್ಲನ್ನು ಕದ್ದಾಗ ಅತ್ತಿದ್ದಂತೂ ಮರೆಯಲಾರೆ ! ಇಂಥಾ ನವಿರು ಭಾವನೆಗಳ , ಮರೆಯದ ನೆನಪುಗಳಭರಪೂರ ರಾಶಿ ಹೊತ್ತ ಆ ವಸ್ತುಗಳನ್ನು ಬಿಸಾಕಲು ಆಗುತ್ತದೆಯೇ ? ಹೇಗೆ ಜೋಪಾನವಾಗಿ ತೆಗೆದೆನೋ ಹಾಗೆಯೇ ಮತ್ತೆ ಅಲ್ಲಿಯೇ ಇರಿಸಿದೆ, ಅಮ್ಮ ಬೈದರೂ ಸರಿ, ಅದನ್ನು ಬಿಸಾಡುವುದಿಲ್ಲ ಎಂದು ಸಾವಿರದ ನೂರ ಹನ್ನೊಂದನೆಯ ಸರ್ತಿ ಪ್ರತಿಜ್ಞೆ ಮಾಡಿ.

ಇನ್ನು ಕಾಲೇಜಿನ ನೆನಪುಗಳಿದ್ದ ಕಪಾಟಿನ ವಿಭಾಗವನ್ನು ತೆಗೆದಾಗ ಅವೆಲ್ಲವನ್ನು ಅರೆಕ್ಷಣದಲ್ಲಿ ನಿರ್ದಾಕ್ಷಿಣ್ಯವಾಗಿ ಬಿಸಾಡಿಬಿಟ್ಟೆ. ಕಾಲೇಜಿನಲ್ಲಿ ಯಾಕೋ ಎಲ್ಲರೂ ಬರೀ ಕಾರ್ಯವಾಸಿಗಳು, ಭಾವನಾಶೂನ್ಯರೇ ಸಿಕ್ಕರು ನನಗೆ ಸ್ನೇಹಿತೆಯರಾಗಿ. ಅವರ ನೆನಪುಗಳನ್ನು ಹೊಂದದಿರುವುದೇ ಸರಿಯೆನಿಸಿತು. ಮನಸ್ಸು ಇಂಥವುಗಳನ್ನೆಲ್ಲಾ ಸುಲಭಕ್ಕೆ ಮರೆಯುವುದಿಲ್ಲವಾದರೂ, ಯಾರೋ ಸಿಕ್ಕಾಗ, “ಅವಳು ಹೇಗಿದ್ದಾಳೆ ? ಇವಳು ಹೇಗಿದ್ದಾಳೆ ? ಅವಳ ಮದುವೆಗೆ ನೀನ್ಯಾಕೆ ಬರಲಿಲ್ಲ ?” ಅಂತೆಲ್ಲಾ ಕೇಳಿ ನೆನಪಿಸಿದಾಗ ” ಗೊತ್ತಿಲ್ಲ” ಅಂದು ತಪ್ಪಿಸಿಕೊಳ್ಳುವುದು ಸುಲಭ. ಆದರೇ ಈ ನೆನಪಿನ ನೇಣುಹಗ್ಗದ ನಿಧಾನದ ಜಗ್ಗುವುಕೆಯನ್ನು ಏಗುವುದು ಕಷ್ಟ. ನನ್ನನ್ನೇ ಸಾಯಿಸುವ ಶಕ್ತಿಯುಳ್ಳ ನೆನಪನ್ನು ನಾನು ಸಾಯಿಸಿ ಬದುಕುವುದು ಆ ಕ್ಷಣದ ಅನಿವಾರ್ಯತೆಯಾಯ್ತು ನನಗೆ.ಸ್ಲಾಂ ಬುಕ್ಕುಗಳನ್ನ  ತೂಕಕ್ಕೆ ಇಟ್ಟೆ, ಯೋಗರಾಜ ಭಟ್ಟರಿಂದ ಪ್ರೇರಿತಳಾಗಿ. ಫೋಟೋಗಳನ್ನ ಸುಟ್ಟು ಹಾಕಿದೆ, ಕರೀನಾಳ ಪ್ರಭಾವದಿಂದ.

ಹಳೇ ನೆನಪುಗಳ ಕಂತೆ ತೆಗೆದಾಗಲೆಲ್ಲ ಮನಸ್ಸೆಂಬ ಹುಚ್ಚುಕುದುರೆಗೆ ಹುಚ್ಚು ಹೆಚ್ಚಾಗುತ್ತದೆ ! ಲಗಾಮು ಹಾಕುವುದು ಸುಲಭದ ಮಾತಲ್ಲ. ಹೀಗೇ  ಕಪಾಟನ್ನು ಕ್ಲೀನ್ ಮಾಡುತ್ತಿದ್ದಾಗ  ನಾಲ್ಕು ತಾಸು ಕಳೆದಿದ್ದು ಗೊತ್ತೇ ಆಗಿರಲಿಲ್ಲ !  ಅಮ್ಮ ಅನ್ನವನ್ನು  ತಟ್ಟೆಯಲ್ಲಿ ತಂದಿಟ್ಟು, ” ಅನ್ನ ತಿನ್ನು ಮೊದಲು ! ಆಮೇಲೆ ಮುಂಡುವರೆಸು ನಿನ್ನ ಶ್ರಮದಾನ !  ಎಲ್ಲ ಕ್ಲೀನಾದಮೇಲೆ ಬಿಸಾಕೋದೆಲ್ಲವನ್ನ ಆ ಸೂಟ್ ಕೇಸಿನಲ್ಲಿ ಹಾಕಿಡು, ಅದರ ಸಮೇತ ನಾಳೆ ಹಳೇ ಪೇಪರ್ ನವನಿಗೆ ಕೊಡೋಣಂತೆ ! ” ಅಂದು ಹೊರಟರು. ಆಮೇಲೆ ನಾನು ಮಾಡಿದ ಕೆಲಸಗಳನ್ನೆಲ್ಲಾ ಟಿಕ್ ಮಾಡಲು ಡೈರಿ ಹುಡುಕಿದೆ, ಮತ್ತೆ ನಾಪತ್ತೆ ! ಕ್ಲೀನ್ ಮಾಡಿದ್ದರ ಪರಿಣಾಮವಾಗಿ ನಾನು ಡೈರಿಯನ್ನು ಎಲ್ಲೋ ಇಟ್ಟಿದ್ದೆ. ಹುಡುಕಲು ಹೋಗಿ ಮತ್ತೆ ಟೇಬಲ್ ಗಲೀಜಾಯ್ತು ! ಆಮೇಲೆಲ್ಲೋ ಸಿಕ್ಕಿತು. ಅದನ್ನ ಬೇರೆಕಡೆ ಇಟ್ಟು, ಮತ್ತೆ ಎಲ್ಲ ಸರಿಮಾಡುತ್ತಾ ಕೂತೆ. ಆರು ತಾಸಿನ, ಅರ್ಧ ಘಂಟೆ ಲಂಚ್ ಬ್ರೇಕಿನ ನನ್ನ ಟೇಬಲ್ ಮತ್ತು ಕಪಾಟು ಸ್ವಚ್ಛತಾ ಅಭಿಯಾನ ಸಾಂಗವಾಗಿ ನೆರವೇರಿತ್ತು.

ಕ್ಲೀನ್ ಆದ ಮೇಲೂ ನನಗೆ  ನೆನಪುಗಳು ಕಾಡುತ್ತಿದ್ದವು. ವಸ್ತುಗಳನ್ನು ನಾಶಮಾಡಿಯಾಗಿತ್ತು. ಆದರೆ ಕೆಟ್ಟ, ಕಾಡುವ ನೆನಪನ್ನೆಲ್ಲಾ ಸೂಟ್ ಕೇಸ್ ನಲ್ಲಿ ಹಾಕಿಟ್ಟು ಬಿಸಾಕುವಂತಿದ್ದರೆ ಎಷ್ಟು ಚೆಂದ ಇರ್ತಿತ್ತು ಅಲ್ವಾ ?

ಜುಲೈ 13, 2009

Filed under: Uncategorized — saagari @ 4:53 ಅಪರಾಹ್ನ

ಕರ್ನಾಟಕದಲ್ಲಿ ಜನಪದ ಸಂಗೀತದಷ್ಟೇ ಪ್ರಸಿದ್ಧವಾಗಿರುವುದು ಗಮಕ ಕಲೆ ಮತ್ತು ಗಮಕ ಶೈಲಿಯ ಗಾಯನ. ಗಮಕ ಎಂದ ತಕ್ಷಣ ಎಲ್ಲರಿಗು ನೆನಪಾಗುವುದು ಕುಮಾರವ್ಯಾಸನ “ಕರ್ನಾಟ ಭಾರತ ಕಥಾ ಮಂಜರಿ “ಯ ವಾಚನ ಮತ್ತು ವ್ಯಾಖ್ಯಾನ. ಕುಮಾರವ್ಯಾಸನ ಕಾವ್ಯ ಮಾತ್ರವಲ್ಲದೆ, ಲಕ್ಷ್ಮೀಶನ ಜೈಮಿನಿ ಭಾರತ, ತೊರವೆ ರಾಮಾಯಣ ಮುಂತಾದ ಕಾವ್ಯಗಳು ಕೂಡ ಪ್ರಚಲಿತವಾಗಿವೆ. ನನ್ನ ಸ್ನೇಹಿತರು ಸ್ಥಾಪಿಸಿರುವ ಪ್ರಣತಿ ಸಂಸ್ಥೆಯು [www.pranati.in]ಹೊಸ ಪ್ರಯೋಗಗಳಿಗೆ ಹೆಸರಾಗಿದೆ ಬಾರಿ ಪ್ರಣತಿಯು ಗಮಕ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಾಚನದ ಭಾಗ ರಾಷ್ಟ್ರಕವಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕಾವ್ಯದ “ಶಬರಿಗಾದನು ಅತಿಥಿ ದಾಶರಥಿ”. ಜುಲೈ ಹದಿನೆಂಟು ಸಾಯಂಕಾಲ ಐದು ಘಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ನೀವೆಲ್ಲರೂ ಅತಿಥಿಗಳಾಗಿ ಆಗಮಿಸಿ ಗಮಕ ವಾಚನದ ಆತಿಥ್ಯವನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.

gamaka_sudhaa_dhaare

ಏಪ್ರಿಲ್ 13, 2009

ಶಾಯಿ ಅಳಿಯುವುದೇ ?

Filed under: kavana — saagari @ 10:46 ಅಪರಾಹ್ನ

ಮನಸ್ಸು ಬಿಳಿ ಹಾಳೆ ನಿಜ
ಇಲ್ಲವೆನ್ನರು ಯಾರೂ
ಹಾಳೆ ಮೇಲೆ ಬಿದ್ದ ಶಾಯಿಯ
ಅಳಿಸಲಾಗದು ಕಾಲವೂ!

ಈ ಹಾಳೆಯ ಮೇಲೆ ಬರಿಯ
ಕಹಿ ನೆನಪಿನದೆ ದಾಂಧಲೆ
ಕಾಣದೇಕೊ ಒಂದಾದರೂ
ಸವಿನೆನಪಿನ ದಾಖಲೆ !

ನೋವ ನಲಿವ ನಗುವ ಅಳುವ
ಒಂದೇ ಶಾಯಿ ಬರೆಯಿತು
ಸುಖವು ಮಾತ್ರ ಹಾಳೆಯಿಂದ
ಹೇಗೋ ಆವಿಯಾಯಿತು !

ಕಲೆಯು ಕಾಣದಿರಬಹುದು
ಮಾಸಿದಂತೆ ತೋರಬಹುದು
ಆದರೆ ಸುಪ್ತ ಜ್ವಾಲಾಮುಖಿಯದು
ಎಂದೋ ಭುಗಿಲೇಳಬಹುದು.

ಕಾಲ ವಾಸಿ ಮಾಳ್ಪುದಂತೆ
ಮನಸಿಗಾದ ಗಾಯವ
ಶಾಯಿಯಿಂದ ಆದ ಗುರುತ
ಅಳಿಸಲದಕೆ ಸಾಧ್ಯವಾ ?

*****************************

ಸುಮ್ನೆ…ಸೆಂಟಿಮೆಂಟಲ್ ಫೀಲ್ ಇರ್ಲಿ ಅಂತ  ಒಂದು ಕವನ ಬರೆಯಕ್ಕೆ ಟ್ರೈ ಮಾಡಿದೆ ಅಷ್ಟೇ..ನಿಜ ಅಲ್ಲ ಏನಲ್ಲ.   🙂

ಮಾರ್ಚ್ 18, 2009

ಆತ್ಮಹತ್ಯೆ-ಭಾಗ ೨

Filed under: lalita prabandha — saagari @ 10:53 ಅಪರಾಹ್ನ

ಇನ್ನೇನು ಬಾವಿಯೊಳಗೆ ಬೀಳಬೇಕಿತ್ತು ನಾನು…ನನ್ನ ಕೈ ಹಿಡಿದು ಹಿಂದಕ್ಕೆ ಯಾರೋ ಎಳೆದ ಹಾಗಾಯ್ತು. ನಾನೋ…ದೊಡ್ಡ ಮನುಷ್ಯಳು…ಬಾವಿಯನ್ನು ದಿಟ್ಟಿಸಿ ನೋಡಲು ಭಯವಾಗಿ ಕಣ್ಣನ್ನು ಮುಚ್ಚಿಬಿಟ್ಟಿದ್ದೆ. ಹಿಂದೆ ಇಂದ ಬಂದ ಆಗಂತುಕ ನನ್ನನ್ನು ಎಳೆದಿದ್ದೇ ತಡ, ಎಲ್ಲಿ ಬೀಳುತ್ತಿದ್ದೇನೆ ಎಂಬ ಅರಿವಿಲ್ಲದೇ, ಏನಾಗುತ್ತಿದೆ ಎಂಬ ಸುಳಿವಿಲ್ಲದೇ, ನನ್ನನ್ನು ಹಿಡಿದೆಳೆದ ಕಡೆ ಬಿದ್ದೆ. ನೀರಲ್ಲಿ ಬಿದ್ದಾಗ ಬರುವ ಶಬ್ದ ಬರಲಿಲ್ಲವಾದ್ದರಿಂದ ನೆಲದ ಮೇಲೆ ಬಿದ್ದಿರುವೆ ಎಂದು ನಾನು ಬಿದ್ದ ಮೇಲೆ ಗೊತ್ತಾಯ್ತು. ಹಾಗೆ ಬಿದ್ದರೂ ತಲೆಗೆ ಪೆಟ್ಟು ಬೀಳದ ಹಾಗೆ ಬಿದ್ದೆ…ನನ್ನ ದುರದೃಷ್ಟ, ಹಾಗೂ ನಾನು ಸಾಯಲಿಲ್ಲ !

ನನ್ನ ಕರ್ಮವನ್ನು ಮನಸಾರೆ ಬೈದುಕೊಳ್ಳುತ್ತಾ ಮೆಲ್ಲಗೆ ಕಣ್ಣು ಬಿಟ್ಟೆ. ನನ್ನನ್ನು ಸಾಯುವುದಕ್ಕೆ ಬಿಡದ ಆ ಪಾಪಾತ್ಮ ಯಾರು ಅಂತ ಸುತ್ತೆಲ್ಲಾ ಒಮ್ಮೆ ನೋಡಿದೆ. ಒಂದೈದು ಅಡಿ ದೂರದಲ್ಲಿ ಒಬ್ಬ ಯುವಕ ನಿಂತಿದ್ದ. ನನಗೆ ಒಮ್ಮೆಲೆ ಅನುಮಾನ ಶುರುವಾಯ್ತು. ವಯಸ್ಸು ಇಪ್ಪತ್ತಾರು ಮೀರಿರಲಿಕ್ಕಿಲ್ಲ..ಇವನೊಬ್ಬನೇ ಇಲ್ಲ್ಯಾಕೆ ಬಂದ ? ನೋಡಕ್ಕೆ ಬೇರೆ ಚೆನ್ನಾಗಿದ್ದಾನೆ. ನನ್ನ ಹಿಂದೆಯೇ ಯಾಕೆ ಬಂದ ? ನನ್ನನ್ನು ಉಳಿಸಿ ಇವನು ಹೀರೋ ಆಗಬೇಕಂತ ನಿರ್ಧರಿಸಿದ್ದಾನಾ ?ಆಥವಾ ಇವನು ಅಂಡರ್ವರ್ಲ್ಡ್ ಕಡೆಯವನಾ ? ಈ   ಪ್ರಶ್ನೆಗಳ ಮಧ್ಯದಲ್ಲಿ ನಾನು ಸಾಯಲು ಬಂದಿದ್ದೇನೆ ಅನ್ನೋದು ಮರೆತೇ ಹೋಗಿತ್ತು ನನಗೆ…ಅವನು ಮಾತನಾಡಿಸುವವರೆಗೂ !

“ಏನ್ ಮೇಡಮ್…ಕಣ್ಣು ಕಾಣಲ್ವಾ ನಿಮಗೆ ? ಬೋರ್ಡ್ ಹಾಕಿದ್ದೀವಿ ಅಲ್ಲಿ…ಕಾಣಲ್ಲ ? ಅಲ್ಲಿ ಬಾವಿಯ ಸ್ವಲ್ಪ ಕೆಳಗೆ ಗ್ರಿಲ್ ಹಾಕಿ ಮುಚ್ಚಿಲ್ಲ ? ಕಣ್ಮುಚ್ಕೊಂಡ್ ಸಾಯ್ತಾರೆ ! ಇಲ್ಲಿ ಬಿದ್ದರೆ ಬರಿ ಮೂಳೆ ಮುರಿಯತ್ತೆ ಹೊರತು ನಿಮ್ಮ ಪ್ರಾಣ ಹೋಗಲ್ಲ, ತಿಳ್ಕೊಳಿ. ಆಮೇಲೆ ಕಾಪಾಡಿ ಕಾಪಾಡಿ ಅಂತ ಕಿರುಚಿಕೊಳ್ಳೂತ್ತೀರಾ ಬೇರೆ ! ನಾವ್ ಬಂದು..ನಿಮ್ಮನ್ನ ಮೇಲಕ್ಕೆ ಎತ್ತಬೇಕು ! ಏನ್ ಕರ್ಮ !” ಅಂದ.

ನನಗಂತೂ ಸಿಕ್ಕಾಪಟ್ಟೆ ಕೋಪ ಬಂತು. ಅವನಷ್ಟೇ ಎತ್ತರದ ದನಿಯಲ್ಲಿ ನಾನು ಉತ್ತರಿಸಿದೆ ” ನಿಮ್ಮನ್ನ ಕಾಪಾಡಿ ಅಂತ ಕೇಳಿದೆನೇನ್ರಿ ನಾನು ? ಹಾಂ ? ಬಿದ್ದು ಉಪವಾಸ ಸಾಯ್ತಿದ್ದೆ ಹೊರತು ನಿಮ್ಮನ್ನು ಕಾಪಾಡಿ ಅಂತ ಕೇಳ್ತಿರ್ಲಿಲ್ಲ…ಇದನ್ನ ನೀವೂ ತಿಳ್ಕೊಳೀ ! ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಸಾಯಣಾ ಅಂತ ಬಂದ್ರೆ…ನೀವು ನನ್ನ ಬದುಕಿಸಿ ಹೀರೋ ಆಗ್ಬೇಕೂ ಅಂತ ಇದ್ದೀರಾ ? ಅದೂ ಅಲ್ದೇ…ಸಾಯಕ್ಕೆ ಅಂತ ಬಂದಿರೋರ್ಗೆ ವರದ ಹಾಗೆ ಈ ಪಾಳು ಬಾವಿ ಇದ್ರೆ, ಇದನ್ನ renovate ಮಾಡ್ತಿದ್ದೀರಲ್ಲ..ಬುದ್ಧಿ ಇದ್ಯೆನ್ರಿ ನಿಮಗೆ ? ಎಲ್ಲಿ ಸಾಯ್ಬೇಕ್ ಮತ್ತೆ ನಾವು ?” ಹತಾಶಳಾಗಿ ಕೇಳಿದೆ.

“ನೀವು ನಿಜ್ವಾಗ್ಲು ಸೀರಿಯಸ್ಸಾಗಿ ಸಾಯ್ಬೇಕೂ ಅಂತ ಇದ್ದೀರಾ ?”

“ಇನ್ನೇನು ಇದೇನು ಆಟ ನಾ ? start , end, restart ಅಂತೆಲ್ಲಾ ಬಟನ್ ಒತ್ತಿಕೊಂಡು ಇರಕ್ಕೆ ?ಅಥವಾ ಇದೇನು ನಾಟಕ ನಾ? ಫಿಲಮ್ಮಾ ? rehearsal ಒಂದು ಸರ್ತಿ…take ಒಂದ್ಸರ್ತಿ…ಜೋಕ್ ಒಂದ್ ಸರ್ತಿ…ಸೀರಿಯಸ್ ಒಂದ್ ಸರ್ತಿ ಅಂತೆಲ್ಲಾ ಆಡಕ್ಕೆ ?” ಸ್ವಲ್ಪ ಜೋರಾಗಿಯ ಹೇಳಿದೆ.

“ನಿಮಗೆ ನಿಜವಾಗೂ ಸಾಯಕ್ಕೆ ಇಷ್ಟ ಇದ್ದರೆ ನನ್ನ ಜೊತೆ ಬನ್ನಿ.”

“ನಾನು ಬರಲ್ಲ.”

“ಯಾಕೆ ಮೇಡಮ್ ? ನನ್ನನ್ನು ಧೈರ್ಯವಾಗಿ ನಂಬಿ. ನಾವು ಸಾಯುವವರನ್ನು ತಡೆಯುವವರಲ್ಲ…ಅವರಿಗೆ ಸರಿಯಾಗಿ ಸಾಯುವ ಮಾರ್ಗ ತೋರುವಂಥವರು” ಅಂದ.

“ಸರಿಯಾಗಿ ಸಾಯುವ” ಅನ್ನೋ ಪದವನ್ನ ಅವನು ಒತ್ತಿ ಹೇಳಿದ್ರಿಂದ ನನ್ನ ಅನುಮಾನ ಕಡಿಮೆಯಾಗುವ ಬದಲು ಇನ್ನಷ್ಟು ಜಾಸ್ತಿಯಾಯ್ತು.ಇವನು ಟೋಪಿ ಹಾಕುವ ಪಾರ್ಟಿಯೇ  ಅಂತ ನನಗೆ ನಂಬಿಕೆಯಾಯ್ತು. ಸತ್ತರೆ ನೀಟಾಗಿ ಸಾಯಬೇಕು. ಹೆಂಗೆಂಗೋ ಸತ್ತರೆ ಮನೆಯ ಮಾನ ಮರ್ಯಾದೆ ? ಮಾಡೋ ಕೆಲಸವನ್ನ ನೀಟಾಗಿ ಮಾಡಬೇಕು ಅಂತ ಶಾಲೆಯಲ್ಲಿ ಕಡ್ಡಿ ಏಟು ಕೊಟ್ಟು ಹೇಳಿಕೊಟ್ಟಿದ್ದರು. ಸರಿಯಾಗಿ ಸಾಯಿಸುತ್ತೇನೆ ಅಂದು ನನಗೆ ಮತ್ತು ಬರಿಸುವ ಔಷಧಿ ಕೊಟ್ಟುಬಿಟ್ಟರೆ ? ನನ್ನನ್ನು ಬೇರೆ ಎಲ್ಲೋ ಕರೆದುಕೊಂಡು ಹೋಗಿಬಿಟ್ಟರೆ ? ಏನೆಲ್ಲಾ ಭಯ ! ನಾನು -” ಏನೇ ಮಾಡಿದ್ರೂ ಬರಲ್ಲ” ಅಂದೆ. ಅದಕ್ಕೆ ಅವ,

” ಅಲ್ಲಿ ಮನೆ ಕಾಣ್ತಿದ್ಯಲ್ಲ, ಅಲ್ಲಿ ನಿಧಾನಕ್ಕೆ ಕೂತು, ಒಂದಷ್ಟ್ ತಿಂಡಿ ಊಟ  ತಿಂದು,ಶಕ್ತಿ ಬರಿಸಿಕೊಂಡು ಸಾಯ್ತಿರಂತೆ…ಸಾಯೋದ್ ಸಾಯ್ತಿರಾ..ನೀಟಾಗಿ ಸಾಯ್ರಿ.ನಾವು ಸಹಾಯ ಮಾಡ್ತಿವಿ”

“ಇಲ್ಲ…ನೀವೆ ಸಾಯ್ಸಿಬಿಡ್ತಿರಾ…ನಾನೇ ಸಾಯ್ಬೇಕು. ಇದು ಆತ್ಮಹತ್ಯೆ ಆಗ್ಬೇಕು…ಕೊಲೆಯಲ್ಲ”

“ಮೇಡಮ್…ನಿಮ್ಮನ್ನ  ಖಂಡಿತಾ ಕೊಲೆ ಮಾಡಲ್ಲ…ನೀವು ಆತ್ಮಹತ್ಯೆ ನೆ ಮಾಡ್ಕೊತೀರಂತೆ…ಪ್ಲೀಸ್ ಬನ್ನಿ..ಈ ಮುಚ್ಚಿದ ಬಾವಿಯ ಹಿಂದಿನ ರಹಸ್ಯ ತಿಳ್ಕೊಳ್ಳಕ್ಕಾದ್ರು ಬನ್ನಿ..”

ಇನ್ಯಾವ ಚಿದಂಬರ ರಹಸ್ಯ ಇರಬಹುದು ಇದು ಎಂದು ತಿಳಿಯಲು ನಾನು ಧೈರ್ಯ ಮಾಡಿ ಹೊರಟೆಬಿಟ್ಟೆ ಅವನ ಹಿಂದೆ.

ನಾನು ಸುಮ್ಮನೆ ಇದ್ದೆ. ಅವನೇ ಮಾತು ಶುರು ಮಾಡಿದ. “ಯಾಕ್ ಸಾಯ್ತಿದಿರಿ ?”

“ನಮ್ಮ ಮನೆಯರ ನನಗೆ ಸಿಕ್ಕಾಪಟ್ಟೆ ಅವಮಾನ ಮಾಡಿದ್ರು…ನಿನಗೆ ಏನೂ ಮಾಡಕ್ಕೆ ಬರಲ್ಲ…ನೀನು ನಿಷ್ಪ್ರಯೋಜಕಿ ಅಂತೆಲ್ಲಾ ಅಂದುಬಿಟ್ರು…ಅದಕ್ಕೆ ನನಗೆ ಸಾಕ್ಕೆ ಬರತ್ತೆ ಅಂತ ತೋರ್ಸಕ್ಕೆ ಸಾಯ್ತಿದಿನಿ” ಅಂದೆ.

“ಭೇಷ್ ! ಮೆಚ್ಚದೆ ನಿಮ್ಮ ಶೌರ್ಯ ನಾ ! ”

“ಥ್ಯಾಂಕ್ಸ್”

” ನೀವು ನನಗೆ ಸಿಕ್ಕಿದ್ದು ಒಳ್ಳೆದೇ ಆಯ್ತು”

ಅವನ ಕಡೆ ಹುಬ್ಬೇರಿಸಿ ನೋಡಿದೆ.

“ನೀವು ಸಾಯಕ್ಕೆ  ನಿಶ್ಚಯ ಮಾಡಿದ್ದೀರಿ ಅಂದ ಮೇಲೆ ನಾನು ನಿಮಗೆ ನಮ್ಮ ಸಂಘದ ಬಗ್ಗೆ ಹೇಳಲೇ ಬೇಕು”

“ಎಂಥಾ ಸಂಘ ? ”

“ಆತ್ಮಹತ್ಯೆ incognito”

“ಅಯ್ಯೋ…ಸಾಯ್ಬೇಡಿ ಅಂತ ಲೆಕ್ಚರ್ರ್ ಕೊಡ್ತಿರಾ ? ನನಗೆ ಗೊ..”

“ಶ್ !!!!!!!!!!!!! ಮಾತಾಡ್ಬೇಡಿ…ನಾವು ಸಾಯೋರನ್ನ ತಡೆಯುವವರಲ್ಲ…ಸಾಯಲು ದಾರಿ ತೋರಿಸುವವರು ಅಂತ ಆಗಲೆ ಹೇಳಿದೆನಲ್ಲ ! ನಾವು ಯಾರ್ಯಾರು ಯಾವ್ಯಾವ ರೀತಿ ಸಾಯಬಹುದೆಂದು ಸಲಹೆ ನೀಡುವ  consultants.”

ನಾನು ಪಿಳಿ ಪಿಳಿ  ನೋಡಿದೆ. ಅಲ್ಲಾ…ಸಾಯೋದು ಬೇಡ ಎಂದು ಕೌನ್ಸೆಲ್ ಮಾಡುವವರನ್ನು ನೋಡಿದ್ದೇನೆ. ಇದೆಂಥದ್ದು ಸಾಯಲು consultancy ? ಇವನು ಖಂಡಿತಾ ತಲೆ ಸರಿಯಿಲ್ಲದ ಮನುಷ್ಯ ಎಂದುಕೊಂಡು ಇವನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಣ್ಣಲ್ಲೇ ಹುಡುಕತೊಡಗಿದೆ.

“ನನ್ನಿಂದ ತಪ್ಪಿಸಿಕೊಳ್ಳಕ್ಕೆ ಆಗಲ್ಲ ನೀವು”

“ದೇವ್ರೆ ! ಏನಪ್ಪಾ ಇವನು mind read ಮಾಡ್ತಿದಾನೆ ! ಛೆ…ದೇವ !ನಾನು ಏನು ಒಲಂಪಿಕ್ಸ್ ಪದಕ ಕೇಳಿದೆನೆ ಅಥವಾ ನೊಬೆಲ್ ಪಾರಿತೋಷಕ ಕೇಳಿದೆನೆ ನಿನ್ನ ? ಜಸ್ಟ್ ಸಾಯ್ಬೇಕು ಅಂತ ಅಷ್ಟೇ ಕೇಳಿದ್ದು. ಅದಕ್ಕೆ ನೀನು ಇಷ್ಟು ಕಾಡಿಸಬಹುದೇ ? ಈ ದೇಹದಿಂದ ದೂರವಾಗು ಬೇಗ ಆತ್ಮನೇ…ಈ ಸಾವು ಖಂಡಿತಾ ನ್ಯಾಯವೇ…ಎಲ್ಲಾ ಜಡ್ಜುಗಳ ಮೇಲಾಣೆ ! ” ಎಂದು ನಾನು ಅಂದುಕೊಳ್ಳುತ್ತಿರುವಾಗಲೇ ಒಂದು ಪಾಳು ಬಿದ್ದ ಮನೆಯ ಹತ್ತಿರ ಬಂದುಬಿಟ್ಟಿದ್ದೆವು. ನಾನು  ಬಂದ ಗೇಟೆಲ್ಲಾದರೂ ಕಂಡೀತೆ ಎಂದು ಹುಡುಕಿದೆ. ಅದನ್ನೂ ಗ್ರಹಿಸಿದ ಆ ಯುವಕ,

“ನೀವು ಬಂದ ಗೇಟು ಈ ಕಡೆ ಇಲ್ಲ. ಹುಡುಕಿ ಪ್ರಯೋಜನ ಇಲ್ಲ ” ಎಂದು ಆ ಪಾಳುಮನೆಯ ಬಾಗಿಲನ್ನು ಬಡಿದ. ನನಗೆ ಯಾಕೋ ಆಲಿಬಾಬನ ಕಥೆ ನೆನಪಾಯ್ತು. ಬಾಗಿಲು ತೆರೆದಿದ್ದು ಮತ್ತೊಬ್ಬ ಹುಡುಗ. ಇವನಷ್ಟೇ ವಯಸ್ಸಿರಬಹುದು ಅಥವಾ ಚಿಕ್ಕವನಿರಬಹುದು..ಕೈಯಲ್ಲಿ ಲ್ಯಾಪ್ ಟಾಪ್ ಪೊಂದನ್ನು ಹಿಡಿದಿದ್ದ. ನನ್ನನ್ನು ನೋಡಿದ ತಕ್ಷಣ “Welcome to ಆತ್ಮಹತ್ಯೆ incognito” ಎಂದು  ಅಲ್ಲೇ ಇದ್ದಿದ್ದರಲ್ಲಿ ಸ್ವಲ್ಪ ನೀಟಾಗಿದ್ದ ಪಾಳು ಬಿದ್ದ ಹಾಲಲ್ಲಿ ಚೇರು ಹಾಕಿ ನಮ್ಮನ್ನುಕೂರಿಸಿ laptop  ನನ್ನ ಕೈಯಲ್ಲಿ ಇಟ್ಟ. ನಾನು ಫುಲ್ಲ್ ಖುಷ್ !  ಮನೆಯಲ್ಲಿ ಇದ್ದ ಐದು ವರ್ಷ ಹಳೆಯ ಕಂಪ್ಯೂಟರ್ರಿಗೆ ಆರು ಜನ ಸರದಿಯಲ್ಲಿ ನಿಲ್ಲುತ್ತಿದ್ದೆವು. ನಾನು ಪ್ರಾಜೆಕ್ಟ್ ಗೆ ಪ್ರಿಪೇರ್ ಆಗುವಾಗಲೇ ಅಣ್ಣನಿಗೆಯಾಹೂ ನಲ್ಲಿ ಅವನ ಮಿತ್ರ ವರ್ಗದ ಕಾನ್ಫೆರೆನ್ಸು, ಅಕ್ಕನಿಗೆ ಸ್ಕೈಪಲ್ಲಿ ಕಾಲು, ಅಪ್ಪನಿಗೆ ಈಮೈಲು, ಅಮ್ಮನಿಗೆ ಚಾಟು,ತಮ್ಮನಿಗೆ ಆರ್ಕುಟ್ಟು ! ನನ್ನದು ಅಂತ ಒಂದು ಲ್ಯಾಪ್ ಟಾಪ್ ಇರಬೇಕೆಂದು ನನಗೆ ಬಹಳಾ ಆಸೆ ಇತ್ತು ! ಇವ ನನ್ನ ಕೈಲಿ ಅದನ್ನ ಇಟ್ಟಮೇಲೆ ನಾನು ಸಾಯಲು ಬಂದಿದ್ದೇನೆಂದುಮರೆತೇ ಹೋಗಿತ್ತು…ಈ ಯುವಕ ನೆನಪಿಸುವ ವರೆಗೂ !

“ಮೇಡಮ್,  ನೀವು ಸಾಯಕ್ಕೆ ಬಂದಿದ್ದೀರ ಹೌದಲ್ಲ? ಇದು ಮೊದಲನೇ ಮೆಟ್ಟಿಲು. ಸ್ವಿಚ್ ಆನ್ ಮಾಡಿ.”

ಕೈಯಲ್ಲಿ ಎಂದೂ ಲ್ಯಾಪ್ ಟಾಪನ್ನು ಹಿಡಿಯದಿದ್ದ ನಾನು ಸ್ವಿಚ್ಚಿಗೆ ಹುಡುಕತೊಡಗಿದೆ. ಅವನು laptop  ನ ಹಿಂದೆಗೆದುಕೊಂಡು ಅವನೇ ಸ್ವಿಚ್ ಆನ್ ಮಾಡಿದ. ನನ್ನ ಮೂಡ್ ಸ್ವಿಚ್ ಆಫ್ ಆಯ್ತು ! ನೆಟ್ಟಗೆ ನೋಡಲೂ ಬಿಡದೇ ಐದೇ ಸೆಕೆಂಡುಗಳಲ್ಲಿ ಲ್ಯಾಪ್ಟಾಪ್ ಕಸಿದುಕೊಂಡದ್ದಕ್ಕೆ ನನಗೆ ಕೋಪವೂ ಬಂತು. ಆದರೆ ಎಲ್ಲೂ ಎದ್ದು ಹೋಗುವ ಹಾಗಿರಲಿಲ್ಲ. ಮಿಕಿ ಮಿಕಿ ನೋಡಿದೆ.  ಆಮೇಲೆ ಅವನು ಮಾನಿಟರ್ ತಿರುಗಿಸಿ, “ಇದು ಒಂದು ಸಣ್ಣ application form. ಇದನ್ನ fill up ಮಾಡಿ . ಇದು ಎರಡನೇ ಮೆಟ್ಟಿಲು.”ಅಂದ.

“ನೀವು ಆತ್ಮಹತ್ಯೆ ನ ಮೊದಲನೇ ಅಟೆಂಪ್ಟಿನಲ್ಲೇ successful ಆಗಿ ಮಾಡ್ಕೋಬೇಕಂತ coaching classes ಶುರು ಮಾಡಿದ್ದೀರಾ ? ಅದಕ್ಕೇನಾ ಫಾರ್ಮು ?

good guess..detailed coaching class ಅಲ್ಲ,crash course. ಒಂದು ಹತ್ತು ಹದಿನೈದು ನಿಮಿಷ ಅಷ್ಟೇ !

ನನ್ನ ಗೆಸ್ಸುಗಳು ಎಂದೂ ತಪ್ಪಾಗುತ್ತಿರಲಿಲ್ಲ. ನಾನು ಕೆಲವೊಮ್ಮೆ ಹೀಗಾಗಬಹುದೆಂದು ನುಡಿದಿದ್ದರೆ ಹಾಗೇ ಆಗುತ್ತಿತ್ತು. ಮನೆಯಲ್ಲಿ ಎಲ್ಲರೂ ನನ್ನನ್ನು ಶಕುನದ ಪಕ್ಷಿ ಅಂತ ಕರೆಯುತ್ತಿದ್ದರು. ನನ್ನನ್ನು ಹಾಗಂತ ಗೌರವದಂದ ನಡೆಸಿಕೊಳ್ಳುತ್ತಿದ್ದರು ಅಂತ ಅಲ್ಲ…ನಾನು ಹೇಳಿದ್ದು ಎಲ್ಲಿ ನಿಜ ಆಗತ್ತೋ ಅಂತ ಹೆದರಿ ನನ್ನೊಂದಿಗೆ ಯಾರೂ ಮಾತಿಗೆ ಬರುತ್ತಲೇ ಇರಲಿಲ್ಲ. ನನ್ನ ಬುದ್ಧಿ ಮೇಲೆ ನನಗೇ ನಂಬಿಕೆ ಹೊರಟುಹೋಗಿತ್ತು.ಇದನ್ನೆಲ್ಲಾ ಯೋಚಿಸುತ್ತಿರುವಾಗ  ಫಾರ್ಮಿನ ಮೊದಲನೇ ಪೇಜು ತೆರೆಯ ಮೇಲೆ ಮೂಡಿಬಂತು. ಆಂಗ್ಲದಲ್ಲದೇ,ಫೀಲ್ಡ್ ಗಳು ಕನ್ನಡದಲ್ಲಿಯೂ ಇದ್ದಿದ್ದು ನನಗೆ ಖುಷಿ ತಂತು.user interface ಕೂಡಾ ನೋಡಲು ತುಂಬಾ ಆಕರ್ಷಣೀಯವಾಗತ್ತು. ನಾನು,

“ವಾವ್ ರಿ…ಎಂಥಾ ಅದ್ಭುತವಾದ ಟೆಕ್ನಾಲಜಿ ಇಟ್ಟಿದ್ದೀರಾ..ಯಾರು ಡೆವೆಲಪ್ ಮಾಡಿದ್ದು ರಿ ಈ ಸಾಫ್ಟ್ ವೇರ್ ನಾ ?”

“ಅದೆಲ್ಲಾ ನಿಮಗೆ ಕಡೆಯಲ್ಲಿ ತಳಿಸುವೆ. ಮೊದಲು ಫಾರಮ್  ಭರ್ತಿಮಾಡಿ. all fields are compulsory”

ನಾನು ತಲೆಯಲ್ಲಾಡಿಸಿ ಅಲ್ಲಿರುವ ಫೀಲ್ಡ್ ಗಳನ್ನ ಸೂಕ್ಷ್ಮವಾಗಿ ನೋಡಿದೆ. ಹೆಸರು, ತಂದೆ ತಾಯಿ ಹೆಸರು, ಮನೆ ವಿಳಾಸ ,ಫೋನ್,ಮೊಬೈಲ್ ಎಲ್ಲಾ ಇದ್ದವು.

“ಇದೆಲ್ಲಾ ಯಾಕ್ ಬೇಕು ನಿಮಗೆ ?”

“ನೀವು ಈಗ ಮನೆಯಿಂದ ಕಾಣೆಯಾಗಿದ್ದೀರ.ನಿಮ್ಮವರು ಪೋಲಿಸ್ ಮೊರೆ ಹೋಗುವ ಹೊತ್ತಿಗೆ ನೀವು ಪರಲೋಕ ಸೇರಿರುತ್ತೀರ.ನಿಮ್ಮ ದೇಹ ಕೊಳೆತು ಹಾಳಾದ ಮೇಲೆ ನಿಮ್ಮವರೆಲ್ಲಾ ಗೋಳಾಡಲು ಹೆಚ್ಚು ಸಮಯ ಸಿಗಲ್ಲ. ಸಂಸ್ಕಾರ ಮಾಡಿಬಿಡಬೇಕಾಗತ್ತೆ. ನಿಮ್ಮವರು ನಿಮ್ಮನ್ನ ನೆನಸಿಕೊಂಡು ಇನ್ನೂ ಚೆನ್ನಾಗಿ ಅಳಲಿ ಅನ್ನೋ ಸದುದ್ದೇಶದಿಂದ ನಾವು ನೀವು ಸತ್ತ ತಕ್ಷಣ ಫೋನಾಯಿಸುತ್ತೇವೆ. ಪೋಲೀಸಿಗೆ ಮತ್ತೆ ನಿಮ್ಮ ಬಾಂಧರಿಗೆ. ನಿಮ್ಮನ್ನು ಗೋಳಾಡಿಸಿದವರು ಗೋಳಾಡಬೇಕಲ್ಲವೇ ?

ಹೌದ್ ಹೌದ್. ಒಳ್ಳೇದು. ಆದರೆ ನೀವ್ ಫೋನ್ ಮಾಡಿದರೆ ಅವರಿಗೆ ನಿಮ್ಮ ಮೇಲೆ ಅನುಮಾನ ಬರಲ್ವಾ ?

ಯಾಕ್ ಬರತ್ತೆ ?  we are incognito, ಅನುಮಾನ ಬರಲ್ಲ.

“ಭೇಷ್ !” ಅಂದು ಎಲ್ಲಾ ವಿವರವನ್ನು ಸಾಂಗೋಪಾಂಗವಾಗಿ ನೀಡಿದೆ. ಮುಂದಿನ ಪೇಜ್ ಗೆ ಹೋಗಲು ಕ್ಲಿಕ್ಕಿಸಿದೆ.

ಮುಂದಿನ ಪೇಜಿನ ಫೀಲ್ಡ್ ಒಂದು ಹೀಗಿತ್ತು: ನೀವು ಸಾಯುತ್ತಿರುವ ಕಾರಣ ?

ನಾನು ಜಿಗುಪ್ಸೆ ಎಂದು ಬರೆದೆ.

ತಕ್ಷಣ ಇನ್ನೊಂದು ಪಾಪ್ ಅಪ್ ವಿಂಡೋ ಲಿ- ” ಜಿಗುಪ್ಸೆ ಎಷ್ಟಿದೆ ? ಯಾವುದಾದರೂ ಒಂದನ್ನು ಟಿಕ್ ಮಾಡಿ:  ಸ್ವಲ್ಪ(basic),ಹೆಚ್ಚು (medium ),  ಸಿಕ್ಕಾಪಟ್ಟೆ ಜಾಸ್ತಿ (high).

ನಾನು ಆ ಹುಡುಗನನ್ನ ಕೇಳಿದೆ..” ಏನ್ರಿ ಇದು ? ಮೇಕಪ್ ನಲ್ಲಿ ಬೇಸಿಕ್, ಮೀಡಿಯಮ್ ಮತ್ತು ಹೈ ಅಂತೆಲ್ಲಾ ಇರೋ ಹಾಗ ಇದ್ಯಲ್ಲ ?” ಎಷ್ಟೇ ಆಗಲಿ ಮೂರ್ನಾಲ್ಕು ಮದುವೆಗಳಿಗೆ ಐದಾರು ಸಲ ಪಾರ್ಲರ್ ಸುತ್ತಿದವಳು ನಾನು ಅಲ್ಲವೇ ?ಅವನು ನಕ್ಕ.

“you are right ! ನೀವು ಸತ್ತೋಗ್ತಿರಾ. ಪೋಲೀಸ್ ನವರು ನಿಮ್ಮವರನ್ನೆಲ್ಲಾ ಹಿಡಿದು ಪ್ರಶ್ನಿಸುತ್ತಿರುತ್ತಾರೆ. how was the mental makeup ? ಅಂತ ಕೇಳ್ತಾರೆ. ಇವರು ಉತ್ತರಿಸಿದ್ದು ಸರಿಯ ತಪ್ಪೋ ಅಂತ ದೃಢಪಡಿಸಲು ನಾವು ಈ ಫಾರ್ಮ್ ಅನ್ನು ನಿಮ್ಮ ಹೆಣದ ಜೊತೆ ಇಟ್ಟಿರುತ್ತೇವೆ.ಅದನ್ನು ನೋಡಿ ಅವರಿಗೆ ಸತ್ಯ ಗೊತ್ತಾಗುತ್ತೆ. ನಾನು ಆಕ್ಷಣಕ್ಕೆ ನಂಬಿದೆನಾದರೂ, “ಅಲ್ಲಾ…ಫಾರ್ಮ್ ನಲ್ಲಿ ನಿಮ್ಮ ಸಂಘದ ಹೆಸರು ಕಂಡು ನಿಮ್ಮ ಮೇಲೆ ಅನುಮಾನ ಪಟ್ಟರೆ ? “ಎಂದು ಕೇಳಿದೆ. ಅದಕ್ಕೆ ಅವನಂದ ” ನಾವು ಫಾರಂ ನ ಹೆಸರು ಕಾಣದ ಹಾಗೆ ಪ್ರಿಂಟ್ ತೆಗೆಸ್ತಿವಿ. ನಮ್ಮ ಸಂಘದ ಹೆಸರು ಯಾರಿಗೂ ಗೊತ್ತಾಗಲ್ಲ. ನಿಮ್ಮ ಫಾರ್ಮನ್ನು ನ ಆ ಪಾಳು ಬಾವಿಯ ಬಳಿ ಇಟ್ಟು ನಾವು ಹೊರಟು ಹೋಗುತ್ತೇವೆ. ಪಾಳು ಬಿದ್ದ ಈ ಮನೆಯಲ್ಲಿ ಯಾರೂ ಇಲ್ಲವೆಂದುಕೊಂಡಿದ್ದಾರೆ ಪೋಲೀಸ್ ನವರು. ನಾವು ಇಲ್ಲಿರುವುದು ಯಾರಿಗೂ ಗೊತ್ತಿಲ್ಲ !”

“ಏನ್ talented  ರಿ ನೀವು ! Perfect incognito !” ಎಂದು ಉದ್ಗರಿಸಿದೆ ನಾನು. ಅವನು ಒಮ್ಮೆ ನಕ್ಕ. ನಾನು ಮತ್ತೆ ಫಾರ್ಮಿನ ಕಡೆ ಗಮನ ನೀಡಿದೆ. ಮುಂದಿನ ಫೀಲ್ಡ್ ಗಳಲ್ಲಿ ನಾನು ಸಾಯಲು ಒಂದು ಬಲವಾದ ಕಾರಣ ನೀಡಬೇಕೆಂದು ಕೇಳಿ 1024 characters ಮಾತ್ರ ನಿಗದಿಪಡಿಸಲಾಗಿತ್ತು. ಅಷ್ಟು ಎಲ್ಲಿ ಸಾಕಾಗತ್ತೆ ನನ್ನ ಕಾರಣಗಳ ಪಟ್ಟಿಗೆ ? ಸಮುದ್ರಕ್ಕೆ ಸ್ಪೂನಲ್ಲಿ ನೀರು ಹಾಕಿದ ಹಾಗೆ !   ಏನೇನು ಬರೆಯಲಿ ? ಚಿಕ್ಕ ವಯಸ್ಸಿನಲ್ಲಿ ಸೈಕಲ್ಲು ಕೊಡಿಸಲಿಲ್ಲ ಅಂತ ಹೇಳಿ ಈಗ ಸತ್ತೆ ಅಂತ ಬರೆಯಲೇ ? ತಮ್ಮ ನನ್ನ ಮುದ್ದಿನ ಟೆಡ್ಡಿ ಬೇರನ್ನು ಹರಿದು ಹಾಕಿದ್ದಿಕ್ಕೆ ಸತ್ತೆ ಅಂತ ಬರೆಯಲೆ ? ಅಥವಾ  ಅಕ್ಕ, ಅಣ್ಣ ನಾನು ಓದಿದ್ದು ಕಡಿಮೆ, ಅಲೆದಿದ್ದು ಜಾಸ್ತಿ, ದುಡ್ಡನ್ನು ಯರ್ರಾ ಬಿರ್ರಿ ಖರ್ಚು ಮಾಡ್ತಾಳೆ, ಬಸ್ ಪಾಸಿದ್ದರೂ ಆಟೋ ಲಿ ಓಡಾಡ್ತಾಳೆ ಅಂತ ಬೈತಾರೆ ಅಂತ ಸತ್ತೆ ಅಂತ ಬರೆಯಲೆ ?ಎಂಭತ್ತು ಪರ್ಸೆಂಟು ತಗೊಂಡರೂ ನೀವು ” ಸಾಲದು !” ಅಂತ ಅಂದು ನನಗೆ ನಿರಾಸೆ ಮಾಡಿದ್ದೀರಿ ಅಂತ ಬರೆಯಲೆ ?ಕ್ಯಾಂಪಸ್ಸು ಸೆಲೆಕ್ಷನ್ನು ಲೇಟಾಗಿ ಆತಂಕ ತಡಿಯಲಾಗದೇ ಸತ್ತೆ ಅಂತ ಬರೆಯಲೆ ? ನೀವೆಲ್ಲಾ ಬೈದು ಬೈದು ನನ್ನ ಮನಸ್ಸು ನೋಯಿಸಿದಿರಾ…ಇವತ್ತಂತೂ ಸಿಕ್ಕಾಪಟ್ಟೆ ಬೈದಿದ್ದೀರಾ..ನನಗೆ ಏನೂ ಮಾಡಕ್ಕೆ ಬರಲ್ಲ ಅಂತ ತೇಜೋವಧೆ ಮಾಡಿದ್ದೀರ. ನನಗೆ ಸಾಯಕ್ಕೆ ಬರತ್ತೆ ಅಂತ ತೋರಿಸವುದಕ್ಕೆ ಸತ್ತೆ ಅಂತ ಬರೆಯಲೆ ? ಏನು ಬರೆಯಲಿ ?

ಹತ್ತು ನಿಮಿಷ ಯೋಚನೆ ಮಾಡಿದ ಮೇಲೆ ಕಡೆಯ ಕಾರಣ ಸರಿಯೆಂದು ತೋಚಿತು. ಅದನ್ನೇ ಬರೆದೆ. ಅದಾದ ಮೇಲೆ ಇನ್ನೊಂದು ಫೀಲ್ಡ್ ಇತ್ತು. ನೀವು ಬಾವಿಯಲ್ಲಿ ಹೇಗೆ ಸಾಯಬಯಸುತ್ತೀರಿ  ಎಂದು ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಟಿಕ್ ಮಾಡಿ:

  • ಬಾವಿಯ ನೀರು ಬಿಸಿಯಿರುತ್ತದೆ. ಮೊದಲು ಉಗುರಬೆಚ್ಚಿಗೆ ಇದ್ದು, ಆಮೇಲೆ ಅದು ಕೊತ ಕೊತ ಕುದಿಯುವ ಹಾಗಾಗುತ್ತದೆ. ನೀವು ಕುದಿಯುವ ನೀರಲ್ಲಿ ಬೆಂದು ಸಾಯಬಯಸುವುದಾರೆ ಇಲ್ಲಿ ಕ್ಲಿಕ್ಕಿಸಿ. ನೀವು ಸಾಯುವ ಬಗೆಯನ್ನು ಪೂರ್ವವಿಕ್ಷಣೆ preview ಮಾಡಲು ಇಲ್ಲಿ ಕ್ಲಿಕ್ಕಿಸಿ.

ನಾನೆಂದೂ ತಣ್ಣೀರಿನಲ್ಲಿ ಸ್ನಾನ ಮಾಡಿದವಳಲ್ಲ.  ತೀರ್ಥ ಕುಡಿದರೆ ಶೀತ ಆಗುವಂಥಾ ಅದ್ಭುತ ದೇಹ ಪ್ರಕೃತಿ ಹೊಂದಿರುವ ನನಗೆ ಇದು ಸೂಕ್ತ ಅನ್ನಿಸಿತು. ಅದಕ್ಕೆನಾನು ಪೂರ್ವವೀಕ್ಷಣೆ ಬಟನ್ ಕ್ಲಿಕ್ಕಿಸಿದೆ. ಬೊಂಬೆಯೊಂದು ನೀರಲ್ಲಿ ಬಿತ್ತು. ಮೊದಲು ನೀರಲ್ಲಿ ಹಾಯಾಗಿ ಈಜುತ್ತಿತ್ತು..ಬರುಬರುತ್ತಾ ವಿಲವಿಲ ಒದ್ದಾಡಿತು. ಆಮೇಲೆ ಚಲನ ವಲನ ನಿಂತು ಹೋಯ್ತು. ನನಗೆ ಇದನ್ನು ನೋಡಿ  ಸ್ವಲ್ಪ ಭಯ ಆಯ್ತು. ಆ ಕಿಟಕಿಯ ಪಕ್ಕದಲ್ಲಿ ಬೊಂಬೆ ಸಾಯುವ ಸ್ಪೀಡನ್ನು ಹೆಚ್ಚಿಸುವ ಆಯ್ಕೆಯೂ ಇತ್ತು. ಅದನ್ನು ಮಾಡಿದ ಮೇಲಂತೂ ನನಗೆ ದಿಗಿಲುಂಟಾಯ್ತು. ಕಟಕಿ ಕ್ಲೋಸ್ ಮಾಡಿ ಇನ್ನೊಂದು ಆಯ್ಕೆ ನೋಡಲು ಹೋದೆ.

  • ಬಾವಿಯನ್ನು renovate  ಮಾಡಿದ ಮೇಲೆ roller  ಬ್ಲೇಡುಗಳನ್ನು ಹಾಕಿಸಾಗುತ್ತದೆ. ನಿಮ್ಮ ಕೈ ಕಾಲುಗಳನ್ನುಕತ್ತರಿಸಿ, ನೀವು ಮಿಕ್ಸಿಯಲ್ಲಿ ರುಬ್ಬಿದಂತೆ ನುಣ್ಣಗೆ ಸಾಯಬಹುದು. ಸ್ಪೀಡನ್ನು ನೀವೆ ನಿಗದಿಪಡಿಸಿ. ಪ್ರಿವ್ಯೂ…

ಇದರ ಪ್ರಿವ್ಯೂ ವಿಪರೀತ ಭಯಂಕರವಾಗಿತ್ತು. ಬೊಂಬೆ ಒದ್ದಾಡಿದ್ದು ನಾನೇ ಒದ್ದಾಡಿದ ಹಾಗೆ ಆಯ್ತು.ಕಿಟಾರನೆ ಕಿರುಚಿದೆ. ಅದಕ್ಕೆ ಆ ಯುವಕ- ” ಇಲ್ಲಿ ಕಿರುಚಬಹುದು..ಇದನ್ನ ಆಯ್ದುಕೊಂಡರೆ ನೀವು ಸಾಯುವಾಗ ಕಿರುಚುವ ಹಾಗಿಲ್ಲ. ಮೌನವಾಗಿ ಸಾಯಬೇಕು ” ಅಂದ. ನನ್ನನ್ನು ಕೈಬೀಸಿ ಕರೆಯುತ್ತಿದ್ದ ಸಾವಿನ ತೋಳ್ಬದ ಮೇಲೆ ನನಗೆ ಭಯವುಂಟಾಯ್ತು..ಅದು ಪ್ರೀತಿಯಿಂದ ಆಲಂಗಿಸಬಹುದು…ನಂತರ ಕಬಂಧನಂತೆ ಬಾಹುವಿನಲ್ಲಿ ಹಿಡಿದುಬಿಟ್ಟರೆ ? ಗತಿಯೇನು ? ಸಾಯಲೇ ಬೇಕು ಎಂಬ ನನ್ನ ಧೃಢನಿರ್ಧಾರ ಈಗ ಅಲ್ಲಾಡತೊಡಗಿತು. ಆದರೂ ಸಾಯಲು ಈಗ ಬಂದಾಗಿದೆ. ಸಾಯದಿದ್ದರೆ ನನ್ನ ನಿರ್ಧಾರಕ್ಕೆ ಅವಮಾನ. ಮನಸ್ಸು ಡೋಲಾಯಮಾನವಾಯ್ತು.ಕುರಿಯನ್ನು ಸಾಯಿಸಿದ್ದನ್ನು ನೋಡಿದಾಗ ಇರದ ಭಯ ಈಗ ಕಾಡತೊಡಗಿತು. ಈ ಆಯ್ಕೆಯನ್ನು ಸಾರಾಸಗಟಾಗಿ ನಿರಾಕರಿಸಿ ಮುಂದಿನ ಆಯ್ಕೆಯ ಕಡೆ ಗಮನ ಹರಿಸಿದೆ.

  • ಪೂರ್ತಿ ತಣ್ಣಗಿರುವ ನೀರು. ನೀವು ಹಾಗೆಯೇ ಮುಳುಗಿ ಸಾಯುತ್ತೀರಿ. ಹೆಣ ಮೇಲೆ ಎತ್ತುವಾಗ ಕೈ ಕಾಲು ಏನಾದರೂ ಆದರೆ ನಿಮ್ಮವದ್ದೇನೂ ತಕರಾರಿರಬಾರದು. ಪ್ರಿವ್ಯೂ..

ಇದರ ಪ್ರಿವ್ಯೂ ನೋಡಿದೆ.ಭಯಂಕರವಾಗಿರಲಿಲ್ಲ. ಆದರೆ ತಣ್ಣೀರಲ್ಲಿ ಸಾಯಲು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಬೇರೆ ದಾರಿಯಿಲ್ಲದೇ ಮೊದಲನೆಯ ಆಯ್ಕೆಯನ್ನು ಟಿಕ್ ಮಾಡಿದೆ. ಬಾವಿಯ ಜೀರ್ಣೋದ್ಧಾರದ ಹಿಂದಿನ ಚಿದಂಬರ ರಹಸ್ಯ ಏನು ಅಂತ ನನಗೆ ಆಗ ಗೊತ್ತಾಯ್ತು. ಅದೊಂದು glorified tank. ಎಲ್ಲಾ ಸೌಕರ್ಯಗನ್ನು ಇದು ಹೊಂದಿದ್ದರೂ, ಸಾಯುವ ಛಲವಿದ್ದವರಿಗೆ ಮಾತ್ರ  ಪ್ರವೇಶ !!!

ಆನಂತರ ಮುಂದಿನ ಪೇಜ್ ಗೆ ಹೋದೆ. ಅಲ್ಲಿ ನನ್ನ ಹವ್ಯಾಸಗಳು, ಆಸಕ್ತಿ , ಸಾಧನ, ಇವುಗಳ ಬಗ್ಗೆ ಪ್ರಶ್ನೆ ಇದ್ದವು. ನಾನು ಪ್ರಶ್ನಿಸಲು ಬಾಯ್ಬಿಡುವಷ್ಟರಲ್ಲಿ ಆ ಯುವಕನೇ ಉತ್ತರಿಸಿದ.

“ಮಾರ್ಕೆಟಿಂಗ್ ಗೆ ಮೆಡಮ್…ಎಂಥೆಂಥಾ ಅತಿರಥಮಹಾರಥರು ನಮ್ಮ ಬಳಿ ಕೋರ್ಸ್ ತೆಗೆದುಕೊಂಡು ಸತ್ತಿದ್ದಾರೆ ಅಂತ freshers  ಗೆ ತೋರ್ಸಕ್ಕೆ. left ನಲ್ಲಿ ಒಂದು ಲಿಂಕ್ ಇದೆ. ಅಲ್ಲಿ ಹೋಗಿ ನೋಡಿ ಅಂದ. ನಾನು ಅದನ್ನು ಕ್ಲಿಕ್ಕಿಸಿದೆ.  ಅಲ್ಲೊಂದು ಎಂಟು ಹತ್ತು ಜನರ ಚಿತ್ರಗಳಿದ್ದವು. ಎಲ್ಲರ ಫೋಟೋ ಪಕ್ಕದಲ್ಲಿ ಅವರು ಸತ್ತ ಕಾರಣವನ್ನು ಬರೆಯಲಾಗಿತ್ತು. ಒಬ್ಬ ಸ್ನೇಹಿತರ ಜೊತೆ ಬೆಟ್ಟು ಕಟ್ಟಿ ಸೋತು ಅವಮಾನ ತಾಳಲಾರದೇ ಸತ್ತಿದ್ದರೆ, ಮತ್ತೊಬ್ಬಳು ಆಫೀಸಿನ ಯಾವುದೋ ಹೇಳಲಾಗದ ತೊಂದರೆಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಳು. ಇನ್ನೊಬ್ಬ ಪಿಯುಸಿ ವಿದ್ಯಾರ್ಥಿ  ಗಣಿತದ ಭಯದಿಂದ ಅಸುನೀಗಿದ್ದರೆ, ಇನ್ನೊಬ್ಬ ಗಾಂಜಾ ಅಫೀಮಿನ ಧಂಧೆಯಲ್ಲಿ  ಸಿಕ್ಕಿಬಿದ್ದು ಸಾವಿನ ಮಾರ್ಗ ಹಿಡಿದಿದ್ದ. ಇವರೆಲ್ಲರ ಕಾರಣಗಳಿಗಿಂತ ನನ್ನ ಮನೆಯ ಜಗಳ ದೊಡ್ಡದೇನಲ್ಲ ಅಂತ ನನಗೆ ಅನಿಸಲು ಶುರುವಾಯ್ತು. ಆದರೂ ನನ್ನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು. ಅದನ್ನು ಸುಲಭದಲ್ಲಿ ಮರೆಯಲು ಸಾಧ್ಯವೇ ? ಅದಕ್ಕೆ ನಾನು ಬದುಕಿ ಏನನ್ನು ಸಾಧಸಿದರೂ ನನ್ನ ಫೋಟೋ ಪೇಪರ್ನಲ್ಲಾಗಲಿ ಅಂತರ್ಜಾಲ ತಾಣದಲ್ಲಾಗಲೀ ಬರಲು ಯಾವ ಅವಕಾಶವೂ ಇರಲಿಲ್ಲ. ನಾನು ಸತ್ತಾಗಲಾದರೂ “ಸತ್ತು ಸಾಧಿಸಿದವಳು” ಅಂತ ಬಿರುದು ಕೊಟ್ಟು ನನ್ನ ಫೋಟೋ ಎಲ್ಲಾದರು ಒಂದು ಕಡೆ ಬಂದರೆ ಅದೇ ನನ್ನ ಭಾಗ್ಯ ಅಂದುಕೊಂಡು ಮತ್ತೆ ಹಳೆಯ ಪೇಜಿಗೆ ಬಂದು ನನ್ನ ಆಸಕ್ತಿ, ಅಭಿರುಚಿ ಎಲ್ಲಾ  ಬರೆದೆ. ನಾನು ಚಿಕ್ಕಂದಿನಲ್ಲಿ ಗೆದ್ದ ಪುಟ್ಟ ಪ್ರೈಜಿನಿಂದ ಹಿಡಿದು ಡಿಗ್ರಿಯಲ್ಲಿ ಗೆದ್ದ ಶೀಲ್ಡಿನವರೆಗೂ ಚಾಚೂ ತಪ್ಪದೆ ನನ್ನಎಲ್ಲಾ ಸಾಧನೆಗನ್ನ ಬರೆದೆ.ಅದನ್ನ ಬರೆಯುವಾಗ ಅದೇನೋ ಹೆಮ್ಮೆ ! ನನ್ನ ಫೇವರೈಟ್ ಕವಿ ಡಿ.ವಿ.ಜಿ ಎಂದಾಗ ಆ ಯುವಕ ನನ್ನನ್ನ ಕೇಳಿದ – “ಕಗ್ಗ ಓದಿದ್ದೀರಾ ?”

ನಾನು ಹೂಂ ಎಂದೆ. ಅವನು ನಕ್ಕ.

ನಾನು ನೆಕ್ಸ್ಟ್ ಪೇಜ್ ಗೆ ಬಂದಾಗ ಆತ್ಮಹತ್ಯೆಯ ಪಾಠ ಆರಂಭವಾಯ್ತು. ನೀವು ಸಾಯಲು ತಯಾರಿದ್ದೀರಾ ? ಅಂತ ಪ್ರಶ್ನೆ ಕೇಳಿ ನಾನು ಆಯ್ಕೆ ಮಾಡಿದ್ದ ರೀತಿಯ ವಿಡಿಯೋ ಕೆಳಗಿತ್ತು. ನಾನು ನಿರ್ಭಯವಾಗಿ “ಎಸ್” ಕ್ಲಿಕ್ ಮಾಡಿದೆ.

ಅದು ನೋಡಿದರೆ ಒಂದೇ slide show ಇರುವ ಕೋರ್ಸು ! ಅದರಲ್ಲಿ-

  • ಸಾಯುವಾಗ ಕಣ್ತೆರೆದು ಅನುಭವಿಸಿ ಸಾಯಿರಿ.ಆಮೇಲೆ ನಿಮ್ಮ ಕಣ್ಣನ್ನು ನಾವು ಮುಚ್ಚುತ್ತೇವೆ.
  • ಯಾವುದೇ ಕಾರಣಕ್ಕೂ ನೀವು ಗಲಾಟೆ ಮಾಡುತ್ತಾ, ಕಿರುಚಾಡುತ್ತಾ ಸಾಯಬಾರದು. ಮೌನವಾಗಿ ಸಾಯಬೇಕು.
  • ನೀವು ಸತ್ತ ಮೇಲೆ ಬಾವಿಯನ್ನು ಕ್ಲೀನ್ ಮಾಡಿಬೇಕಾಗತ್ತೆ. ಅದಕ್ಕೆ ನೀವು ಮೊದಲೇ ಹಣ ತೆರಬೇಕು. ಹಣವಿಲ್ದಿದ್ದರೆ ಚಿನ್ನದಿಂದಲೂ ಕೆಲ್ಸ ನಡೆಯುತ್ತದೆ. ಅಪ್ಪ/ಅಮ್ಮನ ಕ್ರೆಡಿತ್ ಕಾರ್ಡ್ ನಂಬರ್ ಇದ್ದರೆ ಅತ್ಯುತ್ತಮ.ಹೆದರ ಬೇಡಿ, ನಾವೇನು ಸುಲಿಗೆ ಮಾಡೋದಿಲ್ಲ. ನಮ್ಮ ಫೀಸ್ ಐದು ಸಾವಿರ ಅಷ್ಟೇ !

ಕಡೆಯ ಪಾಯಿಂಟ್ ನೋಡಿ ನನಗೆ ಸಿಕ್ಕಾಪಟ್ಟೆಕೋಪ ಬಂತು. ಅಲ್ಲಾ…ನಾನು ಸಾಯಲು ನಾನೇ ದುಡ್ಡು ಕೊಡಬೇಕೆ ?ಜಿಪುಣ ಸಾಮ್ರ್ಯಾಜ್ಯದ ಅಧಿರಾಜ್ಞಿಯಾದ ನನಗೆ ಇದು ಸರ್ವಥಾ ಒಪ್ಪಿಗೆಯಾಗಲಿಲ್ಲ. ಬಿದ್ದು ಸಾಯಲು  ಬಿಟ್ಟಿ ಬಾವಿಯಿದ್ದಾಗ ಸಾಯಲು ಈ ದೊಣ್ಣೆ ..ಅಲ್ಲಲ್ಲ…ಲ್ಯಾಪ್ ಟಾಪ್ ನಾಯಕನ ಅಪ್ಪಣೆ ಯಾಕೆ ? ಸಿಡಿಮಿಡಿಗೊಂಡು ಆ ಯುವಕನನ್ನ ಹಾಗೇ ಕೇಳಿಯೂ ಬಿಟ್ಟೆ. ಅದಕ್ಕೆ ಅವ – “health and hygiene  ಬದುಕಿದ್ದಾಗ ಮಾತ್ರ ಪಾಲಿಸಿದರೆ ಸಾಲದು, ಸಾಯುವಾಗಲು ಪಾಲಸಬೇಕು. ನೀವು ಸತ್ತ ಮೇಲೆ ಬಾವಿ unhygienic ಆಗಿರತ್ತೆ. ಅದರಲ್ಲಿ ಬೇರೆಯವರು ಸಾಯಕ್ಕೆ ಇಷ್ಟ ಪಡಲ್ಲ. ನೀವೆ ಇಷ್ಟ ಪಡ್ತಿರಾ ಹೇಳಿ ? ಅದಕ್ಕೆ ಐದು ಸಾವಿರ. ನಾವು ವರ್ಕರ್ಸ್ ನ ನೋಡ್ಕೋಬೇಕಲ್ಲ…”

ಪರಮ ಜುಗ್ಗಿಯಾದ ನಾನು ಇದೊಂದು ವಿಷಯಕ್ಕಾಗಿ ಒಪ್ಪಲೇಬೇಕಾಯ್ತು. ನನ್ನ ಬಳಿ ಹಣವಿರಲಿಲ್ಲ. ಅದಕ್ಕೆ ನಮ್ಮ ತಾತ ನನಗೆ ಕೊಟ್ಟಿದ್ದ ಚಿನ್ನದ ಸರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಚ್ಚಿ ಆ ಯುವಕನ ಕೈಲಿತ್ತೆ. ಮೊಬೈಲನ್ನೂ ಸಹ ಕೊಟ್ಟೆ.ಅವನು..ಮುಂದಿನ ಫಾರ್ಮಾಲಿಟೀಸ್ ಮುಗಿಸಿ ಅಂತ ಸ್ಕ್ರೀನ್ ತೋರಿಸಿದ. ನಾನು next page  ಒತ್ತಿದ ಮೇಲೆ ನಾನು ಸಾಯಲು ಯಾವ ರೀತಿಯಲ್ಲಿ ಹಣ ಪಾವತಿಸಿದ್ದೇನೆ ಅಂತ ಬರೆಯಲು ಒಂದು ಕಾಲಂ ಇತ್ತು. ಅದನ್ನು ಭರ್ತಿ ಮಾಡಿ “ಡನ್” ಎಂದು ಒತ್ತಿದ ಮೇಲೆ..”wish you a very happy journey to the heavens” ಎಂಬ ಹಾರೈಕೆಯೊಂದಿಗೆ ನನ್ನ ಆತ್ಮಹತ್ಯೆ ಪಾಠ ಮುಗಿಯಿತು.

ನೆಮ್ಮದಿಯ ನಿಟ್ಟುಸಿರು ಬಿಟ್ಟು ನಾನು ” ಈಗ ಬಾವಿಗೆ ಹೋಗಬಹುದಲ್ವಾ ?” ಅಂದೆ. ಅವನು, “ಇಲ್ಲಾ…ಬೆಳಿಗ್ಗೆ ಬೇಗನೆ ಬಂದು ಒಬ್ಬರು ಕೋರ್ಸ್ ತಗೊಂಡು ಹೋದವರು ಈಗಷ್ಟೇ ಸತ್ತಿದ್ದಾರೆ. ಕ್ಲೀನಿಂಗ್ ನಡಿತಿದೆ. ಇನ್ನೊಂದು ಅರ್ಧ ಘಂಟೆ. ಆಮೇಲೆ ನೀವೇ ಸಾಯೋರು. ಏನಾದ್ರು ತಿಂಡಿ ತರಿಸ್ತಿನಿ. ತಿಂದು ಸಾಯ್ರಿ” ಅಂದ. ನಾನು, “ನೀವು ತಿಂಡಿಯಲ್ಲಿ ವಿಷ ಹಾಕಿ ಯಾಕೆ ಸಾಯಿಸಬಾರದು ?” ಅಂತ ಕೇಳಿದೆ. ಅದಕ್ಕೆ ಅವನಂದ, ” ಅದು ಕೊಲೆಯಾಗತ್ತೆ.”  ನಾನು ” ನಮ್ಮ ಕನ್ಸೆಂಟ್ ತಗೊಳ್ಳಿ ಪಾ…ನಾವ್ ಬರ್ಕೊಡ್ತಿವಿ..ನಾವೇ ವಿಷ ತರಿಸಿಕೊಂಡು ತಿಂದು ಸತ್ವಿ” ಅಂತ..” ಅಂದೆ. ಅದಕ್ಕೆ ಅವ “ಈಗ ವಿಷ ನ ನಾವು ತರ್ಕಾರಿ ಥರ ತಗೊಳ್ಳಕ್ಕೆ ಆಗಲ್ಲ. smuggle ಮಾಡ್ಬೇಕು.ಕಷ್ಟ. ಆದ್ರೆ ಅದನ್ನು ಅತಿಶೀಘ್ರದಲ್ಲೇ ಜಾರಿಗೆ  ತರ್ತಿವಿ” ಅಂದ. ನನಗೆ ಜುಗಾರಿ ಕ್ರಾಸ್ ಕಾದಂಬರಿ ನೆನಪಾಯ್ತು.

ಅವನು ” ನಿಮ್ಗೇನು ಬೇಕು ?” ಅಂದ. ನಾನು “any pure vegetarian food without onions” ಅಂದೆ. ಅದಕ್ಕೆ ಆ ಯುವಕ ” ಒಂದು ಮೊಸ್ರನ್ನ…ಉಡುಪಿ ಹೋಟೆಲಿಂದ” ಅಂತ ಥೇಟ್ ಹೋಟೆಲ್ ಮಾಣಿ ಥರ ಕೂಗಿದ. ಬಾಗಿಲು ತೆಗೆದು ನನ್ನ ಕೈಗೆ ಲ್ಯಾಪ್ಟಾಪ್ ಕೊಟ್ಟ ಯುವಕ  “ಓಕೆ.” ಅನ್ನುತ್ತಾ ಹೊರನಡೆದ. ಎರಡು ನಿಮಿಷದ ನಂತರ ಒಳಬಂದು “ಹೋಟೆಲ್ ಕ್ಲೋಸ್ ಆಗಿದೆ” ಅಂದ. ನನಗೆ ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿಯುತ್ತಿತ್ತು. ಹೊಟ್ಟೆಗೆ ಬಿದ್ದರೆ ಸಾಕಾಗಿತ್ತು. ಸಾಯುವ ಮೂಡ್ ಕೂಡಾ ಇರಲಿಲ್ಲ. ಆಗಿದ್ದ ಆವೇಶ ಈಗ ಇರಲಿಲ್ಲ. ಚಿನ್ನದ ಸರ ಕೊಟ್ಟುಬಿಟ್ಟಿದ್ದೇನೋ ನಿಜ..ಆಗ ಸಾಯಲು ಹವಣಿಸುತ್ತಿದ್ದ ನಾನು ಈಗ ಹಸಿವಿನಿಂದ ತತ್ತರಿಸಿಹೋಗಿದ್ದೆ. ಆದರೆ ಸರ ಮತ್ತು ಮೊಬೈಲು ಕೊಟ್ಟು ರಿಜಿಸ್ಟರ್ ಮಾಡಿಸಿದ ತಪ್ಪಿಗೆ ಈಗ ಸಾಯಲೇ ಬೇಕಿತ್ತು.

ಸರಿ ಖಾಲಿ ಹೊಟ್ಟೆಯಲ್ಲೇ ಸಾಯಲು ನಿರ್ಧರಿಸಿದೆ. ನಾನು ಸತ್ತರೆ , ಹೊಟ್ಟೆ ತುಂಬಾ ತಿಂದು ತೃಪ್ತಿಯಾಗಿ ಸಾಯೋಣ ಅಂತ ಇದ್ದೆ..ಆದರೆ ಅರೆಹೊಟ್ಟೆಯಲ್ಲಿ ಅಸುನೀಗಿ ಉಡುಪಿ ಹೋಟೇಲಿನ ಮೇಲೆ ಅಂತರ್ಪಶಾಚಿಯಾಗಿ ಅಲೆಯಬೇಕು ಅಂತ ಇದ್ದರೆ ನಾನು ಹೇಗೆ ತಾನೆ ವಿರೋಧಿಸಲು ಸಾಧ್ಯ ? ” ಬಾವಿಗೆ ಹೊಗೋಣ” ಅಂದೆ. ಅವನು ” ಒಂದು ನಿಮಿಷ ಇರಿ” ಎಂದು ಇದುವರೆಗೂ ನನಗೆ ಕಾಣಸದಿದ್ದ ಪುಟ್ಟ ಕೋಣೆಯೊಳಗೆ ಹೋದ. ಬರುತ್ತಾ ಅವನ ಕೈಯಲ್ಲಿ ಒಂದು ಲಕೋಟೆಯಿತ್ತು. ಅದನ್ನು ನನ್ನ ಕೈಲಿಟ್ಟು – ” ನಾನು ಬಾವಿಯ ಬಳಿ ಬರಲ್ಲ. ನೀವೇ ಹೋಗಿ ಸಾಯಬೇಕು. ನಾನಿದ್ದರೆ ನಿಮಗೆ ಕಷ್ಟ ಆಗಬಹುದು.ಈಗ ಇದನ್ನು ತೆಗೆದುಕೊಂಡು ಬಾವಿಯ ಹತ್ತಿರ ಹೋಗಿ. ಬೀಳುವ ಮುಂಚೆ ಇದನ್ನ ಓದಿ, ಕಟ್ಟೆಯ ಮೇಲಿಟ್ಟು ಅದರ ಮೇಲೊಂದು ಕಲ್ಲಿಟ್ಟು ಆಮೇಲೆ ಬಿದ್ದು ಸಾಯಿರಿ.  All the best !” ಎಂದ.

ನಾನು ಹಲ್ಲುಕಿರಿದೆ. ಮನದೊಳಗೆ ” ಬೇಕಿತ್ತಾ ನಿನಗಿವೆಲ್ಲಾ ?” ಅಂತ ಯಾರೋ ಕೇಳಿದ ಹಾಗಾಯ್ತು. ಉತ್ತರಿಸಲು ಧೈರ್ಯವೇ ಇರಲಿಲ್ಲ !

ಹೀರೋಯಿನ್ ಸ್ಲೋ ಮೋಷನ್ನಲ್ಲಿ ಮನೆ ಬಿಟ್ಟು ಹೊರಬರುವ ಹಾಗೆ ಹೊರಬಂದೆ.ವ್ಯತ್ಯಾಸ ಇಷ್ಟೇ..ಅವಳ ಕೈಯಲ್ಲಿ suitcase ಇರತ್ತೆ, ನನ್ನ ಕೈಯಲ್ಲಿ ಲಕೋಟೆ ಇತ್ತು !

ಹೊರಬಂದಿದ್ದೇ ಮೊದಲು ಪತ್ರವನ್ನೋದಲು ಆಸೆಯಾಗಿ ಲಕೋಟೆ ಒಡೆದೆ. ಅದರಲ್ಲಿ ನಾನು ಫಾರ್ಮನ್ನು ಭರ್ತಿ ಮಾಡಿದರ print out,  ಮತ್ತು ಒಂದು ಪುಟ್ಟ ಪತ್ರವಿತ್ತು. ಅದನ್ನ ಓದಲು ಮೊದಲುಮಾಡಿದೆ.

“ಮೇಡಮ್,

ನಿಮಗೆ ಸಾಯಲು ಇಷ್ಟ ಇದ್ದರೂ ನೀವು ಸಾಯುವುದು ಸರಿಯೇ ಅಂತ ಯೋಚಿಸಿ. ನಾವು ನಮ್ಮಿಷ್ಟದಂತೆ ಇರಬೇಕೆಂದು ಬಯಸುತ್ತೇವೆಯಾದರೂ, ಅದು ಸರಿಯೇ ಎಂದು ಮೊದಲು ಯೋಚಿಸುವುದೊಳಿತು.

ನಿಮ್ಮ ಫೇವರೈಟ್ ಕವಿ ಡಿ.ವಿ.ಜಿ ಅಂದಿರಿ. ಕಗ್ಗ ಓದಿರುವೆ ಅಂದಿರಿ. ಇದನ್ನು ಮತ್ತೊಮ್ಮೆ ಅವಗಾಹಿಸಿ.

“ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |

ತೃಣ ಮೊಳೆಯುವುದು ಮರಳಿಹನಿಯೆರಡು ಬೀಳೆ ||

ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ

ಕುಣಿವುದನುಕೂಲ ಬರೆ- ಮಂಕುತಿಮ್ಮ ||”

ಇನ್ನು ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ ಅನ್ನಿಸತ್ತೆ. ನೀವು ಸಾಯಲು ಇನ್ನೂ ಬಯಸುತ್ತಿದ್ದರೆ ಸಾಯಬಹುದು.

-ಆತ್ಮಹತ್ಯೆ incognito

ನನಗೆ ಕಪಾಳಕ್ಕೆ ಹೊಡೆದ ಹಾಗಾಯ್ತು.ನನ್ನ ಸಕಲ ಪ್ರಶ್ನೆಗಳನ್ನೂ ಈ ಕಗ್ಗ ಉತ್ತರಿಸಿತ್ತು..ನನ್ನ ಜಿಗುಪ್ಸೆಗೆ ಸಾಂತ್ವನವೂ ನೀಡಿತ್ತು. ನಾನು ಎಂಥಾ ಕ್ಷುಲ್ಲಕ ಕಾರಣಕ್ಕೆ ನನ್ನ ಅದ್ಭುತ ಜೀವನವನ್ನೇ ನಾಶಮಾಹೊರಟಿದ್ದೆ ಅನ್ನೋದು ನನಗೆ ಆಗ ಗೊತ್ತಾಯ್ತು. ಕಣ್ತುಂಬಿ ಬಂತು. ಬಾವಿಯ ಕಡೆಯ ದಾರಿ ಬಿಟ್ಟು ಗೇಟನ್ನು ಹುಡುಕತೊಡಗಿದೆ. ನಾನು ಬದುಕಲು ತವಕಿಸುತ್ತಿದ್ದೆ ! ಏನನ್ನೂ ಮಾಡಿ ಸಾಧಿಸಿ ತೋರಿಸಲು ಸಿದ್ಧಳಿದ್ದೆ !

ಅಷ್ಟರಲ್ಲಿ ಅಮ್ಮನ ಕೂಗು ಎಲ್ಲಿಂದಲೋ ಕೇಳಿಬಂತು – ” ಲೇ…. ಕೋಪ ಮಾಡ್ಕೊಂಡು ಎಲ್ಲೋ ವಾಕಿಂಗ್ ಹೋಗಿರುತ್ತೀಯಾ ಅಂದುಕೊಂಡರೆ ಹೀಗಾ ಮಾಡೋದು?ಮೊಬೈಲನ್ನು ಬೇರೆ ಸ್ವಿಚಾಫ್ ಮಾಡಿ ಗೋಳಾಡಿಸುತ್ತಿದ್ದೀಯಲ್ಲ ! ಸದ್ಯ ಸಿಕ್ಕಿದ್ಯಲ್ಲಾ..” ಅಂತ ಅನ್ನುತ್ತಾ ನನ್ನ ಬಳಿ ಬಂದರು. ಆ ಸಮಯಕ್ಕೆ ಏನೂ ಮಾಡಲು ತೋಚದೇ ಆ ಲಕೋಟೆಯನ್ನು ಮುಚ್ಚಿಡಲೂ ಆಗದೇ ಕೈಯಲ್ಲಿ ಇಟ್ಟುಕೊಂಡೇ ಇದ್ದೆ.  ಅಪ್ಪ ಅಮ್ಮನ ಹಿಂದೆ ಬಂದರು. ಅಪ್ಪ- “ಎಲ್ಲಾ ವಿಷ್ಯ ಗೊತ್ತಾಯ್ತು. ಆ ಆತ್ಮಹತ್ಯೆ ಸಂಘದವರು ಫೋನ್ ಮಾಡಿದ್ದಕ್ಕೆ ಸರಿ ಹೋಯ್ತು. ನಾನು ಹೋಗಿ ಅವರಿಗೆ ಧನ್ಯವಾದ ಹೇಳಿ ಬರುತ್ತೇನೆ”  ಅನ್ನುವ ಹೊತ್ತಿಗೆ ಆ ಯುವಕ ಅಲ್ಲಿ ಪ್ರತ್ಯಕ್ಷ ! ನಮ್ಮ ತಂದೆ ಅವನನ್ನು ಹೊಗಳಿದ್ದೇ ಹೊಗಳಿದ್ದು. ನನಗೆ ಮಾತು ಹೊರಡುತ್ತಲೇ ಇರಲಿಲ್ಲ. ಅವನ್ನು ದಿಟ್ಟಿಸಿ ನೋಡುವ ಧೈರ್ಯವೂ ಇರಲಿಲ್ಲ. ಅವನು ನಮ್ಮ ತಂದೆಯೊಂದಿಗೆ ಮಾತಾಡುತ್ತಾ- ” ನಾನು ಸಾಫ್ಟ್ ವೇರ್ ಇಂಜಿನೀರ್ ಆದರೂ ಕೆಲ್ಸ ಸಿಗಲಿಲ್ಲಾ ಅಂತ ಸಾಯಕ್ಕೆ ಬಂದೆ ಸಾರ್ ! ಆಗ ಇಲ್ಲಿ ಖಾಲಿ ಷೀಷೆ ಪೇಪರ್ ನವನು ಹರಿದ ಪೇಪರ್ ನ ಹಾಕಲು ಬಂದಾಗ ಒಂದು ಹಾಳೆಹಾರಿ ನನ್ನ ಮುಖಕ್ಕೆ ಬಂದು ಬಿತ್ತು. ಆ ಹಾಳೆಯಲ್ಲಿ ಪಾಸಿಟಿವ್ ಥಿಂಕಿಂಗ್ ನ ಒಂದು ಅಂಕಣವನ್ನು ಓದತೊಡಗಿದೆ. ಆ ಅಂಕಣ ಅರ್ಧ ಮಾತ್ರ ಇತ್ತು. ಪೂರ್ತಿ ಹುಡುಕುವ ವರೆಗೂ ಬದುಕುತ್ತೇನೇಂದು ಹಠ ಹಿಡಿದೆ. ಲೈಬ್ರರಿಗಳಲ್ಲಿ ಹುಡುಕಿ ಕಡೆಗೂ ಆ ಪುಸ್ತಕ ಹುಡುಕಿ ಓದಿದೆ. ಆಮೇಲೆ ನನಗನ್ನಿಸಿತು, “ನಾನೇಕೆ ಸಾಯುವವರನ್ನು ಜೀವನ್ಮುಖಿಯಾಗಿಸಬಾರದು ? ಅವರಗೆ ಸಾಯುವ ಬಗೆ ಕೌನ್ಸೆಲ್ ಮಾಡಿದರೆ ಅವರಿಗೆ ಆ ಕ್ಷಣಕ್ಕೆ ಸಹಿಸಲಾಗದು.  consultancy firm  ತೆರೆದು ಸಾವಿನ ಭೀಕರತೆಯನ್ನ ನಿಧಾನಕ್ಕೆ ಪರಿಚಯಿಸಿದರೆ ಅವರಿಗೆ ಸಾಯಲು ಮನಸ್ಸು ಡೋಲಾಯಮಾನ ಆಗತ್ತೆ. ಹಾಗೂ ಒಂದು ವೇಳೆ ಮುಂದುವರದರೂ ನಾವು ಅವರನ್ನು ಬದುಕಿಸಿಕೊಳ್ಳಬಹುದು “ಎಂದು ಈ ಕಂಪನಿ ಓಪನ್ ಮಾಡಿ ಆ ಸಾಫ್ಟ್ ವೇರ್ ನ ನಾನೇ ಮಾಡಿದೆ ಸಾರ್ ! ನನಗೆ ಸಂಪಾದನೆಗೆ ಈಗ ಪುಸ್ತಕದ ಅಂಗಡಿ ಇಟ್ಟಿದ್ದೇನೆ. ಇದು ನನ್ನ ಸಮಾಜ ಸೇವೆ ! ಆದರೆ ಒಂದು, ನಾವಿಲ್ಲಿದ್ದೇವೆ ಅಂತ ಯಾರಿಗೂ ಹೇಳ್ಬೇಡಿ.” ಅಂದ. ನನ್ನ ಚಿನ್ನದ ಸರವನ್ನು ಮತ್ತು ಮೊಬೈಲನ್ನು ಮತ್ತೆ ನನಗೇ ಕೊಟ್ಟ !!

ನಾನು ಯಾವ ಸ್ಥಿತಿಯಲ್ಲಿದ್ದೆ ಆಗ ಅಂತ ನನಗೆ ಗೊತ್ತೇ ಆಗಲಿಲ್ಲ. ಕಾರು ಹತ್ತಿದ ಮೇಲೆ ಕಾರ್ ಶುರುವಾದ ಶಬ್ದಕ್ಕೆ ಬೆಚ್ಚಿ ಬಿದ್ದೆ. ಅಮ್ಮ ತಲೆ ನೇವರಿಸಿದರು. ಅದೇ ಮಾಂಸದ ಅಂಗಡಿಯ ಬೀದಿಯ ಮೂಲಕ ಹಾದು ಬಂದೆವು. ಅಮ್ಮ ” ಅಪರಾಧ ಸಹಸ್ರಾಣಿ…” ಹೇಳಿಕೊಳ್ಳುತ್ತಿದ್ದರು. ಅವರಿಗೆ ನಾನು ಸಿಕ್ಕಿದ್ದೆ. ನನಗೆ ನನ್ನ ಜೀವನವೇ ಸಿಕ್ಕಿತ್ತು. ಮಾನಸ ಸರೋವರದಲ್ಲಿ ನಾನು ಮುಳುಗಿ ಎದ್ದಿದ್ದೆ. ಇವರಿನ್ನು ಮುಳಗಬೇಕಷ್ಟೇ !

(ಮುಗಿಯಿತು)

ಜನವರಿ 18, 2009

ಆತ್ಮಹತ್ಯೆ

Filed under: lalita prabandha — saagari @ 5:20 ಅಪರಾಹ್ನ

ಇದು ನಾನು ಬರೆಯಲೆತ್ನಿಸಿರುವ ಮೊದಲ ಲಲಿತ ಪ್ರಬಂಧ. ಸಿಕ್ಕಾಪಟ್ಟೆ ಉದ್ದ ಆಯ್ತು ಆದ್ದರಿಂದ ಎರಡು ಭಾಗದಲ್ಲಿ ಹಾಕ್ತಿದಿನಿ. ಇದು ಮೊದಲನೆಯ ಭಾಗ.

*************************************************

ಜಗಳಗಳಿಗೆ ಕಾರಣ ಬೇಕಿಲ್ಲ, ಯುದ್ಧಗಳಿಗೂ ಇತ್ತೀಚೆಗೆ ಹೇಳಿಕೊಳ್ಳುವಂತಹ ಮುಖ್ಯಕಾರಣ ಬೇಕಿಲ್ಲ. ನಮ್ಮ ಮನೆಯಲ್ಲಿ ನಡೆದಿದ್ದು ಜಗಳವೋ, ಯುದ್ಧವೋ ಗೊತ್ತಿಲ್ಲ. ಆದರೆ ಅದು ಅವೆರಡರ ಸಮಾನಾಂಶವಾದ ಭೀಕರತೆಯನ್ನು ಹೇರಳವಾಗಿ ಹೊಂದಿತ್ತು.

ಉಚ್ಛ ಸ್ವರದ ಮಾತಿಂದ ಒಂದು ಕರಾಳ ದಿನದ ಬೆಳಂಬೆಳಿಗ್ಗೆ ಆರಂಭವಾದ ನನ್ನ ಮತ್ತು ನನ್ನ ಕುಟುಂಬದ ಸದಸ್ಯರೊಂದಿಗಿನ ಜಗಳ ಅದು ಯಾವ ಘಳಿಗೆಯಲ್ಲಿ ಯುದ್ಧಕ್ಕೆ ತಿರುಗಿತೋ ನನಗೆ ಇಂದಿಗೂ ನೆನಪಾಗುತ್ತಿಲ್ಲ. ಮಾತಲ್ಲೆ ಅಸ್ತ್ರ ಪ್ರತ್ಯಸ್ತ್ರಗಳನ್ನು ಪ್ರಯೋಗಿಸುತ್ತಿದ್ದೆವು. ಕಡೆಗೊಂದು ಅಸ್ತ್ರಕ್ಕೆ ನಾನು ಬಲಿಯಾದೆ. ಅದೇ ” ಎಲ್ಲಾದರೂ ಹೋಗಿ ಸಾಯಿ! ನಮಗೆ ನಿನ್ನಂಥವರ ಅವಶ್ಯಕತೆ ಇಲ್ಲ. ನೀನು ಸತ್ತರೆ ಯಾರೂ ಅಳುವುದೂ ಇಲ್ಲ! ನಾವಂತೂ ಒಂದು ಹನಿ ಕಣ್ಣೀರು ಹಾಕೆವು. ತೊಲಗು! ” ಎಂಬ ಮಾತುಗಳು.

ತಾಳ್ಮೆ ತಲೆಯ ತಾರ್ಸಿಯಿಂದ ಎಂದಿಗೋ ಹಾರಿಹೋಗಿತ್ತು. ಬುದ್ಧಿಯೂ ಆವಿಯಾಗಿ ಅನಂತ ದಿಙ್ಮೂಢತೆ ವ್ಯಾಪಿಸಿತ್ತು. ಮನೆಯಿಂದ ಆ ಕ್ಷಣವೇ ಹೊರಟುಬಿಟ್ಟೆ. ಎಲ್ಲಿಗೆ ಪಯಣ ಅಂತ ನನಗೇ ಗೊತ್ತಿಲ್ಲ. ಕಾಲು ಹೋದ ಕಡೆ ದೇಹ ಚಲಿಸುತ್ತಿತ್ತು, ಆದರೆ ಮನಸೆಲ್ಲಿ ಹಾರಿಹೋಗಿತ್ತೋ !

ನಮ್ಮ ಮನೆಯಿಂದ ಅನತಿದೂರದಲ್ಲಿ ಒಂದು ಪಾಳು ಬಾವಿ ಇದೆಯೆಂದು ನನಗೆ ನ್ಯೂಸ್ ಪೇಪರ್ ಮುಖಾಂತರ ಗೊತ್ತಿತ್ತು. ಯಾಕಂದರೆ ಅಲ್ಲಿ ಆತ್ಮಹತ್ಯೆಗಳು ಬಹಳವಾಗಿ ಆಗುತ್ತಿತ್ತು. ಆ ಬಾವಿಯನ್ನು ಮುಚ್ಚಲು ಶತಪ್ರಯತ್ನ ನಡೆದಿದ್ದರೂ ಅದನ್ನು ಮಾಡಲು ಎಲ್ಲರೂ ಹೆದರುತ್ತಿದ್ದರು. ಮುನ್ನೆಡೆಯುತ್ತಿರುವ ಭಾರತ ದೇಶದ ಬುದ್ಧಿವಂತಿಕೆಗೆ ಅಪವಾದವೆಂಬಂತೆ ದೆವ್ವ ಭೂತಗಳ  ಮತ್ತು ಪ್ರೇತಲೀಲೆಯ ನಂಬಿಕೆಗಳೂ ಅಲ್ಲಿ ತಾಂಡವವಾಡುತ್ತಾ, ಜನರ ಧೈರ್ಯಗೆಡಿಸಿ, ಆ ಬಾವಿ ಹಾಗೇ ಪಾಳುಬಿದ್ದಿತ್ತು. ಆ ಬಾವಿ ಸಾಕ್ಷಾತ್ ಮೃತ್ಯುಕೂಪವೆಂದೂ, ಅಲ್ಲಿ ಸತ್ತವರು ಅಂತರ್ಪಿಶಾಚಿಯಾಗಿಯೇ ಆಗುತ್ತಾರೆಂದು, ಎಲ್ಲಿ ಸತ್ತರೂ ಅಲ್ಲಿ ಮಾತ್ರ ಸಾಯಬಾರದೆಂಬ ಕುಖ್ಯಾತಿಯನ್ನು ಆ ಬಾವಿ ಪಡೆದಿತ್ತು. ಆದರೆ, ಈ ಬಾವಿ ಎಲ್ಲಿದೆ ಎಂದು ನಿಖರವಾಗಿ  ನನಗೆ ಗೊತ್ತಿರಲಿಲ್ಲ.

ದುಡ್ದು ಮರೆತರೂ, ನನ್ನ ಹೆಸರನ್ನೇ ಮರೆತರೂ, ನನ್ನ ನೋಕಿಯಾ ನ್ಯಾವಿಗೇಟರ್ ಮೊಬೈಲನ್ನು ನಾನು ಮರೆಯುತ್ತಲೇ ಇರಲಿಲ್ಲ. ಮನೆಯಲ್ಲಿ ಎಷ್ಟೇ ಘೋರವಾದ ಯುದ್ಧ ವಾಗ್ವಾದಗಳು ನಡೆದಿದ್ದರೂ ನನ್ನ ಕೈ ನನ್ನ ಮೊಬೈಲನ್ನು ಕೈಬಿಟ್ಟಿರಲಿಲ್ಲ. ನನ್ನ ಕೈಯ ಜಾಣ್ಮೆಯನ್ನು ಮೆಚ್ಹಿದೆ. ನ್ಯಾವಿಗೇಟರ್ ನಲ್ಲಿ ಬಾವಿಯನ್ನು ಹುಡುಕಿ, ಅಲ್ಲಿ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಿನ ಮೂಲೆ ಮೂಲೆಗಳಲ್ಲಿದ್ದ ಧೈರ್ಯವನ್ನು ಒಟ್ಟುಗೂಡಿಸಿ ದೃಢ ನಿರ್ಧಾರ ಮಾಡಿದೆ. ನಿರ್ವಿಘ್ನವಾಗಿ, ಮೊದಲನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿ ಸಾಯಬೇಕೆಂದು ನಿರ್ಧರಿಸಿ ನನ್ನ ಸಾವು ನಿರ್ವಿಘ್ನವಾಗಿ ನೆರವೇರಲಿ ಎಂದು ಗಣಪತಿಯಲ್ಲಿ ಬೇಡಿಕೊಂಡೆ.

ಆದರೆ ನನ್ನ ಪ್ರಾರ್ಥನೆ ದೇವರನ್ನು ಮುಟ್ಟಲಿಲ್ಲ ಎಂಬುದು ” ನೊ ಮ್ಯಾಚಸ್ ಫೌಂಡ್ ” ಎಂಬ ನನ್ನ ನ್ಯಾವಿಗೇಟರ್ ಉತ್ತರದಿಂದ ಗೊತ್ತಾಯ್ತು. ಏನೇ ಟೈಪಿಸಿದರೂ ಇದೇ ಉತ್ತರ! ವೆಲ್ಲ್, ಓಲ್ಡ್ ವೆಲ್ಲ್, ಎಂಬುದು ಎಲ್ಲೂ ಕಾಣಿಸಲಿಲ್ಲ. ಮಿಕ್ಕೆಲ್ಲ ಬಿಲ್ಡಿಂಗಿನ , ರಸ್ತೆಗಳ ನಕ್ಷತ್ರ ಕುಲ ಗೋತ್ರಗಳು ಮೊಬೈಲಲ್ಲಿ ರಾರಾಜಿಸುತ್ತಿದ್ದವು, ಪಾಳು ಬಾವಿ ಮತ್ತು ಅದರ  ಕಡೆಗೆ ಹೋಗುವ ದಾರಿಯೊಂದನ್ನು ಬಿಟ್ಟು. ದೇವರು ಕೈಬಿಟ್ಟರೇನೆ ಮನುಷ್ಯ ಸಾಯುವುದು ಎಂಬುದು ತಲೆಗೆ ತೋಚಿತು. ಆ ಸಮಯದಲ್ಲಿ ನಾನು ವೇದಾಂತದ ಉತ್ತುಂಗಕ್ಕೆ ಹೋಗಿದ್ದೆನೇನೋ, ಎಲ್ಲವೂ ನಶ್ವರ ಎಂದು ಒಂದು ವಿಕಟನಗೆ ಬೀರಿದೆ.

ಮನೆಯಲ್ಲಿ ಸತ್ತಿದ್ದರೇನೇ ಚೆನ್ನಾಗಿತ್ತು ಅನ್ನಿಸಿತು ನನಗೆ ಒಂದು ನಿಮಿಷ. ಆದರೆ ಅಲ್ಲಿ ಕೆಲವು ಸಮಸ್ಯೆಗಳಿದ್ದವು. ನೇಣು ಹಾಕಿಕೊಲ್ಳಲು ಸೀರೆ, ಫ್ಯಾನುಗಳಿದ್ದವಾದರೂ ನಿಲ್ಲಲು ಸರಿಯಾದ ಎತ್ತರದ ಸ್ಟೂಲಿರಲಿಲ್ಲ. ಮಂಚದ ಮೇಲೆ ನಿಂತುಕೊಂಡು ನೇಣು ಹಾಕಿಕೊಳ್ಳಲು ಆಗುವುದಿಲ್ಲ. ವಿಷದ ಬಾಟಲಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಮತ್ತೆ ಮನೆಯವರ ಬಳಿ ಕೈಚಾಚುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆ. ಫೆನಾಯಿಲು ಮುಗಿದಿದೆ ಎಂದು ಕೆಲಸದವಳು ನೆನ್ನೆಯೇ ಹೇಳಿಬಿಟ್ಟಿದ್ದಳು. ನಿದ್ರೆ ಮಾತ್ರೆ ನಮ್ಮ ಮನೆಯಲ್ಲಿ ದುರದೃಷ್ಟವಷಾತ್ ಯಾರೂ ನುಂಗುತ್ತಿರಲಿಲ್ಲ. ಮನೆಯಲ್ಲಿ ಸಾಯುವ ಯಾವ ದಾರಿಯೂ ನನಗೆ ಅನುಕೂಲಕರವಾಗಿರಲಿಲ್ಲ. ಹೊರಗೆ ಸಾಯದೇ ವಿಧಿಯಿರಲಿಲ್ಲ.

ಮನಸ್ಸಿಗೆ ಬಂದ ಯೋಚನೆಯನ್ನು ನೀರಿನ ಗುಳ್ಳೆ ಒಡೆದಂತೆ ಒಡೆದು ಹಾಕಿ, ಈಗ ಬಾವಿಯ ವಿಳಾಸ ಪತ್ತೆ ಮಾಡುವ ದಾರಿ ಯೋಚಿಸತೊಡಗಿದೆ. ಬೆಂಗಳೂರಿನಂಥಾ ಮಹಾನಗರದಲ್ಲಿ ಮನೆಗಳನ್ನ ಹುಡುಕುವುದೇ ಮಹಾಕಷ್ಟ. ಇನ್ನು ಬಾವಿಗಳನ್ನು ಹುಡುಕುವುದು ಹೇಗೆ ? ಕೇವಲ ೨೭ ಪ್ರತಿಶತ ಕನ್ನಡಿಗರನ್ನು ಮಾತ್ರ ಹೊಂದಿರುವ ಈ ಭವ್ಯ ನಗರಿಯಲ್ಲಿ ಹತ್ತು ಜನರಿಗೆ ಇಬ್ಬರು ಕನ್ನಡಿಗರು ಸಿಗುತ್ತಾರೆ. ಬೆಂಗಳೂರಿಗರಲ್ಲದವರು, ಕನ್ನಡೇತರರಿಗೆ ಆಂಗ್ಲದಲ್ಲಿ ಕೇಳಿದರೆ ಅತೀ ಸುಲಭದ ಉತ್ತರವಾದ ” I don’t know” ಕೇಳಸಿಗುತ್ತದೆ. ಮತ್ತೆ ಕೆಲವರು ಎಫ್ ಎಮ್ ಕೇಳುವಲ್ಲಿ ಲೀನರಾಗಿರುತ್ತಾರಾದ್ದರಿಂದ, ನಮ್ಮ ಪ್ರಶ್ನೆ ಅವರಿಗೆ ಕೇಳಿತೋ ಬಿಟ್ಟಿತೋ, ಅಡ್ಡಡ್ಡ ತಲೆಯ್ಲಲ್ಲಾಡಿಸುತ್ತಾರೆ. ಇನ್ನು ಕನ್ನಡಿಗರು ಸಿಕ್ಕರೂ ಅವರಿಗೆ ವಿಳಾಸ ಗೊತ್ತಿರಲಿ ಬಿಡಲಿ, ನಾವು ಯಾಕೆ ಆ ವಿಳಾಸಕ್ಕೆ ಹೋಗುತ್ತಿದ್ದೇವೆ ಎಂಬ ಕೆಟ್ಟ ಕುತೂಹಲವಂತೂ ಇದ್ದೇ ಇರುತ್ತದೆ. ನಾನು “ಪಾಳು ಬಾವಿ ಎಲ್ಲಿದೆ ಹೇಳ್ತಿರಾ ?” ಎಂದು ಕೇಳಿ, ಅವರು “ನೀವು ಸಾಯಕ್ಕೆ ಹೋಗ್ತಿದೀರಾ ?  ಸಾಯಕ್ಕೆ ನಿಮಗೇನ್ ಬಂದಿದೆ ಧಾಡಿ ?” ಎಂದೆಲ್ಲ ಮರುಪ್ರಶ್ನೆಗಳ ಸುರಿಮಳೆಗರೆದು,  ನನ್ನನ್ನು ಬಾಯಿ ತೆರೆಯಲೂ ಬಿಡದೆ “ಸಾಯ್ಬೇಡಿ! ಹಾಗೆಲ್ಲಾ ಸಾಯೋ ಯೋಚನೆ ಮಾಡ್ಬಾರ್ದು. ಈಸಬೇಕು ಇದ್ದು ಜೈಸಬೇಕೆಂದು ದಾಸರು ಹೇಳಿಲ್ಲವೇ ? ” ಎಂದೆಲ್ಲಾ ವೇದಾಂತ ಶುರು ಮಾಡುತ್ತಾರೆ. ಇದನ್ನು ಕೇಳುತ್ತಲೇ ಕ್ಷಣ ಮಾತ್ರದಲ್ಲೇ ಜನ ಜಮಾಯಿಸಿ ಎಲ್ಲರೂ ನಾವೇಕೆ ಸಾಯಲು ಹೊರಟಿದ್ದೇವೆ, ಸಾಯಲು ಇರುವ ಕಾರಣ ಸಾಧುವೇ ಅಲ್ಲವೇ ಎಂಬಿತ್ಯಾದಿ ಮಹತ್ವದ ವಿಚಾರಗಳ ಬಗ್ಗೆ ಬೇಡದಿದ್ದರೂ ಚರ್ಚಿಸಿ, ನಮಗೆ ಕೇಳುವ ಇಚ್ಛೆಯಿಲ್ಲದಿದ್ದರೂ ತಮ್ಮ ಇಂಗಿತ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ನಮ್ಮನ್ನು ಇಬ್ಬಂದಿಗೆ ಸಿಕ್ಕಿಸುತ್ತಾರೆ. ಆದ್ದರಿಂದ ಸಾಯಲು ಹೋಗುವಾಗ ನಾವು ಯಾರನ್ನೂ ಮಾತಾಡಿಸದಿದ್ದರೆ ಒಳಿತು. ಆಗ ನಾವು ಹೇಗೆ ಸಾಯಬೇಕು ಎಂಬುದರ ಬಗ್ಗೆ ಮತ್ತಷ್ಟು ಏಕಾಗ್ರತೆಯಿಂದ ಯೋಚನೆ ಮಾಡಬಹುದು.

ಆದ್ದರಿಂದ ನಾನು ಪಾಳು ಬಾವಿಯ ವಿಳಾಸ ಯಾರನ್ನೂ ಕೇಳಬಾರದೆಂದು ನಿರ್ಧರಿಸಿದೆ. ಹೇಗೂ ಮನೆಬಿಟ್ಟಾಗಿದೆ, ಬಾವಿಯನ್ನು ಹುಡುಕಿ ಸತ್ತೇ ಸಾಯಬೇಕೆಂದು ತೀರ್ಮಾನಿಸಿದೆ. ಗಣಪತಿ ಕೈಬಿಟ್ಟರೇನು ? ಅವರಪ್ಪ ಶಿವನಿಲ್ಲವೇ ? ಅವನ ಪಾದ ಸೇರಬೇಕೆಂಬ ನನ್ನ ಉತ್ಕಟವಾದ ಆಕಾಂಕ್ಷೆಯನ್ನು ಶಿವ ನೆರವೇರಿಸಿಯೇ ತೀರುತ್ತಾನೆಂದು ಬಲವಾದ ನಂಬಿಕೆಯಿತ್ತು. ಆ ನಂಬಿಕೆಯಿಂದಲೇ ನಡೆದೂ  ನಡೆದೂ ಮುಖ್ಯ ರಸ್ತೆಗೆ ಬಂದು ತಲುಪಿದೆ.

ರಸ್ತೆಯಲ್ಲಿ ಎಲ್ಲಿ ನಿಂತು ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚನೆ ಮಾಡುವುದು ಎಂಬುದು ನನ್ನ ಮುಂದಿನ ಸಮಸ್ಯೆ ಆಯ್ತು. ರಸ್ತೆ ಮಧ್ಯದಲ್ಲಿ ನಿಂತು ಯೋಚನೆ ಮಾಡಲು ನಾನು ಸಿನೆಮ ಹೀರೋ ಅಲ್ಲ. ಫುಟ್ ಪಾತ್ ಎಂಬುದು ಮಹಾನಗರದಲ್ಲಿ ಇನ್ನು ನಾಮಾವಶೇಷ ಮಾತ್ರ, ನಡೆಯಲು ದಾರಿಗೊತ್ತಿಲ್ಲ, ಪಯಣದಲ್ಲಿ ಸಂಗಡಿಗರಿಲ್ಲ. ಇಂತಹ ಬರಗೆಟ್ಟ ಪರಿಸ್ಥಿತಿಯನ್ನು ನಾನು ಹಿಂದೆಂದೂ ಎದುರಿಸಿರಲಿಲ್ಲ. ಇದ್ದಿದ್ದರಲ್ಲಿ ಸೇಫ್ ಜಾಗವೆಂದು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಂತೆ.

ದಾರಿತೋರದೇ ನಾನು ಓದಿದ ಪಾಳು ಬಾವಿ ಆತ್ಮಹತ್ಯಾಕಾಂಡದ ತುಣುಕುಗಳನ್ನು ನೆನಪಿಸಿಕೊಳ್ಳತೊಡಗಿದೆ. “….ಪಾಳು ಬಾವಿಯಲ್ಲಿ ಬಿದ್ದು ಸತ್ತಿದ್ದಾರೆ…..ಸುತ್ತ ಮುತ್ತಲಿನ ಮಾಂಸದಂಗಡಿಯವರ ಕಣ್ಣು ತಪ್ಪಿಸಿ…. “ಎಂದು ನೆನಪಾದೊಡನೇ ನನಗೆ ಪಾಳು ಬಾವಿಯ ದಾರಿ ಹೊಳಿಯಿತು. ದಾರಿಯಲ್ಲಿರುವವರನ್ನು “ಮಾಂಸದಂಗಡಿ ಬೀದಿ ಎಲ್ಲಿದೆ ಹೇಳ್ತಿರಾ” ಎಂದರೆ ಹೆಚ್ಚು ಪ್ರಶ್ನೆ ಕೇಳದೇ ದಾರಿ ತೋರಿಸುತ್ತಾರೆಂದು ಸಂತೋಷಿಸಿ, ಒಬ್ಬರನ್ನು ಕೇಳಿದೆ. ಅವರು ” ಮುಂದೆ ಒಂದು ಬಸ್ ಸ್ಟಾಪ್ ಬರತ್ತೆ…ಅಲ್ಲಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ, ಅದೇ ಬೀದಿ ” ಎಂದರು. ನಾನು ನನ್ನ ಕೃತಜ್ಞತೆಯನ್ನು ನಗೆಯಲ್ಲಿ ಸೂಚಿಸಿ ಮುಂದೆ ನಡೆದೆ.

ಬ್ರಾಹ್ಮಣ ಸಂಪ್ರದಾಯದವರು ನಾವು. ಬೀಟ್ ರೂಟನ್ನೇ ಮಾಂಸದ ಸಮಾನವೆಂದು, ತಿನ್ನಬಾರದೆಂದು ನಮ್ಮ ಅಜ್ಜಿ ತಾತ ಕಟ್ಟಪ್ಪಣೆಗೈದಿದ್ದರು. ನಾನು, ಮನೆಯ ಕುಲಪುತ್ರಿ, ಮಾಂಸದ ಬೀದಿಯಲ್ಲಿ ಎಡಗಾಲಿನ ಉಂಗುಷ್ಟವನ್ನಿಟ್ಟರೂ ಮಾನಸ ಸರೋವರದಲ್ಲಿ ಮುಳುಗಿ ಪಾಪ ತೊಳೆದುಕೊಳ್ಳಬೇಕೆಂದು ಕಟ್ಟಾಜ್ಞೆ ಹೊರಡುತ್ತಿತ್ತು. ನಡೆದುಕೊಂಡೇ ಹೋಗೆನ್ನುತ್ತಿದ್ದರೇನೋ ಹಿರಿಯರು…ಪಾಪ ಸವೆಯಲಿ ಅಂತ.  ಮನೆಯವರೇ ನನ್ನ ಕಡೆಗಾಣಿಸಿದಮೇಲೆ ಕಟ್ಟಲೆಗಳ ಕಾಟವೇಕೆ ಎಂದುಕೊಂಡು ಧೈರ್ಯವಾಗಿ ಮಾಂಸದ ಅಂಗಡಿ ಬೀದಿಯಲ್ಲಿ ಬಲಗಾಲಿಟ್ಟೆ.

ಕಾಲಿಟ್ಟ ಕೂಡಲೆ ಮೇಕೆ ಕುರಿಗಳ, ಕೋಳಿಗಳ ಆರ್ತನಾದ ಕೇಳಿಸಿ ಮನಸ್ಸನ್ನು ಕಡೆಗೋಲು ಹಾಕಿ ಕಡೆದಂತಾಯ್ತು. ಕತ್ತೆತ್ತಿ ನೋಡಲು ಧೈರ್ಯವಿಲ್ಲ, ರಕ್ತ ಕಂಡರೆ ಭಯ ಬೇರೆ ! ಅದಕ್ಕೆ ನಾನು ಪ್ರಾಣ ಹೋದರೂ ಡಾಕ್ಟರ್ ಆಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ. ಕತ್ತು ಬಗ್ಗಿಸಿ ನಡೆದರೆ ಜನರಿಗೆ ಅನುಮಾನ ಬಂದು ಅವರು ನನ್ನ ಆತ್ಮಹತ್ಯೆಯ ಪ್ರಯತ್ನಕ್ಕೆ ಭಂಗ ತಂದರೆ ? ಕತ್ತೆತ್ತಿ ನೋಡಿದರೆ  ಪ್ರಾಣಿ ಹತ್ಯೆ ಕಂಡು ನನಗೆ ಭಯವಾಗಿ ನಾನು ಕಿಟಾರನೆ ಚೀರುತ್ತೇನೆಂದು  ಗೊತ್ತಿತ್ತು. ಕಣ್ಮುಚ್ಚಿ ನಡೆಯುವುದು ಅಸಾಧ್ಯ. ಏನಪ್ಪಾ ಈ ಗತಿ ಬಂತು ನನಗೆ ಅಂತ ನನ್ನನ್ನು ನಾನೇ ಹಳಿದುಕೊಂಡೆ. ಕಡೆಗೆ, ಲೋಕಾಭಿರಾಮವಾಗಿ ಎಲ್ಲೆಡೆ ನೋಡುತ್ತಾ ನಡೆದರೆ ಜನರಿಗೆ ಅನುಮಾನ ಬರುವುದಿಲ್ಲ ಅಂತ ಅನ್ನಿಸಿ, ಸಾಯುವಾಗ ಧೈರ್ಯ ಇರ್ಬೇಕು…ಸಾಯೋ ಪ್ರಾಣಿಗಳನ್ನ ನೋಡಿ ಧೈರ್ಯ ತಗೋಬೇಕೆಂದು ತೀರ್ಮಾನಿಸಿದೆ.  ಸ್ಲೋ ಮೋಷನ್ನಲ್ಲಿ ಕತ್ತೆತ್ತುವುದು ಹೇಗೆ ಮಾಡಬೇಕೆಂದು ಜನ ನನ್ನನ್ನ ನೋಡಿ ಕಲಿಯಬೇಕೆಂದೆಸಿತು…ಅಷ್ಟು ನಿಧಾನಕ್ಕೆ ಕತ್ತೆತ್ತಿದೆ.

ಅಷ್ಟೊತ್ತಿಗೆ ಯಾವ್ದೋ ಅಂಗಡಿಯಲ್ಲಿ ಹೆಂಗಸೊಬ್ಬಳು ಕುರಿ ಬೇಕು..ಅಂದಳು. ಅವ ಕುರಿಯನ್ನು ಎಳೆತಂದ. ಅದೇ ಸಮಯದಲ್ಲಿ ರೇಡಿಯೋ ನಲ್ಲಿ “ಕೊಲ್ಲೇ ನನ್ನನ್ನೇ…”ಅಂತ ಶುರುವಾಗಿದ್ದೇ ಅವ ಅತ್ಯುತ್ಸಾಹದಿಂದ ಕುರಿಯ ತಲೆಯನ್ನು ಕಚಕ್ಕನ್ನಿಸಿದ. “ಬ್ಯಾ ಬ್ಯಾ” ಎಂಬ ಆರ್ತ ಧ್ವನಿಯಲ್ಲಿ ಕುರಿ ಅಸು ನೀಗಿತು. ನಾನು ನನ್ನ ಜೀವನದಲ್ಲಿ ಅದೇ ಮೊದಲು ಪ್ರಾಣಿ ಹತ್ಯೆಯನ್ನು ನೋಡಿದ್ದು. ಚೀರಲೂ ಸಹ ನನ್ನಲ್ಲಿ ಶಕ್ತಿಯುಳಿಯಲಿಲ್ಲ..ಅದೆಷ್ಟು ಬೇಗ ಆಗಿಹೋಯ್ತೆಂದರೆ…ನಾನು ಕಣ್ಣನ್ನೂ ಮಿಟುಕಿಸಿರಲಿಲ್ಲ!

ನಾನೇ ಕುರಿಯೆಂಬಂತೆ, ಆ ಮಾತುಗಳೇ ಮಚ್ಚಾಗಿ, ಸಮಾಜವೆಂಬ  ಬಲಿಪೀಠದ ಮೇಲೆ ನಮ್ಮ ಮನೆಯವರೇ ನನ್ನನ್ನು ಬಲಿ ಹಾಕುತ್ತಿರುವ ಹಾಗೆ ಭಾಸವಾಯ್ತು ನನಗೆ. ಸತ್ತ ಮೇಲೆ ಎಲ್ಲಾ ಸರಿಹೋಗತ್ತೆ ಅನ್ನಿಸಿತು. ನೋವಾದರು ಅದು ಕ್ಷಣಿಕ, ಶಾಶ್ವತ ಮುಕ್ತಿ ಮುಖ್ಯ ಅನ್ನಿಸಿತು. ಸಾವು ತನ್ನ ತೋಳ್ಬೀಸಿ ನನ್ನನ್ನು ಕರೆದಂತೆ ಆಯ್ತು . ಆ ಕರೆಯಲ್ಲಿ ನನಗೆ ಎಲ್ಲಿಲ್ಲದ ಆತ್ಮೀಯತೆ ಕಂಡುಬಂತು. ಕರೆಗೆ ಓಗೊಟ್ಟು ಬಾವಿಯಲ್ಲಿ ಬಿದ್ದು ಸಾಯಲೇಬೇಕೆಂದು ದಡ ದಡ ಧಾವಿಸಿದೆ. ಆ ಓಟದಲ್ಲಿ ನಾನು ರಸ್ತೆ ಕೊನೆ ತಲುಪಿದೆನೆ ಹೊರತು ಹೊರತು ಬಾವಿ ಕಾಣಲಿಲ್ಲ. ಬಲಕ್ಕೆ ತಿರುಗಲೋ ಏದಕ್ಕೆ ತಿರುಗಲೋ ಎನ್ನುವುದು ನನ್ನ ಮುಂದಿನ ಸಮಸ್ಯೆಯಾಯ್ತು. ಬಲಕ್ಕೆ ನೋಡಿದೆ. ಅಲ್ಲಿ ಜನರ ಸಂಚಾರ ಹೆಚ್ಚಿತ್ತು. ಎಡಕ್ಕೆ ತಿರುಗಿದೆ. ಅಲ್ಲೊಂದು ಮುರಿದು ಬಿದ್ದ ಗೇಟಿತ್ತು. ಪಾಳು ಬಿದ್ದಂತಾ ಜಾಗ, ಮುರುಕಲು ಮನೆ. ಇದೇ ಪಾಳು ಬಾವಿಯ ಜಾಗ ಎಂದು ನನ್ನ ಅತೀಂದ್ರಿಯ ಪ್ರಜ್ಞೆ ಹೇಳಿತು. ಎಲ್ಲೇ ಹೋದರೂ ಮೊದಲು ಬಲಗಾಲಿಟ್ಟು ಹೋಗಬೇಕಾದ್ದರಿಂದ, ಯಶಸ್ವಿಯಾಗಿ ಸಾಯಲು ಇಚ್ಛಿಸಿ ಆ ಪಾಳು ಬಾವಿಯ ಜಾಗಕ್ಕೆ ಬಲಗಾಲಿಟ್ಟೆ.

ಒಳಬಂದು ಆ ಜಾಗವನ್ನು ಸ್ಥೂಲವಾಗಿ ಪರೀಕ್ಷಿಸಿದೆ. ಹುಲ್ಲೆಲ್ಲಾ ಎತ್ತರೆತ್ತರಕ್ಕೆ ಬೆಳೆದಿತ್ತು. ಇನ್ನೂ ಎಂಥೆಂತದೋ ಗಿಡಗಳು. ಹೆಸರು ಹುಡುಕುವ ಗೋಜಿಗೆ ಹೋಗಲಿಲ್ಲ. ಗಿಡದ ಮಧ್ಯ ಹಾವಿದ್ದು, ಅದು ನನ್ನನ್ನೇ ಹುಡುಕಿಕೊಂಡು ಬಂದು ಕಚ್ಚಿ,  ಬೇಗ ಪ್ರಾಣ ಹೋಗಲಪ್ಪಾ…ಬದುಕು ನನಗೆ ಸಾಕಾಗಿ ಹೋಗಿದೆ ಎನ್ನಿಸಿತು. ಹುಲ್ಲುಗಳ ಮಧ್ಯವೇ ನಡೆದೆ. ಹಾವಿರಲಿ…ನನ್ನ ಬರಗೆಟ್ಟಾ ಹಣೇಬರಹಕ್ಕೆ ಇರುವೆಯೂ ಕಚ್ಚಲಿಲ್ಲ. ಹುಲ್ಲು ಗಿಡಗಳ ಆಚೆ, ಕಡೆಗೂ ನಾನು ನೋಡಲು ಆಶಿಸುತ್ತಿದ್ದ, ಬೀಳಲು ತವಕಿಸುತ್ತಿದ್ದ ಪಾಳು ಬಾವಿ ಕಾಣಿಸಿತು. ಆದರೆ ಬಾವಿ ಕಟ್ಟೆಯ ಮುಂದೆ ಕಪಾಳಕ್ಕೆ ಹೊಡೆದಂತೆ ಒಂದು ಬೋರ್ಡ್ ಕಾಣಿಸಿತು – ”  Closed for renovation”

ಬೋರ್ಡ್ ನೋಡಿದ ತಕ್ಷಣ ನನ್ನ ಜಂಘಾಬಲವೇ ಉಡುಗಿ ಹೋಯಿತು. ನಾನು ಸಾಯುವ ದಿನವೇ ಇವರಿಗೆ ನವೀಕರಣಕ್ಕೆ ಸುಮುಹೂರ್ತವೇ ? ನನ್ನ ಗ್ರಹಚಾರ ಈಮಟ್ಟಿಗೆ ಕೆಟ್ಟಿದೆ ಎಂದು ನಾನು ಖಂಡಿತಾ ಎಣಿಸಿರಲಿಲ್ಲ. ಆ ಕ್ಷಣಕ್ಕೆ ಆತ್ಮಹತ್ಯೆಯ ಬೇರೆ ವಿಧಾನಗಳೂ ತೋಚಲಿಲ್ಲ. ತಲೆ ತಿರುಗಿದ ಹಾಗಾಯ್ತು. ಆದರೂ, ಇಷ್ಟೆಲ್ಲಾ ಕಷ್ಟಪಟ್ಟ ಮೇಲೆ ಸಾಯದಿದ್ದರೆ ನಾನು ಸಾಯಲು ಪಟ್ಟ ಇಚ್ಛೆಗೇ ಅವಮಾನ ಅನ್ನಿಸಿತು.”Break the rules purposefully”ಅನ್ನೋದೂ ಒಂದು ನಿಯಮ. ಇದನ್ನ ಭಾರತೀಯರು ಅತ್ಯಂತ ಶಿಸ್ತಿನಿಂದ  ಪಾಲಿಸುತ್ತಾರಾದ್ದರಿಂದ ಅಪ್ಪಟ ಭಾರತೀಯಳಾದ ನಾನು ಇದನ್ನು ಪಾಲಿಸಲು ಇಚ್ಛಿಸಿದೆ. ಬೋರ್ಡನ್ನು ಒಮ್ಮೆ ಅತಿ ತಿರಸ್ಕಾರ ಭಾವದಿಂದ ನೋಡಿ, ಅದನ್ನು ದಾಟಿ ಬಾವಿಕಟ್ಟೆಯ ಬಳಿಗೆ ಬಂದೇಬಿಟ್ಟೆ. ಇನ್ನೇನು ಎಗರಿ ಬೀಳಬೇಕು…..ಅಷ್ಟರಲ್ಲಿ, ” ಬೀಳಬೇಡಿ…ನಿಲ್ಲಿ !!!!!” ಅಂತ ಕೂಗಿದರು ಯಾರೋ. ನಾನು ಆ ಕೂಗನ್ನೂ ಸಹ ಕಡೆಗಾಣಿಸಿ ಎಗರಲು ಮುಂದೆ ವಾಲಿದೆ.

[ಮುಂದುವರೆಯುವುದು]

ನವೆಂಬರ್ 28, 2008

ಮಳೆಯಲ್ಲಿ ಅಳಬೇಕು !

Filed under: ಜಸ್ಟ್ ಲೈಕ್ ದಟ್ — saagari @ 12:02 ಫೂರ್ವಾಹ್ನ

ಮಳೆ  ಕೆಲವರಿಗೆ romantic, ಕೆಲವರಿಗೆ  irritating, ಮತ್ತೊಬ್ಬರಿಗೆ ಮತ್ತಿನ್ನೇನೊ! ಆದರೆ ನಾನು ಚಾರ್ಲಿ ಚಾಪ್ಲಿನ್ ಅವರ ಮಾತನ್ನು ಅನುಮೋದಿಸುತ್ತೇನೆ. ಮಳೆ ಬಂದಾಗ ನಾವು ಅತ್ತರೆ ಯಾರಿಗೂ ಕಾಣುವುದಿಲ್ಲ ಅನ್ನುವ ಅವರ ಮಾತು ತುಂಬಾ ನಿಜ. ನಾನು ಅಳುವುದು ಇಂಥಾ ಸಂದರ್ಭಗಳಲ್ಲಿಯೇ.

ಅನಿರೀಕ್ಷಿತ ಮಳೆಯಾದರೆ ಸಂದರ್ಭ ತಂತಾನೆ ಒದಗಿ ಬಂದಹಾಗಾಗುತ್ತೆ. ದಿನಗಟ್ಟಲೆ ತಡೆದಿಟ್ಟುಕೊಂಡಿರುವ ಯಾರದೋ ಮೇಲಿನ ಸಿಟ್ಟು, ಫಲಕೊಡದ ನನ್ನ ಪಾಕಪ್ರಯೋಗಗಳು, ಬ್ಲಾಗ್ ಅಪ್ಡೇಟ್ ಮಾಡಲು ಹೊರಟಾಗ ಡೌನಾಗುವ ಸರ್ವರ್ರು..ಇವೆಲ್ಲದರ ಮೇಲೆ ನಾನು ಆಗಾಗಲೇ ಕಿರ್ಚಾಡಿದರೆ ಜನ ಹುಬ್ಬೇರಿಸುತ್ತಾರೆ…ಶಾಂತ ಸ್ವಭಾವದವರು ಹೀಗೆ ಜ್ವಾಲಾಮುಖಿಯಂತೆ ಹೇಗಾದರಪ್ಪಾ ಅಂತ.ಅದಕ್ಕೆ ಯಾರ್ಗೂ ಗೊತ್ತಾಗ್ದೆ ಇರೋ ಹಾಗೆ ಅಳ್ಬೇಕು ಯಾವಾಗ್ಲು. ನಮ್ಮ ಅಳು, ದುಃಖ ಮತ್ತು ಕೋಪದ ಕಾರಣ ಕೇಳುವಷ್ಟು ವಿವೇಕಿಗಳಾಗಿಲ್ಲ ಜನ ಇನ್ನು…ಕೋಪಕ್ಕೆ ಕೋಪವೇ ಉತ್ತರ ಅಷ್ಟೆ ಅನ್ನೋ ಲೆವೆಲ್ಲಲ್ಲೇ ಇದಾರೆ…ಇರ್ಲಿ ಪಾಪ…ಇಷ್ಟಾ ಬಂದಾಗ ಮೇಲೆ ಬರ್ಲಿ ಜನ.No compulsion.

ಮಳೆ ನೋಡ್ತಾ ಅಳೋದು ಒಂಥರಾ. ಆಗ ಮನೆಯಲ್ಲಿ ಯಾರೂ ಇರ್ಬಾರ್ದು. ಮಳೆ ಥರಾನೆ ನಾವು ಒಂದೇ ಸಮ ಅತ್ತುಬಿಡಬೇಕು. ಗುಡುಗಿದಾಗ ಜಾಸ್ತಿ ಬಿಕ್ಕಳಿಸೋದು…ಮಿಂಚಿದಾಗ ಸಮಾಧಾನದ ನಗು ಬೀರೋದು ಇದೆಲ್ಲಾ ಆಗ್ಬೇಕು. ಆಗ್ಲೆ ಮಳೆಯ ಪ್ರಯೋಜ್ನ ಆಗೋದು.

ಇನ್ನೊಂದು ಮಳೇಲಿ ನೆನೆಯುತ್ತಾ ಅಳೋದು. ಇದು ನನ್ನ ಫೇವರೆಟ್. ಛತ್ರಿ ನಾಮ್ಕೆ ವಾಸ್ತೆ ಇಟ್ಕೊಳ್ಳೋದು. ದುಪಟ್ಟ ನ ಸ್ಕಾರ್ಫ್ ಹಾಗೆ ಸುತ್ತ್ಕೊಳ್ಳೋದು…ರಸ್ತೆಯ ನೀರಲ್ಲಿ ಟಪ ಟಪ ಕಾಲ್ ಹಾಕೋದು…ಬೇಕಂತಲೇ ಹೈ ಹೀಲ್ಡ್ ಚಪ್ಪಲಿ ಹಾಕಿ ಕಾಲ್ ಉಳುಕಿಸಿಕೊಳ್ಳೋದು…ಛತ್ರಿ ಮುಚ್ಚಿ, ಕಾಲ್ ಎಳೆದುಕೊಂಡು ಕುಂಟುತ್ತಾ ನಡೆಯೋದು. ಅದು ಅಳುವಿಗೆ ಸ್ಟಾರ್ಟಿಂಗ್ ಪಾಯಿಂಟು. ಕುಂಟುತ್ತಾ ಅತ್ಕೊಂಡ್ ಹೋಗ್ತೀವಲ್ಲಾ…ಸಾರ್ಥಕ ಅಳು ಅದು. ಜೀವನದಲ್ಲಿ ನಾವು ತಪ್ಪು ಬೇಕಂತಲೇ ಮಾಡಿರ್ತಿವೋ, ಗೊತ್ತಿಲ್ದೇ ಮಾಡಿರ್ತಿವೋ…ಎಲ್ಲಾ ಆವಾಗ್ಲೆ ನಮ್ಮ ಕೈಕೊಟ್ಟ ಹೀಲ್ಸ್ ಚಪ್ಪಲಿ ರೂಪದಲ್ಲಿ ನೆನಪಾಗ್ತವೆ. ನಮಗರಿವಿಲ್ಲದಂತೆಯೇ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿರುತ್ತೇವೆ.

ಇನ್ನು ನಾಸ್ಟಾಲ್ಜಿಯಾ ಅಳು. ಈ ಅಳುಗೆ ಮನೆಯ ಬಾಲ್ಕನಿ ಸರಿಯಾದ ಜಾಗ. ಬಾಲ್ಕನಿ ಇಲ್ದೇ ಇದ್ದೋರು ಅವರ ರೂಮಿನ ಕಿಟ್ಕಿಗೆ compromise ಮಾಡ್ಕೊಳ್ಳಿ. ಕೈಯಲ್ಲಿ ಒಂದು ಕಪ್ ಕಡಕ್ ಚಹಾ…(ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು) ಹೆಗಲ ಮೇಲೆ ದಪ್ಪ ಕರ್ಚೀಫು.. ಉಯ್ಯಾಲೆಯೋ ಚೇರೋ ನೆಲವೋ..ಯಾವ್ದಾದ್ರು ಸರಿ..ಅದರಮೇಲೆ ಕೂತು… ಹಿಂದೆ ಯಾರೊಂದಿಗೋ ಕುಡಿದ ಕಾಫಿ/ಟೀ/ ಜ್ಯೂಸು ನೆನೆಸಿಕೊಂಡು ಸಂತೋಷಕ್ಕೋ ದುಃಖಕ್ಕೋ ಅಳೋದು…ಇನ್ನು ಆ ಸಮಯ ಬರಲ್ವಲ್ಲಾ…ಅಂತ. ಅಥ್ವಾ…ಇಂಥಾ ಮಳೆಲಿ ಅವನ/ಅವಳ ಜೊತೆ ಬಿಸಿಬಿಸಿಯಾಗಿ ಚಹಾ ಹೀರುತ್ತಾ ಬೆಚ್ಚಗೆ ಇರ್ಬಹುದಿತ್ತು… ನಾ ಹೋಗಲಾರದೇ/ ಅವಳು ಸಿಗಲಾರದೇ/ ಅವ ಕರೆಯದೇ/ ನಾನ್ ಕೇಳದೇ..ಅನ್ಯಾಯ ಮಳೆ ವೇಸ್ಟ್ ಆಗೋಯ್ತಲ್ಲಾ ಅನ್ನೋ ಜಿಗುಪ್ಸೆ…ಮೊಟ್ಟಮೊದಲ ಕ್ರಶ್ಷ್ಹು…ಅವ ಬೇರೆ ಹುಡ್ಗಿ ಗೊತೆ ಹೋದಾಗ ಆದ ಹಾರ್ಟ್ ಬ್ರೇಕು..ಮತ್ತೊಂದಿಷ್ಟು ಬ್ರೇಕಪ್ಪು ಪ್ಯಾಚಪ್ಪುಗಳು…ಪ್ರೊಪೋಸಲ್ , ರಿಜೆಕ್ಷನ್ ಗಳು…ಹ್ಮ್ಮ್ಮ್ಮ್ಮ್…ಇವೆಲ್ಲಾ ನೆನೆಸ್ಕೊಂಡ್ ಚೆನ್ನಾಗಿ ಅತ್ತುಬಿಡಬೇಕು…ಅಮೇಲೆ ತಪ್ಪದೆ ಶುಂಟಿ ಹಾಕಿದ ಚಹಾ ಕುಡಿಬೇಕು. ತಲೆ ನೋವಿದ್ದ್ರೆ  ಮುಂದಿನ ಮಳೆಯಲ್ಲಿ ಅಳಕ್ಕೆ  interest  ಇರಲ್ಲ.

ಹೀಗೆ ಅತ್ತ ಮೇಲೆ ಯಾರಿಗೇನಾಗತ್ತೋ ಬಿಡತ್ತೋ, ನನಗಂತೂ ಒಂಥರಾ ಸಮಾಧಾನ ಆಗತ್ತೆ. ಮನುಷ್ಯರಿಗೆ ನನ್ನ ಮಾತು ಕೇಳುವ ವ್ಯವಧಾನ ಇದ್ಯೋ ಇಲ್ವೊ, ಆ ಪ್ರತ್ಯೊಂದು ಮಳೆಹನಿ ನನ್ನ ಮಾತು ಕೇಳಿಸಿಕೊಂಡ ಹಾಗಾಗತ್ತೆ ನನಗೆ. ಜನ ನನ್ನ ಮಾತನ್ನು ಮುಂದೆ ಹೊಗಳಿ ಹಿಂದೆ ತೆಗಳಬಹುದು…ಆದ್ರೆ ಈ ಮಳೆ ಹನಿಗಳು ನಿಶ್ಕಲ್ಮಷ. ಅವು ಸ್ಪಂದನೆಯ ಮುಖವಾಡ ಹಾಕೊಲ್ಲ, ನಿಜವಾಗಿಯೂ ಸ್ಪಂದಿಸುತ್ತವೆ. ಅವುಗಳ ಸ್ಪರ್ಶದಲ್ಲಿ ಅದೆಂಥದ್ದೋ ಮಮತೆ, ಅದೆಂಥದ್ದೋ ಸಾಂತ್ವನ. ಮನುಷ್ಯರು ತಿಪ್ಪರ್ಲಾಗ ಹಾಕಿದ್ರೂ ಕೊಡಕ್ಕಾಗಲ್ಲ ಇಂಥಾ ಸಂತ್ವಾನ ನ.

ನನಗೆ ಮಳೆಯಲ್ಲಿ ಯಾಕಪ್ಪಾ ಅಳಾಬೇಕು ಅನ್ನಿಸತ್ತೆ ಅಂದ್ರೆ ಮೇಲಿಂದ ಕೆಳಗೆ ಬಿದ್ದು ಒಡೆದರೂ ಮಳೆ ಹನಿ ಮತ್ತೆ ಒಟ್ಟುಗೂಡಿ ಹನಿಯಾಗುತ್ತದೆ. ಇಂಥದ್ದೇ ಜಲಮೂಲಗಳ ಆಸೆಯಿಲ್ಲದೇ ಎಲ್ಲದರಲ್ಲೂ ಒಂದೇ ಭಾವದಿಂದ ಒಡಗೂಡುತ್ತದೆ. ಮಣ್ಣಿಗೆ ಹೋದರೂ ಕೆಳಗೆ ಸೇರಿ ಮುಂದೆ ಬಾವಿಯಾಗುತ್ತದೆ. ಬದುಕಿನ ಹೋರಾಟದಲ್ಲಿ ಕಾದಾಡಿ ಸುಸ್ತಾದವರಿಗೆ ಮಳೆ ಹೋರಾಟ ಮುನ್ನಡೆಸಲು ಸಾಂತ್ವನಪೂರ್ವಕ ಚೈತನ್ಯ ನೀಡುತ್ತದೆ. ಇದನ್ನು ಅನುಭವಿಸಲಿಕ್ಕಾದರೂ ಮಳೆಯಲ್ಲಿ ಅಳಬೇಕು !

ನನ್ನನ್ನು ತುಂಬಾ ಜನ ಕೇಳುವುದುಂಟು..ನೀನು ಜನರ ಹತ್ತಿರ ಹೆಚ್ಚು ಭಾವನಾತ್ಮಕವಾಗಿಲ್ಲ, ಸಖತ್ practical. ಕಡ್ಡಿ ತುಂಡಾದ ಹಾಗೆ ಮಾತಾಡ್ತೀಯ. ಆದ್ರೆ ಪ್ರಕೃತಿಯ ಹತ್ತಿರ ಹೆಚ್ಚು ಭಾವನಾತ್ಮಕವಾಗಿರ್ತಿ…ಯಾಕೆ ಅಂತ. ನಾನನ್ನುವೆ – ”  Earth deserves emotions, world does not ” ಅಂತ. ಇದು ಅರ್ಥವಾಗಬೇಕಿದ್ದರೆ ಒಮ್ಮೆ ಮಳೆಯಲ್ಲಿ ಅಳಬೇಕು !

PS : Quote ನನ್ನದು…ಕಾಪಿರೈಟ್ ಇದೆ ಅದಕ್ಕೆ 🙂

ನವೆಂಬರ್ 19, 2008

ದೇವಹಿತ

Filed under: Short stories — saagari @ 10:57 ಅಪರಾಹ್ನ

ನಾನು ಬರೆದ ಪ್ರಪ್ರಥಮ ಕಥೆಯನ್ನು ಓದುಗ ಬಂಧುಗಳಿಗೆ ಪ್ರಸ್ತುತಪಡಿಸುತ್ತಿದ್ದೇನೆ. ನಿಮ್ಮ ಸಲಹೆ, ಮಾರ್ಗದರ್ಶನ, ಅಭಿಪ್ರಾಯಗಳಿಗೆ ಸ್ವಾಗತ.

” ನೀವು ಈ ಮಗುವಿನ ಆಸೆ ಬಿಟ್ಟುಬಿಡಿ. ಈ ಔಷಧಿಯ ದುಷ್ಪರಿಣಾಮ ಹೇಳಿ ನಾನು ನಿಮ್ಮನ್ನು ಹೆದರಿಸಲಿಚ್ಛಿಸುವುದಿಲ್ಲ.”

ಭಯಗ್ರಸ್ಥ ತಂದೆತಾಯಿಗಳಿಗೆ ಡಾಕ್ಟರ್ ಹೀಗೆ ಹೇಳಿಬಿಟ್ಟರು. ಬೇರೊಬ್ಬ ವೈದ್ಯ  ಮಾಡಿದ ತಪ್ಪಿಗೆ ಮಗುವೊಂದನ್ನು ಬಯಸಿದ ನವವಿವಾಹಿತ ದಂಪತಿಗಳು, ಜೀವ ಪಡೆದುಕೊಳ್ಳಲು ಹವಣಿಸುತ್ತಿದ್ದ ಪುಟ್ಟಮಗುವೊಂದು, ಒಟ್ಟು ಮೂರು ನಿಶ್ಪಾಪಿ ಜೀವಗಳು ಶಿಕ್ಷೆಯನುಭವಿಸುತ್ತಿದ್ದವು.

ಡಾಕ್ಟರ್ ಮಾತು ಕೇಳಿದ ತಕ್ಷಣ ತಾಯಿ ಬಿಕ್ಕಿ ಬಿಕ್ಕಿ ಅತ್ತಳು. ಮೊದಲನೆಯ ಮಗುವದು. ಹೇಗೆ ಕಳೆದುಕೊಳ್ಳಲಾಗುತ್ತದೆ ?  ವಿಚಿತ್ರ ರೀತಿಯ ಉದರಬೇನೆಯೆಂದು ಡಾಕ್ಟರ್ ಬಳಿ ಹೋದರೆ ಡಾಕ್ಟರ್ ಅಪ್ಪೆಂಡಿಸೈಟಿಸ್ ಎಂದು ಯಾವುದೋ ಒಂದು ಮಾತ್ರೆ ಕೊಟ್ಟು ಆಪರೇಷನ್ನಿಗೆ ತಾರೀಖೂ ಗೊತ್ತು ಮಾಡಿ ಪ್ರೀ ಆಪರೇಟಿವ್ ಚಿಕಿತ್ಸೆಯೆಂದು ಮಾತ್ರೆಗಳ ಗಂಟನ್ನೇ ಕೊಟ್ಟರು. ಸ್ಕಾನಿಂಗ್ ಹೊಸದು ಆಗ, ದುಬಾರಿಯೂ ಸಹ. ಆದರೂ, ಸೆಕೆಂಡ್ ಒಪಿನಿಯನ್   ತೆಗೆದುಕೊಳ್ಳಬೇಕೆಂದು ಹಿರಿಯರೊಬ್ಬರು ಸಲಹೆ ನೀಡಿದ್ದು ಸಿಹಿಸುದ್ದಿ ತಂದಿದ್ದರೂ ಅದರಲ್ಲಿ ಕಹಿಯ ಪಾಲೇ ಹೆಚ್ಚಿತ್ತು.

ಅಳುತ್ತಿದ್ದ ತಾಯಿಗೆ ಅದೇಕೋ ಥಟ್ಟನೆ ವಿಚಿತ್ರ ಧೈರ್ಯ ಬಂದಿತು. ಡಾಕ್ಟರು ಅಬಾರ್ಷನ್ ಗೆ ಸೂಚಿಸಬಹುದೆಂದು ಆಕೆ ಎಣಿಸಿದಳು. ಮದುವೆಯಾಗಿ ಆರು ತಿಂಗಳು ಕಳೆದಿದ್ದವಷ್ಟೆ. ಜೀವನವೇನೂ ಮುಗಿದುಹೋಗಿರಲಿಲ್ಲ. ಮಗುವಿನ ಆಸೆ ಬಿಟ್ಟುಬಿಡಿ ಎಂದು ಪೀಠಿಕೆ ಹಾಕಿದ್ದು ಈ ಅನುಮಾನಕ್ಕೆ ಎಡೆಯಾಯ್ತು, ಮನಸ್ಸಿಗೆ ಬಹಳ ನೋವಾಗಿದ್ದರೂ, ನಿಧಾನವಾಗಿ ಸಾವರಿಸಿಕೊಳ್ಳುತ್ತಾ, ” ಡಾಕ್ಟರ್, ಒಂದು ಸ್ಕಾನಿಂಗ್ ಮಾಡಿ ಮಗು ಬದುಕಿದೆಯೋ ಇಲ್ಲವೋ ನೋಡಬಹುದಲ್ಲವೇ ?” ತಾಯಿಯ ಕರುಳನ್ನು ಅರಿತ ಡಾಕ್ಟರ್, “ನೋಡಿ ಮಾ, ಮಗು ಬದುಕಿದ್ದರೆ ನಮಗೆ ಬಹಳ ಸಂತೋಷ, ಆದರೆ ಆ ಮಗು ಭೂಮಿಗೆ ಬಂದರೆ ನಿಮಗೆ ಸಂತೋಷ ಹೆಚ್ಚುತ್ತೆ ಎಂದು ನಾನು ಖಂಡಿತಾ ಆಶ್ವಾಸನೆ ಕೊಡಲಾರೆ ” ಎಂದರು.

ತಾಯಿ ಸ್ವಲ್ಪ ಧೈರ್ಯ ಮಾಡಿ, ” ಡಾಕ್ಟರ್, ಈ ಔಷಧದ ಪರಿಣಾಮ ಏನಾಗತ್ತೋ ಹೇಳಿಬಿಡಿ. ನಾವು ಮನಸ್ಸು ಗಟ್ಟಿ ಮಾಡಿಕೊಂಡು ದೇವರ ಮೇಲೆ ಭಾರ ಹಾಕುತ್ತೇವೆ. ಕೊಡುವವನೂ ಅವನೇ, ಕಿತ್ತುಕೊಳ್ಳುವವನೂ ಅವನೇ ! ಅವನಾಟ ನಡೆಯಲಿ. ನಮ್ಮದೂ ಪ್ರಯತ್ನ ಮಾಡಿ ನೋಡಿಯೇ ಬಿಡುವ.ಆದರೆ ನಾನು ಅಬಾರ್ಷನ್ ಗೆ ತಯಾರಿಲ್ಲ. ಇದನ್ನು ದೇವರು ಮೆಚ್ಚುವುದಿಲ್ಲ”

ತಂದೆಯೂ ಕೂಡಾ ಒಂದು ಹತಾಶ ನೋಟ ಬೀರಿದರು.

ಡಾಕ್ಟರ್ ನಿಟ್ಟುಸಿರು ಬಿಟ್ಟು ” ನೋಡಿ, ಈ ಔಷಧದಿಂದ ಮೂರು ದುಷ್ಪರಿಣಾಮಗಳು ಆಗುವ ಸಾಧ್ಯತೆಯಿದೆ. ಒಂದು – ಮಗು ಈಗಾಗಲೇ ಸತ್ತಿರಬಹುದು. ಎರಡು- ಈ ಮಗುವಿನ ದೇಹ ಚೆನ್ನಾಗಿ ಬೆಳೆದು ಬುದ್ಧಿ ಮಂದವಾಗಿರಬಹುದು. ನೀವೇನೆ ಮಾಡಿದರೂ ಇನ್ನು ಸರಿಪಡಿಸಲಾಗುವುದಿಲ್ಲ. ಮೂರು, ಬುಧ್ಧಿ ಅತೀ ಚುರುಕಾಗಿದ್ದು, ಕೈಯ್ಯೋ ಕಾಲೋ ಇಲ್ಲದಿರುವ, ಅಥವ ಊನವಾಗಿರುವ ಮಗು ಹುಟ್ಟಬಹುದು. ನೀವು ನಂಬಿದ ದೇವರು ನಿಮ್ಮ ಪಾಲಿಗಿದ್ದರೆ, ಏನೂ ಆಗದೆಯೂ ಇರಬಹುದು. ”

ಬಹುದುಗಳಲ್ಲಿ ಇವರಿಬ್ಬರ ಬದುಕು ಬಸವಳಿದುಹೋಗಿತ್ತು. ತಾಯಿ ಒಂದು ನಿಮಿಷ ಹಾಗೆಯೇ ದಿಗ್ಭ್ರಾಂತಳಾದಳು. ತಂದೆಗೂ ಏನೂ ಮಾತಾಡಲು ತೋಚಲಿಲ್ಲ. ಇವರಿಬ್ಬರೂ ಮನೆದೇವರು ಕುಲದೇವತೆಗಳಿಗೆ ಹರಕೆ ಹೊತ್ತರು. ಮರುಕ್ಷಣವೇ ಸ್ಕಾನಿಂಗ್ ಮಾಡಿಸಿಬಿಡೋಣವೆಂದು ನಿಶ್ಚಯಿಸಿದರು.

ಸ್ಕಾನಿಂಗ್ ನಲ್ಲಿ ಮಗು ಬದುಕಿರುವುದು ತಿಳಿದುಬಂತು. ದೇವರು ಅವರನ್ನು ಕಾಪಾಡಿದ್ದ. ಆದರೆ ಇನ್ನೆರಡು ಸಾಧ್ಯತೆಗಳನ್ನು ನೆನೆಸಿಕೊಂಡು ಒಂಭತ್ತು ತಿಂಗಳನ್ನು ಒಂಭತ್ತು ಯುಗದಂತೆ ಕಳೆದರು. ಮದ್ಯರಾತ್ರಿಯಲ್ಲಿ ಹೆಣ್ಣು ಮಗುವೊಂದು ಜಗತ್ತು ಎಷ್ಟು ಸುಂದರವಾಗಿದೆ, ನೋಡಿಯೇಬಿಡೋಣವೆಂದು ಭೂಮಿಗೆ ಬಂದಿತು.

ಮಗು ಚುರುಕಾಗಿತ್ತು. ಬುದ್ಧಿಮಾಂದ್ಯವಾಗಿರಲಿಲ್ಲ. ಆದರೆ ಅದರ ಬೆಳವಣಿಗೆಯ ಬಗ್ಗೆ ಡಾಕ್ಟರು ಧೈರ್ಯಕೊಡಲಿಲ್ಲ. ಹೆಣ್ಣೆಂದು ಹಳಗಳಿಯದೇ ಹರನ ಹಸಾದವೆಂದು ಎದೆಗೊತ್ತಿ ಮುದ್ದಿಸಿದರು. ಡಾಕ್ಟರ ಊಹೆ ತಪ್ಪಾಗಿ ಬೆಳವಣಿಗೆ ಸಹಜವಾಗೇ ಇತ್ತು. ಆದರೆ, ಮಗುವಿನ ಬಣ್ಣ ಬೆಳ್ಳಗಿದ್ದದ್ದು ಬೆಳೆಯುತ್ತ ಕಪ್ಪಾಗುತ್ತಾ ಹೋಯಿತು. ಇನ್ನೇನಾದರೂ ಚರ್ಮರೋಗವಿರಬಹುದೆಂದು ಮತ್ತೆ ವೈದ್ಯರ ಬಳಿಗೆ ಹೋದಾಗ ಔಷಧವು ತನ್ನ ಕರಾಳಛಾಯೆಯನ್ನು ಬೀರಿಯಾಗಿದೆಯೆಂದು, ಪುಣ್ಯಕ್ಕೆ ಬೇರಾವ ಚರ್ಮರೋಗಕ್ಕೂ ಎಣೆಮಾಡಿಕೊಟ್ಟಿಲ್ಲ, ಬೆಳವಣಿಗೆಯಲ್ಲಿ ಏನೂ ತೊಂದರೆಯಿಲ್ಲ ಎಂದು ಹೇಳಿ ಧೈರ್ಯ ಹೇಳಿ ಕಳಿಸಿದರು. ಏನೇನೋ ಆಗಬೇಕಿದ್ದಿದ್ದು ಇಷ್ಟರಲ್ಲೇ ಮುಗಿಯಿತಲ್ಲ ಎಂದು ಮನೆದೇವರ ಹರಕೆ ತೀರಿಸಿ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದರು.

ಆ ಮಗುವಿಗೆ ಹರಿಣಿ ಎಂದು ಹೆಸರಿಟ್ಟರು. ಮಗು ಸಾಕ್ಷಾತ್ ಹರಿಣವೇ ! ಜಿಂಕೆಯಂಥಾ ಕಣ್ಣು, ಅದರಷ್ಟೆ ವೇಗದ ಓಡಾಟ.ಅರಳು ಹುರಿದಂತೆ ಮಾತು.  ಕಡಿದಿಟ್ಟ ಕಪ್ಪು ಶಿಲೆಯಂತೆ ರೂಪು. ಹರಿಣಿ ಎಲ್ಲರ ಕಣ್ಮಣಿಯಾಗಿ ವರ್ಷಗಳಿಗೆ ಜೀವ ತುಂಬುತ್ತಾ ಬೆಳೆದಳು.

ಹರಿಣಿಯ ಸ್ವಭಾವ ಜಿಂಕೆಯಷ್ಟೇ ಸಾಧು. ಎಲ್ಲವನ್ನು ಅವಳ ಕಣ್ಣೇ ಮಾತಾಡುತ್ತಿದ್ದವೇ ಹೊರತು ಅವಳು ಬಾಯಿ ಬಿಟ್ಟು ಅನಿಸಿಕೆಗಳನ್ನು ಹೇಳಿಕೊಂಡಿದ್ದು ಕಡಿಮೆ. ಹವ್ಯಾಸವಾಗಿ ಲೇಖನಿ ಹಿಡಿದಳು, ಕವನಗಳು ಹಾಳೆಗಳಲ್ಲಿ ನಲಿದಾಡಿದವು. ಅವಳು ಬರೆಯುತ್ತಿದ್ದ ಕಥೆಗಳ ಪಾತ್ರಗಳು ಸತ್ಯವೆಂಬಂತೆ ಭಾಸವಾಗುತ್ತಿದ್ದವು. ಒಮ್ಮೆ ಸುಮ್ಮನೇ ಕುಂಚ ಹಿಡಿದಳು…ಪ್ರಪಂಚ ಅವಳಿಗೆ ಇನ್ನಷ್ಟು ಸುಂದರವಾಗಿ, ಕಾವ್ಯಮಯವಾಗಿ ಕಂಡು ಆಕಾಶವೇ ಅವಳ ಚಿತ್ರಪಟ, ಕಾಮನಬಿಲ್ಲೇ ಬಣ್ಣದಾಗರವಾಯಿತು. ಈ ಕಲೆಯನ್ನ ಗುರುತಿಸಿದ ಹರಿಣಿಯ ತಂದೆತಾಯಿಗಳು ಅವಳನ್ನು ಚಿತ್ರಕಲಾ ಶಾಲೆಗೆ ಸೇರಿಸಿದರು. ಫೈನ್ ಆರ್ಟ್ಸ್ ನಲ್ಲಿ ಅಪ್ರತಿಮ ಸಾಧನೆಗಳನ್ನು ಹರಿಣಿ  ಮಾಡುತ್ತಿದ್ದಳು. ಕಲಾಸರಸ್ವತಿ ಅವಳಿಗೆ ಸಂಪೂರ್ಣವಾಗಿ ಒಲಿದಂತಿತ್ತು.

ಬಣ್ಣದ ಚಿತ್ತಾರವನ್ನು ಒಂದು ಕಪ್ಪುಮಸಿ ನುಂಗಿದಂತೆ, ಅವರ ಗೆಳತಿಯರೆಲ್ಲ ಇವಳು ಕಪ್ಪೆಂದು ಕೀಳಾಗಿ ಕಾಣುತ್ತಿದ್ದರು ! ಬಂಧುಗಳೂ ತಮ್ಮ ನಾಲಿಗೆಯನ್ನು ಸಾಕಷ್ಟು ಉದ್ದವೇ ಚಾಚಿದ್ದರು. ಆದರೆ ಹರಿಣಿ ಅವಳ ಹುಟ್ಟಿನ ಹಿಂದಿನ ಕಥೆಯನ್ನು ಯಾರಿಗೂ ಹೇಳಬಾರದೆಂದು ಕುಲಗುರುಗಳ ಫೋಟೋ ಎದುರು ಭಾಷೆತೆಗೆದುಕೊಂಡಿದ್ದಳು. ಅವಳಿಗೆ ಅನುಕಂಪದ ಅವಶ್ಯಕತೆ ಇರಲಿಲ್ಲ. ಸ್ವಭಾವ ಜಿಂಕೆಯದ್ದಾದರೂ ಸ್ವಾಭಿಮಾನ ಸಿಂಹದಂಥದ್ದು. ಅವಳು ಯಾರನ್ನೂ ಅವಲಂಬಿಸಿ ಬದುಕುತ್ತಿರಲಿಲ್ಲ…ಬಹಳ ಸ್ವಾವಲಂಬಿ. ಇಷ್ಟಕ್ಕೂ, ಬಣ್ಣ ಕಪ್ಪು ತಾನೆ ? ಇನ್ನೇನೂ ಇಲ್ಲವಲ್ಲ ! ಎಂದು ಅವಳೂ ವಿಷಯವನ್ನು ಅಷ್ಟೊಂದು ಹಚ್ಚಿಕೊಂಡಿರಲಿಲ್ಲ. ಬಂಧುಗಳ ಬಗ್ಗೆ ಕೆಲವೊಮ್ಮೆ ಕೋಪಬರುತ್ತಿತ್ತಾದರೂ ಅವಳಿಗೆ ಸಹನೆ ಸ್ವಲ್ಪ ಜಾಸ್ತಿಯೇ ಇತ್ತು. ಆದ್ದರಿಂದ ಅವಳ ಕೋಪದ ಕಟ್ಟೆ ಒಡೆದು ಅವಳು ಕೂಗಾಡಿ ಇಷ್ಟು ವರ್ಷ ಅವಳ ತಂದೆ ತಾಯಿ ಧಾರೆ ಎರೆದ ಸಂಸ್ಕಾರವನ್ನು ವ್ಯರ್ಥ ಮಾಡಲಿಚ್ಛಿಸದೇ ಮೌನವಾಗಿಯೇ ಎಲ್ಲ ಕುಹಕಗಳನ್ನು ಸಹಿಸುತ್ತಿದ್ದಳು. ಕಣ್ಣು ತುಂಬಿ ಬಂದರೂ ಅದನ್ನು ಕಾಣಗೊಡದೇ ಜಿಂಕೆ ಕಣ್ಣಿನ ಮುಗ್ಧನೋಟದಲ್ಲಿ ಎಲ್ಲ ನೋವನ್ನು ಕಾಣದಂತೆ ಅಡಗಿಸಿಟ್ಟಿದ್ದಳು. ಡಿಗ್ರಿಯ ಎರಡನೆಯ ವರ್ಷದವರೆಗು…..

ಅದೊಂದು ದಿನ ಸಾಯಂಕಾಲ ಎಂದಿನಂತೆ ತನ್ನ ಕ್ಯಾನ್ವಾಸು, ಹೊಸದೊಂದು ಚಿತ್ರ, ಪಾಲೆಟ್ಟ್ ಹೊತ್ತು ಬಣ್ಣಗೂಡಿದ್ದ ಕೈಗಳೊಂದಿಗೆ ಹರಿಣಿ ಮನೆಗೆ ಬಂದಳು. ಕಾಲಿಟ್ಟ ಕೂಡಲೇ ” ಭದ್ರಂ ಕರ್ಣೇಭಿಃ  ಶೃಣುಯಾಮ ದೇವಾಃ” ಶ್ಲೋಕ ಕೇಳಿಸಿತು. ತಕ್ಷಣ ಅವಳು ” ಭದ್ರ ಅಂಕಲ್ ” ಎಂದು ಕೂಗುತ್ತಲೇ ದೇವರಮನೆಯ ಕಡೆ ನೋಡಿದಳು.  ಆಗಷ್ಟೇ ಪೂಜೆ ಮುಗಿಸಿ ಈ ಶ್ಲೋಕವನ್ನು ಹೇಳುತ್ತಿದ್ದರು ಅನಂತರಾಮಯ್ಯ. ಆದರೆ ಹರಿಣಿಗೆ ಮಾತ್ರ ಇವರು ಭದ್ರ ಅಂಕಲ್ ಅಂತಲೇ ಪರಿಚಯ. ಭದ್ರಾವತಿಯಲ್ಲಿ ನೆಲೆಸಿದ್ದ ಇವರಿಗೆ ಭದ್ರ ಅಂಕಲ್ ಅಂತಲೇ ಹೆಸರಿಟ್ಟಿದ್ದಳು ಇವಳು. ಪ್ರತಿ ಬೇಸಿಗೆಯ ರಜೆಯಲ್ಲಿ ಭದ್ರಾವತಿಗೆ ಹೋಗದೇ ಇರುತ್ತಿರಲಿಲ್ಲ ಇವಳು. ಭದ್ರಾವತಿಯಿಂದ ಖುದ್ದು ಅಂಕಲ್ಲೇ ಬಂದಿದ್ದು ಇವಳಿಗೆ ಅತೀವ ಸಂತೋಷ ತಂದಿತ್ತು. ಅಂಕಲ್ ಪೂಜೆ ಮುಗಿಸಿಬಂದ ಮೇಲೆ ಹರಿಣಿಯನ್ನು ನೋಡಿ ” ಏನಮ್ಮಾ…ಕಾಗೆಬಂಗಾರ ? ಹೇಗಿದ್ದೀಯಾ ? ಮೈಕೈ ಎಲ್ಲ ಬಣ್ಣ ಮಾಡಿಕೊಂಡಿದ್ದೀಯಾ ? ಬಿಡು ಕಪ್ಪು ಬಣ್ಣದ ಮೇಲೆ ಇವೆಲ್ಲ ಎಲ್ಲಿ ಕಾಣತ್ತೆ ! ಬಣ್ಣ ಬಳಿದರೂ ಅಷ್ಟೇ, ಬಿಟ್ಟರೂ ಅಷ್ಟೇ ! ” ಎಂದು ನಕ್ಕರು.

ತಾಳ್ಮೆಯ ಅಣೆಕಟ್ಟನೊಡೆದು ಭೋರ್ಗರೆಯಲು ಹಾತೊರಯುತ್ತಿದ್ದ ಕೋಪವನ್ನು ಹರಿಣಿ ಹಾಗೆಯೇ ಮತ್ತೆ ಒಳಗೆ ತಳ್ಳಿದಳು. ಮುಗ್ಧ ನಗೆ ನಕ್ಕಳು.

ಭದ್ರ ಅಂಕಲ್ ಅಷ್ಟಕ್ಕೇ ನಿಲ್ಲಿಸುವ ಹಾಗೆ ಕಾಣಲಿಲ್ಲ. ” ಅಮ್ಮ ಶಾರದಾಂಬ, ನಿಮ್ಮ ಮಗಳಿಗೆ ಬೆಣ್ಣೆ ಹಚ್ಚಿ ಸ್ವಲ್ಪ, ಆಗ್ಲಾದ್ರೂ ಬೆಳ್ಳಗೆ ಆಗಬಹುದು.  ನಾನೇ ಬೆಣ್ಣೆ ಕಳಿಸ್ತೀನಿ ಬೇಕಿದ್ರೆ…ಬೆಂಗಳೂರಿನಲ್ಲಿ ಬೆಣ್ಣೆ ದುಬಾರಿ ಅಲ್ಲವೇ ? ನಿಮಗೆ ತೂಗಿಸಲು ಸಾಧ್ಯವಾಗತ್ತೋ ಇಲ್ವೋ !”

ಶಾರದಾಂಬಾ ಹಾಗೇ ಪಾತ್ರೆಯನ್ನು ಅಡಿಗೆಮನೆಯಲ್ಲಿ ಕುಕ್ಕಿ, ಒಮ್ಮೆ ನಕ್ಕರು. ಅವರಿಗೂ ಒಳಒಳಗೇ ಕೋಪ ಕುದಿಯುತ್ತಿತ್ತು. ಇನ್ನು ತಾನಲ್ಲಿದ್ದರೆ ಇನ್ನೂ ವ್ಯಂಗ್ಯವಾಡಬಹುದೆಂದು ಊಹಿಸಿದ  ಹರಿಣಿ, ಸ್ನೇಹಿತರ ಮನೆಗೆ ಹೋಗುವ ನೆಪದಲ್ಲಿ ಮನೆಯಿಂದ ಕಾಲ್ಕಿತ್ತಳು . ಪಾರ್ಕಲ್ಲಿ ಬಿಕ್ಕಿ ಬಿಕ್ಕಿ ಅತ್ತು, ಕಾಂಜಿಯ ನೀರಲ್ಲಿ ಮುಖ ತೊಳೆದು, ದಣಿದವಳಂತೆ ಮುಖ ಮಾಡಿಕೊಂಡು ಮನೆ ತಲುಪಿದರೆ ಭದ್ರ ಅಂಕಲ್ ಅವಳ ತಂದೆಯೊಂದಿಗೆ ಗಂಭೀರ ಚರ್ಚೆಯಲ್ಲಿ ನಿರತರಾಗಿದ್ದರು.

” ನೋಡೊ ಸದಾಶಿವ, ನೀನು ಹರಿಣಿಯನ್ನು ಬೆಳೆಸಲು ಎಷ್ಟು ಕಷ್ಟ ಪಟ್ಟಿದ್ಯಾ ಅಂತ ಗೊತ್ತು ಕಣೋ…ಆದ್ರೆ ಎಲ್ಲಾ ನೀರಲ್ಲಿ ಹೋಮ ಆಗೋಯ್ತಲ್ಲೋ, ಹುಡುಗಿ ಎಷ್ಟೋ ಕಪ್ಪೋ ! ಯಾರೋ ಮದುವೆ ಆಗ್ತಾರೆ ಇವ್ಳನ್ನ ? ಹೋಗ್ಲಿ, ತನ್ನ ಕಾಲ ಮೇಲೆ ತಾನೇ ನಿಂತುಕೊಳ್ಳೋ ಹಾಗೆ ಓದ್ಸಾದ್ರೂ ಓದ್ಸಿದ್ದ್ಯೇನೋ ? ಅವ್ಳು ಕಲೆ ಕಲೆ ಅಂತ ಕುಣಿದ್ಲಂತೆ, ಇವ್ನೂ ಅವಳ ತಾಳಕ್ಕೆ ಮೇಳ ಸೇರ್ಸಿದ್ದ್ನಂತೆ. ಆಡೊ ಅಂಥಾ ಮಾತೆನೋ ಇದು ? ನ್ಯಾಯವಾಗಿ ಡಾಕ್ಟರ್ರೋ ಎಂಜಿನಿಯರ್ರೋ ಮಾಡ್ಸೋದಲ್ವೇನೊ ? ಕಲೇಲಿ ಸಾಧನೆ ಮಾಡು ಅಂತ ಬಿಟ್ಟಿದಾನೆ. ಅವ್ಳೂ ಬ್ರಶ್ಶು ಕ್ಯಾನ್ವಾಸು ಇಟ್ಕೋಂಡ್ ಅಲಿತಿರ್ತಾಳೆ. ಮದ್ವೆ ಮಾಡಿ ಮನೇಲಿ ಬಿದ್ದಿರ್ಲಿ ನಾಕ್ ಗೋಡೆ ಮಧ್ಯ ಅಂದ್ರೆ ನೆಟ್ಟಗೆ ಮನೆ ಕೆಲ್ಸ ನೂ ಬರಲ್ಲ ಇವಳಿಗೆ ಅನ್ಸತ್ತೆ ನಂಗೆ. ಇಂಥಾ ಮಗಳು ಹುಟ್ಟುತ್ತಾಳೆ ಅಂತ ಮೊದ್ಲೆ ಗೊತ್ತಾಗಿದ್ದಿದ್ದ್ರೆ ನಿಂಗೆ ಎಷ್ಟೋ ಚೆನ್ನಾಗಿರ್ತಿತ್ತು. ಇಂಥವರು ಭೂಮಿಗೆ ಭಾರ ಕಣೋ. ಹೀಗಾಗತ್ತೆ ಅಂತ ಗೊತ್ತಿದ್ದಿದ್ದ್ರೆ ಮಗು ಬೇಡಾ ಅಂತಲೇ ಅನ್ನಬಹುದಿತ್ತಲ್ಲವೇನೋ ? ಮದ್ವೆ ಮಾಡಿರೂ ಅವ್ಳು ಸುಖವಾಗಿರಲ್ಲ ನೋಡು , ನಾನ್ ಬರ್ಕೊಡ್ತಿನಿ . ಸುಮ್ನೆ ಸನ್ಯಾಸಕ್ಕೆ ಅಟ್ಟಬೇಕಷ್ಟೆ….ನಿನಗೆ ಹೀಗಾಗಬಾರದಿತ್ತೋ ಸದಾ…”

ಸದಾಶಿವರಾಯರಿಗೆ ಮಾತಾಡಲು ಅವಕಾಶ ಕೊಡದೆ, ಬಿಕ್ಕುತ್ತಿದ್ದ ಶಾರದಾಂಬ ಅವರ ಮುಖವನ್ನು ಒಮ್ಮೆಯೂ ನೋಡದೇ ಭದ್ರ ಅಂಕಲ್ ಹೀಗೇ ಬಡಬಡಿಸುತ್ತಿದ್ದರು. ಈ ಬಡಬಡಿಕೆಯಲ್ಲಿ ಹರಿಣಿ ಬಂದದ್ದೂ ಅವರಿಗೆ ಕಾಣಿಸಲಿಲ್ಲ. ಹರಿಣಿ ಸಹನೆಯ ಕಟ್ಟೆ ಒಡೆದು ಹೋಯ್ತು. ಜೋರಾಗಿ ಬಿಕ್ಕಿದ್ದೇ ಒಮ್ಮೆಯೇ ಕೋಣೆ ಸೇರಿ ಬಾಗಿಲು ಭದ್ರಪಡಿಸಿದಳು. ಸದಶಿವರಾಯ ದಂಪತಿಗಳಿಗೆ ಒಮ್ಮೆಲೇ ದಿಗಿಲಾಯ್ತು. ಭದ್ರ ಅಂಕಲ್ ಗೂ ತಾವು ಆಡಿದ ಮಾತು ಮಿತಿ ಮೀರಿತೆಂದು ಆಗ ಅರಿವಾಯ್ತು. ಎಷ್ಟು ಬಾಗಿಲು ಬಡಿದರೂ ಹರಿಣಿ ಬಾಗಿಲು ತೆರೆಯಲೇ ಇಲ್ಲ. ಶಾರದಾಂಬಾ ಆಘಾತವನ್ನು ತಡೆಯಲಾಗದೇ ಪ್ರಜ್ಞೆ ತಪ್ಪಿ ಬಿದ್ದರು. ಸದಶಿವರಾಯರು ಕೋಪದಲ್ಲಿ ಅನಂತರಾಮಯ್ಯರನ್ನು ಆ ಕ್ಷಣವೇ ಮನೆ ಬಿಟ್ಟು ಹೋಗಬೇಕೆಂದು ಕಟುವಾಗಿಯೇ ಹೇಳಿದರು. ಆದರೆ ಅನಂತರಾಮಯ್ಯ ತನ್ನದು ತಪ್ಪಾಯ್ತೆಂದು, ಹರಿಣಿಗೆ ಏನಾದರೂ ಅದಕ್ಕೆ ತಾನೆ ಹೊಣೆಯೆಂದು, ಏನೂ ಆಗದಂತೆ ನಾನು ನೋಡಿಕೊಳ್ಳುವೆನೆಂದು ಸದಾಶಿವರಾಯರನ್ನು ಸಮಾಧಾನಗೊಳಿಸಿ ಡಾಕ್ಟರಿಗೆ ಫೋನ್ ಮಾಡಿದರು.

ಹೊರಗೆ ನಡೆಯುತ್ತಿರುವ ವಿಪ್ಲವ ಹರಿಣಿಗೊಂದೂ ತಿಳಿಯದಾಯ್ತು. ಅವಳ ಮನಸ್ಸು ಆಗಲೇ ಛಿದ್ರವಾಗಿಹೋಗಿತ್ತು. ಬಾಲ್ಯದಿಂದ ಹಿಡಿದು ಈವರೆಗಿನ ಅನೇಕ ಘಟನೆಗಳು ಅವಳ ಕಣ್ಮುಂದೆ ಹಾಗೇ ಹಾದು ಹೋಗುತ್ತಿದ್ದವು.ಅವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದು, ಅವಳ ತಂದೆ ತಾಯಿ ಅವಳಿಗೆ ಆತ್ಮಸ್ಥೈರ್ಯ ತುಂಬಲು ಹೆಣಗಾಡಿದ್ದು… ಎಲ್ಲ. ಅವರ ತಂದೆ ತಾಯಿ ಅವಳಿಗೆ ಅವಳ ಎಲ್ಲ ಕೆಲಸಗಳಿಗೆ ನೀಡುತ್ತಿದ್ದ ಉತ್ತೇಜನ ಒಂದೇ ಅವಳ ಆಸರೆ ಆಗಿತ್ತು. ಆದರೆ ಇವತ್ತು ಭದ್ರ ಅಂಕಲ್ ತಂದೆ ತಾಯಿಯ ಉತ್ಸಾಹವನ್ನೇ ಉಡುಗಿಸುವ ಪ್ರಯತ್ನ ಮಾಡಿದ್ದರು. ಅವಳಿಗೆ ಅದೇ ಬೇಜಾರು ತಂದಿತ್ತು. ಅವಳು ಜಗಳಕ್ಕೆ ನಿಲ್ಲಲು ಸಂಸ್ಕಾರ ಅಡ್ಡಬರುತ್ತಿತ್ತು, ಜಗಳವಾಡದೇ ಇರಲು ಮನಸ್ಸು ನಿರಾಕರಿಸುತ್ತಿತ್ತು. ಅವಳು  ತಂದೆ ತಾಯಿಗೆ ನೋಯಿಸದೇ, ಭದ್ರ ಅಂಕಲ್ ಗೆ ಪಾಠ ಕಲಿಸಲು ದಾರಿಗಾಣದೇ ಒದ್ದಾಡುತ್ತಿದ್ದಳು.

ಆಗ ಅವಳಿಗೆ ಒಂದು ದಾರಿ ತೋರಿತು. ಸ್ಟಡಿ ಟೇಬಲ್ ಕಡೆ ಹೆಜ್ಜೆ ಹಾಕಿದಳು…

****************************

ಡಾಕ್ಟರ್ ಬಂದು ಶಾರದಮ್ಮನವರಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಸದಾಶಿವರಾಯರಿಗೆ ಹೇಳಿ, ಔಷಧ ಕೊಟ್ಟು ಬೆಳಕು ಹರಿದೊಡನೆ ಪರಿಸ್ಥಿತಿಯನ್ನು ನೋಡಿ ಆಸ್ಪತ್ರೆಗೆ ಬನ್ನಿ ಎಂದು ಹೇಳಿದ್ದರು. ಸೂರ್ಯನ ಕಿರಣಗಳು ಕಿಟಕಿ ಮೂಲಕ ಬಂದು ಎಬ್ಬಿಸುವವರೆಗೂ ಮಂಚದ ಪಕ್ಕ ಕುರ್ಚಿಯಲ್ಲಿ ತೂಕಡಿಸಿದ್ದ ಸದಾಶಿವರಾಯರಿಗಾಗಲೀ, ಹಾಲಲ್ಲಿ ಚಾಪೆ ದಿಂಬಿನ ಆಸರೆಯಿಲ್ಲದೇ, ಹೊದಿಕೆಯ ನೆರವಿಲ್ಲದೇ ಮಲಗಿದ್ದ ಭದ್ರ ಅಂಕಲ್ಲಿಗಾಗಿ ಎಚ್ಚರವೇ ಇರಲಿಲ್ಲ. ಶಾರದಾಂಬಾ ಔಷಧಿಯ ಪರಿಣಾಮವೆಂಬಂತೆ ಇನ್ನು ಕಣ್ಣು ಬಿಟ್ಟಿರಲಿಲ್ಲ. ಮೊದಲು ಎದ್ದದ್ದು ರಾಯರು. ಮಲಗಿರುವ ಪತ್ನಿಯತ್ತ ಒಮ್ಮೆ ಪ್ರೇಮಪೂರ್ಣ ನೋಟ ಬೀರಿದರು. ” ನೀನನ್ನ ಬಿಟ್ಟು ಹೋದರೆ ನನ್ನಗತಿಯೇನು, ನಾವಿಬ್ಬರೂ ಕಳೆದ ಇಪ್ಪತ್ತು ವರ್ಷದಿಂದ ಸುಖ ದುಃಖಗಳಲ್ಲಿ ಜೊತೆಯಾಗಿದ್ದೀವಲ್ಲ, ನೀನೋಬ್ಳೆ ಮೊದಲು ಸ್ವರ್ಗಕ್ಕೆ ಹೋಗಬೇಕೆಂಬ ಸ್ವಾರ್ಥ ಯಾತಕ್ಕೆ ? ನಾನು ಬರುತ್ತೇನೆ ಇರು …. ” ಎಂಬು ಬೇಡಿಕೊಳ್ಳುವಂತಿತ್ತು ಆ ನೋಟ. ಥಟ್ಟನೆ ಅವರಿಗೆ ಹರಿಣಿಯ ನೆನಪಾಯ್ತು. ನೆನೆಯುವುದಾದರೇ ಕೆಟ್ಟದ್ದನ್ನೇ ಮೊದಲು ನೆನೆಯಬೇಕೆಂದು ಮನಸ್ಸಿನ ಅಲಿಖಿತ ನಿಯಮವೇನೋ ! ಹರಣಿಯ ಸ್ಥಿತಿಯೇನೆಂದು ರಾಯರು ಊಹಿಸಿ, ಅವಳು ನಮ್ಮನ್ನು  ಬಿಟ್ಟು ಹೊರಟೇ ಹೋಗಿದ್ದಾಳೆ ಎಂಬ ಊಹಾಸೌಧವನ್ನು ಕಟ್ಟಲು ಅವರಿಗೆ ಹೆಚ್ಚು ಸಮಯ ಬೇಕಿರಲಿಲ್ಲ. ಶಾರದಾಂಬರ ಸ್ಥಿತಿಯೂ ಗಂಭೀರವಾಗಿಯೇ ಇತ್ತು. ಇಬ್ಬರನ್ನ ಕಳೆದುಕೊಂಡು ತಾನು ಅನಾಥವಾಗುವ ಭಯ, ದುಃಖಗಳು ಉಮ್ಮಳಿಸಿಬಂದವು. ಒಮ್ಮೆಲೇ ಹರಿಣಿಯ ಕೋಣೆಗೆ ಧಾವಿಸಿದರು.

ಮುಚ್ಚಿದ್ದ ಹರಿಣಿಯ ಕೋಣೆಯ ಬಾಗಿಲು ತೆರೆದಿದ್ದನ್ನು  ನೋಡಿ ಮನಸ್ಸಿಗೆ ಅದೇನೋ ಒಂಥರಾ ಸಮಾಧಾನವಾಯ್ತು ರಾಯರಿಗೆ. “ಹರಿಣೀ…” ಎನ್ನುತ್ತಲೇ ಒಳಗೆ ಓಡಿಬಂದರು. ಕೋಣೆ ಖಾಲಿಯಿತ್ತು. ಬಚ್ಚಲುಮನೆಯ ಬಾಗಿಲೂ ತೆರೆದೇ ಇತ್ತು. ಕಿಟಕಿಗಳೆಲ್ಲ ಹಾಕಿಯೇ ಇದ್ದವು.ಆದರೆ ಹರಿಣಿ ಕಾಣಲಿಲ್ಲ. ಮಂಚದ ಮೇಲೆ ಎರಡು ಭದ್ರಪಡಿಸಿದ ಲಕೋಟೆಗಳಿದ್ದವು. ಸದಶಿವರಾಯರಿಗೆ ಗಾಬರಿಯಾಗಿ ಕಣ್ಣೆಲ್ಲಾ ಮಂಜಾಯ್ತು. ಹಾಗೆಯೇ ನೆಲಕ್ಕೆ ಬಿದ್ದರು. ಹೇಗೋ ಸಾವರಿಸಿಕೊಂಡು ಮಂಚ ತಲುಪಿ ಲಕೋಟೆಗಳನ್ನೊಮ್ಮೆ ನೋಡಿದರು. ಒಂದರ ಮೇಲೆ ” ಅಪ್ಪನಿಗೆ ” ಮತ್ತು ಇನ್ನೋದರ ಮೇಲೆ “ಭದ್ರ  ಅಂಕಲ್ ” ಎಂದು ಬರೆದಿತ್ತು. ಅವರಿಗೆ ಇಟ್ಟಿದ್ದ ಲಕೋಟೆಯನ್ನು  ಒಡೆದು ರಾಯರು ಪತ್ರವನ್ನು ಓದಲು ಪ್ರಾರಂಭಿಸಿದರು.

“ಅಪ್ಪ, ಕ್ಷಮೆ ಇರಲಿ. ನನಗೆ ಈ ಮನೆಯನ್ನು ತೊರೆಯದೇ ಬೇರೆ ದಾರಿಯಿರಲಿಲ್ಲ. ಹಾಗಂತ ನಾನು ಅತ್ಮ ಹತ್ಯೆ ಮಾಡಿಕೊಳ್ಳಲು ಹೊರಟಿದ್ದೇನೆ ಎಂದು ಭಾವಿಸಬೇಡಿ. ನಾನು ಬೇರೆಯೊಂದು ನೆಲೆಯನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ನನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದು ಅನಿವಾರ್ಯವಾಗಿದೆ. ಧೃತಿಗೆಟ್ಟು ಅನಾಹುತಕ್ಕೆ ಅವಕಾಶ ಮಾಡಿಕೊಡಬೇಡಿ. ನಾನು ಎಲ್ಲೇ ಇರಲಿ, ನಿಮ್ಮಾಶೀರ್ವಾದದಿಂದ ಖಂಡಿತಾ ಚೆನ್ನಾಗಿರಬಲ್ಲೆ. ನನ್ನನ್ನು ನಾನು ನೋಡಿಕೊಳ್ಳಬಲ್ಲೆ ಎಂಬ ವಿಶ್ವಾಸ ನನಗಿದೆ. ಆದರೆ ಅಮ್ಮನ ಬಗ್ಗೆ ಸ್ವಲ್ಪ ಭಯ, ಕಾಳಜಿ ಬಹಳ. ದಯವಿಟ್ಟು ಅವರನ್ನು ನೋಡಿಕೊಳ್ಳಿ. ಹರಿಣಿ ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾಳೆ, ಬರುತ್ತಾಳೆ ಅಂತ ಹೇಳಿ ಅವರನ್ನು ಸಂತೈಸಿ. ನಾವು ಮತ್ತೆ ಸಂತೋಷದಿಂದ ಇರಬೇಕಾದರೆ ಈ ಅಲ್ಪಾವಧಿಯ ವಿಯೋಗದ ಅವಶ್ಯಕತೆ ಇದೆ.

ಆಶೀರ್ವಾದ ಕೋರುತ್ತಿದ್ದೇನೆ ಅಪ್ಪ…ಇಲ್ಲವೆನ್ನಬೇಡಿ, ಮನಃಪೂರ್ವಕವಾಗಿ ಹರಸಿ.

ಹಾ…ಭದ್ರ ಅಂಕಲ್ ಗೆ ಆ ಲಕೋಟೆ ತಲುಪಿಸಿ. ನೀವು ಅದನ್ನು ಒಡೆಯದಿದ್ದರೆ ಚೆನ್ನ.

– ಹರಿಣಿ.

ಇದನ್ನು ನೋಡಿ ಸದಾಶಿವರಾಯರು ಕಿಂಕರ್ತವ್ಯಮೂಢರಾದರು. ಒಂದು ನಿಮಿಷದ ಮಟ್ಟಿಗೆ ಅವರು ಈ ಜಗತ್ತಲ್ಲೇ ಇಲ್ಲ ಎನ್ನುವಂತೆ ಭಾಸವಾಯ್ತು. ಎಲ್ಲಾ ಶೂನ್ಯವೆಂದು ಎನಿಸುತ್ತಿತ್ತು. ಆಗಸದ ಅನಂತ ಶೂನ್ಯತ್ವದಲ್ಲಿ ಅಲೆಮಾರಿಯಾಗಿ ಅಲೆಯುತ್ತಿದ್ದ ಅವರನ್ನು ಧುತ್ತೆಂದು ಧರೆಗಿಳಿಸಿದ್ದು ಶಾರದಾಂಬಾ ಅವರ ಅಳು. ರಾಯರ ಹಿಂದೆಯೇ ನಿಂತು ಅವರೂ ಪತ್ರವನ್ನು ಓದಿದ್ದರು. ದುಃಖ ಎಲ್ಲೆ ಮೀರಿ ಮತ್ತೆ ಶಾರದಾಂಬಾ ಪ್ರಜ್ಞಾಶೂನ್ಯರಾದರು. ಆಗಷ್ಟೇ  ಎದ್ದು ಕಣ್ಣುಜ್ಜುತ್ತಾ , ಇವರಿಬ್ಬರನ್ನು ಹುಡುಕುತ್ತಾ ಹರಿಣಿಯ ಕೋಣೆ ತಲುಪಿದ ಭದ್ರ ಅಂಕಲ್ ಅಳುತ್ತಿದ್ದ ಸದಾಶಿವರಾಯರು, ಪ್ರಜ್ಞಾರಹಿತರಾದ ಶರದಾಂಬಾರನ್ನು ನೋಡಿ, ಅವರೂ ಒಂದು ಕ್ಷಣ ಗಾಬರಿಯಾದರು. ನಂತರ ಅಂಬ್ಯುಲನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಭದ್ರ ಅಂಕಲ್ ಅನ್ನು ಮನೆ ನೋಡಿಕೊಳ್ಳಲು ಹೇಳಿದ ಸದಾಶಿವರಾಯರು, ಹರಿಣಿಕೊಟ್ಟಿದ್ದ ಕೋಟೆಯನ್ನು ಅವರ ಕೈಗೆ ಕೊಟ್ಟು “ನಿನಗೆ, ಹರಿಣಿ ಕೊಟ್ಟಿದ್ದು, ಓದು. ಮನೆ ಸಂಭಾಳಿಸು. ನಾನು ಆಸ್ಪತ್ರೆಯಿಂದ ಫೋನ್ ಮಾಡ್ತಿನಿ ” ಎಂದದ್ದೇ ಆಸ್ಪತ್ರೆಯೆಡೆಗೆ ಧಾವಿಸಿದರು.

ಅಂಬ್ಯುಲನ್ಸ್ ಹೊರಟ ಮೇಲೆ ಮನೆ ಬಾಗಿಲನ್ನು ಭದ್ರಪಡಿಸಿ ಹಾಲಲ್ಲಿ ಕುಳಿತು ಭದ್ರ ಅಂಕಲ್  ಲಕೋಟೆ ಒಡೆದರು. ಪತ್ರ ಓದುತ್ತಾ ಹಾಗೆಯೇ ಕುರ್ಚಿಯಿಂದ ಎದ್ದರು. ಏನು ಮನಸ್ಸು ಬಂತೋ, ಪತ್ರವನ್ನು ಓದಿದ ತಕ್ಷಣ ಮನೆಗೆ ಬೀಗ ಹಾಕಿ, ಎದುರು ಮನೆಯವರಿಗೆ ವಿಷಯ ತಿಳಿಸಿ, ಊರಲ್ಲಿ ಅವರ ಅಮ್ಮನ ಮೈ ಕೂಡಾ ಸರಿಯಿಲ್ಲ , ತಾವು ಹೊರಡದೇ ಬೇರೆ ದಾರಿಯಿಲ್ಲವೆಂದು ತಾವು ಹೊರಟ ಕಾರಣ ಹೇಳಿ, ಇದನ್ನು  ಸದಾಶಿವರಾಯರಿಗೆ ತಿಳಿಸಿಬಿಡಿ ಎಂದರು. ರಾಯರು ಅನ್ಯಥಾ ಭಾವಿಸಬಾರದಂತೆ ಎಂದು ವಿನಂತಿಸಿಕೊಂಡಿದ್ದೇನೆ ಎಂದು ತಿಳಿಸಿಬಿಡಿ ಎಂದೂ ಹೇಳದರು. ರಸ್ತೆಯ ಕಡೆಯಲ್ಲಿ ಮರೆಯಾಗಿ ನಿಂತು ಭದ್ರಾವತಿಗೆ ಫೋನ್ ಮಾಡಿ, ತಾವು ಊರಿಗೆ ಬರುವವರೆಗೂ ಯಾವ ಫೋನ್ ಕಾಲನ್ನೂ ರಿಸೀವ್ ಮಾಡಬಾರದೆಂದು ಕಟ್ಟಪ್ಪಣೆ ಮಾಡಿದರು. ಭಾರದ ಹೆಜ್ಜ ಹಾಕುತ್ತಾ ಬಸ್ ಸ್ಟ್ಯಾಂಡಿನ ದಾರಿ ಹಿಡಿದರು.

******************************

ಇತ್ತ ಶಾರದಾಂಬಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಹರಿಣಿ ಬರುತ್ತಾಳೆ, ಬಂದೇ ಬರುತ್ತಾಳೆ ಎಂದು ರಾಯರು ಅವರ ಕಿವಿಯಲ್ಲಿ ಉಸುರುತ್ತಲೇ ಇದ್ದರು. ..

*******************************

” ಸಾಯಂಕಾಲ ನಾಲ್ಕುವರೆಯ ಸುಮಾರಿಗೆ ಅಂಗಳದಲ್ಲಿ ಕಳಿತು ಹೆಸರುಕಾಳನ್ನು ಹಸನು ಮಾಡುತ್ತಿದ್ದರು ಶಾರದಾಂಬಾ. ರಾಯರು ಈಜೀ ಚೇರ್ ಮೇಲೆ ಕುಳಿತು ನ್ಯೂಸ್ ಪೇಪರ್ರನ್ನು ಮೂರನೆಯ ಸರ್ತಿ ಕೂಲಂಕುಷವಾಗಿ ಓದುತ್ತಿದ್ದರು.ಶ್ವೇತ ವರ್ಣದ ಕಾರೊಂದು ಮನೆಯ ಮುಂದೆ ನಿಂತಿತು. ಕಾರಿಂದ ಇಬ್ಬರು ಸೂಟು ಟೈಧಾರಿ ಹುಡುಗರು ಕೆಳಗಿಳಿದರು. ಗೇಟ್ ಮುಂದೆ ಬಂದು ನಿಂತು, “ಇದು ಹರಿಣಿಯವರ ಮನೆಯಲ್ಲವಾ ?” ಎಂದು ಕೇಳಿದರು. ದಂಪತಿಗಳಿಬ್ಬರಿಗೂ ಒಮ್ಮೆಲೇ ಸಖೇದಾಶ್ಚರ್ಯ ಆಯ್ತು. ಬರೋಬ್ಬರಿ ಒಂದು ವರೆ ವರ್ಷ, ಹರಿಣಿಗಾಗಿ ಇವರಿಬ್ಬರು ತಪಸ್ಸು ಮಾಡಿದ್ದರು. ಹರಿಣಿಯ ಹೆಸರು ಕೇಳಿದಾಕ್ಷಣ ಖುಶಿಯಾಗಿ, ” ಹೌದಪ್ಪ… ನೀವ್ಯಾರು ? ಎಲ್ಲಿಂದ ಬಂದಿರಿ ? ಹರಿಣಿ ಎಲ್ಲಿದ್ದಾಳೆ ಗೊತ್ತಾ ? ನಿಮ್ಮನ್ನು ಅವಳೇ ಕಳಿಸಿದಳಾ ? ” ಎಂದು ಒಮ್ಮೆಲೇ ಪ್ರಶ್ನೆಗಳ ಮಳೆಗೆರೆದರು. ಅವರು  ” ನಾವು ಪ್ಯಾರಾಡೈಸ್ ಗ್ರೂಪ್ ಆಫ್ ಹೋಟೆಲ್ಸ್ ನವರು. ಹರಿಣಿಯವರು ನಿಮ್ಮನ್ನು ಕರೆತರಲು ಹೇಳಿದ್ದಾರೆ . ದಯವಿಟ್ಟು  ಬನ್ನಿ ನಮ್ಮೊಡನೆ ” ಎಂದರು. ಇವರಿಗೆ ಮೊದಲು ಖುಷಿಯಾಯ್ತಾದರೂ, ಬೆಂಗಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ಕ್ರೈಮ್ ರೇಟ್  ಅವರಿಗೆ ಅನುಮಾನವೂ ತರಿಸಿತು. ಇದನ್ನು ಅರಿತ ಆ ಹುಡುಗರು ಫೋನ್ ನಲ್ಲಿ ಹರಿಣಿಯ ನಂಬರ್ ಡಯಲ್ ಮಾಡಿದರು. ಹರಿಣಿಯ ಮಾತು ಕೇಳಿ ದಂಪತಿಗಳಿಬ್ಬರು ಸಂತೋಷದಿಂದ ಕುಣಿಯುವುದೊಂದು ಬಾಕಿ. ಕೈಗೆ ಸಿಕ್ಕ ಸೀರೆ ಉಟ್ಟರು ಶಾರದಾಂಬ. ಆದರೆ ರಾಯರು ಇದು ಒಂಚೂರು ಚೆನ್ನಾಗಿಲ್ಲವೆಂದು ಜರಿದು, ಜರಿಯ ರೇಷ್ಮೆ ಸೀರೆ ಉಡಲು ಒತ್ತಾಯಿಸಿದರು. ಅವರು ಯಾವುದೋ ಅಂಗಿ ತೊಟ್ಟಾಗ ಬೈಯ್ಯುವ ಸರದಿ ಶಾರದಾಂಬನವರದ್ದಾಗಿತ್ತು. ರೇಷ್ಮೆ  ಶರ್ಟನ್ನು ತೊಡಲು ಆಜ್ಞೆ ಮಾಡಿದರು. ಸರಿ ಇಬ್ಬರೂ ಸಂಭ್ರಮದಿಂದ ತಯಾರಾಗಿ  ಹೊರಟರು ಅವರಮುದ್ದಿನ ಮಗಳನ್ನು ನೋಡಲು.

ಹೋಟೆಲ್ ನಿಜವಾಗಿಯೂ ಅಮರಾವತಿಯ ಹಾಗೇ ಇತ್ತು. ಮುಖ್ಯದ್ವಾರದಿಂದ ಬ್ಯಾಂಕ್ವೆಟ್ ಹಾಲಿಗೆ ಬರುವ ಹೊತ್ತಿಗೇ ಇಬ್ಬರಿಗೂ ಸುಸ್ತಾಗಿ ಹೋಗಿತ್ತು. ಬ್ಯಾಂಕ್ವೆಟ್ ಹಾಲಿಗೆ ಬಂದೊಡನೆ ಅವರು ಹರಿಣಿಯ ಹುಡುಕಾಟದಲ್ಲಿ ತೊಡಗಿದರು. ಆದರೆ ಅವಳೆಲ್ಲೂ ಕಾಣಿಸಲೇ ಇಲ್ಲ. ಮಹದಾಸೆ ಹೊತ್ತು ಬಂದಿದ್ದವರಿಗೆ ಈಗ ಹತಾಶ ಭಾವ ಕಾಡತೊಡಗಿತು. ತಮ್ಮ ಹಣೆಯಬರಹ ಇಷ್ಟೇ ಎಂದುಕೊಂಡು ಅವರು ಹೊರಟೇ ಬಿಡಲು ನಿರ್ಧರಿಸಿದರು. ಆಗ ವ್ಯಕ್ತಿಯೊಬ್ಬರು ಇವರನ್ನು ಎದುರುಗೊಂಡು ” ಹರಿಣಿಯ ತಂದೆ ತಾಯಿಗಳಲ್ಲವೇ ನೀವು ? ಬನ್ನಿ ಬನ್ನಿ, ನಿಮಗಾಗಿ ಕುರ್ಚಿ ಕಾದಿರಿಸಲಾಗಿದೆ. ಇನ್ನೊಂದು ಹತ್ತು ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗುತ್ತದೆ ” ಎಂದು ಅವರೇ ಸ್ವತಃ ಕರೆದುಕೊಂದು ಹೋಗಿ ಮುಂದಿನ ಸಾಲಲ್ಲಿ ಕೂರಿಸಿದರು. ಇವರು ಹರಿಣಿಯ ಆಗಮನಕ್ಕಾಗಿ ಬಕಪಕ್ಷಿಗಳಂತೆ ಕಾಯತೊಡಗಿದರು.

ಕಾರ್ಯಕ್ರಮವಾರಂಭವಾಗುತ್ತಿದ್ದಂತೆ ಅವರನ್ನು ಎದುರುಗೊಂಡ ವ್ಯಕ್ತಿ ಬೇರೆ ಯಾರೂ ಅಲ್ಲ, ಈ ಹೋಟೆಲ್ಲಿನ ಮಾಲೀಕರೆಂಬುದು ಅವರಿಗೆ ಆಗ ಗೊತ್ತಾಯ್ತು. ಅವರೇ ಸ್ವತಃ ಹರಿಣಿಯನ್ನು ವೇದಿಕೆಗೆ ಸ್ವಾಗತಿಸಿದರು.ಶುಭ್ರ ಬಿಳಿ ಬಣ್ಣದ ರೇಷ್ಮೆ ಸೀರೆಯುಟ್ಟು ಹರಣಿ ವೇದಿಕೆಗೆ ಬಂದಳು. ತಂದೆ ತಾಯಿಗಳಿಗೆ ಅವಳನನ್ನು ನೋಡಿದಾಕ್ಷಣ ಆನಂದ ಬಾಷ್ಪಗಳು ಹರಿಯತೊಡಗಿದವು. ಹರಿಣ ತಂದೆ ತಾಯಿಯರನ್ನು ಒಮ್ಮೆ ನೋಡಿ ಪ್ರೀತಿಯಿಂದ ನಕ್ಕಳು. ಹರಿಣಿಯ ಹಿಂದೆಯೇ ಸ್ಫುರದ್ರೂಪಿ ಹುಡುಗನೊಬ್ಬ ಬಂದು ಹರಿಣಿಯ ಪಕ್ಕದಲ್ಲಿದ್ದ ಆಸನದಲ್ಲಿ ಮಂಡಿಸಿದ್ದನ್ನು ನೋಡಿ ಇವರಿಬ್ಬರು ಒಮ್ಮೆ ಹುಬ್ಬೇರಿಸಿದರು. ಹರಿಣಿಯ ಕುತ್ತಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ತಾಳಿಯಾಗಲಿ, ತಾಳಿಯನ್ನು ಹೋಲುವ ಯಾವುದೇ ಸರಗಳೂ ಕಾಣಲಿಲ್ಲವಾದ್ದರಿಂದ ಸ್ವಲ್ಪ ಸಮಾಧಾನವಾದರೂ, ಅನುಮಾನವಂತೂ ಪರಿಹಾರವಾಗಲಿಲ್ಲ. ಹೋಟೆಲ್ಲಿನ ಮಾಲೀಕರು ಮಾತನಾಡಲು ಪ್ರಾರಂಭಿಸಿದರಾದ್ದರಿಂದ ಇವರಿಗೆ ಉಹನೆಗಳನ್ನು ಮಾಡಿಕೊಳ್ಳಲು ಸಮಯ ಸಾಲಲಿಲ್ಲ.

” ಇಂದು, ಪ್ಯಾರಡೈಸ್ ಗ್ರೂಪ್ ಆಫ್ ಹೋಟೆಲ್ಸ್ ಪಾಲಿಗೆ ಒಂದು ಸುದಿನ. ಅತಿಥಿ ದೇವೋಭವ ಎಂಬುದು ನಮ್ಮ ಧ್ಯೇಯ ವಾಕ್ಯ. ಅವರನ್ನು ಸಂತುಷ್ಟ ಪಡಿಸಿ ದೇವರನ್ನು ಮೆಚ್ಚಿಸಿ ಸತ್ಕಾರ್ಯದಲ್ಲಿ ನಿರತರಾಗಿರಬೇಕೆಂದು ನಮ್ಮ ಆಶಯ. ನಮ್ಮ ಹೋಟೆಲ್ಲಿನಲ್ಲಿ ಮೊದಲು ಇನ್ನೂರೈವತ್ತು ರೂಮುಗಳಿದ್ದವು. ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಹೋಟೆಲ್ಲಿಗೆ ಹತ್ತಿರವಾಗಿದೆಯಾದ್ದರಿಂದ ಹರಿದು ಬರುತ್ತಿರುವ ಜನಸಾಗರಕ್ಕೆ ಕೋಣೆಗಳನ್ನ ಪೂರೈಸಲು ನೂರು ರೂಮುಗಳ ಹೊಸದೊಂದು ಸಮುಚ್ಚಯವನ್ನು ಕಟ್ಟಿಸಿ ಇಂದು ಉದ್ಘಾಟಿಸಲಿದ್ದೇವೆ. ನಮ್ಮ ಹೋಟೆಲ್ಲಿನಲ್ಲಿ ಬಂದ ಅತಥಿಗಳೆಲ್ಲರೂ ನಮ್ಮ ಹೋಟೆಲ್ಲಿನ ಇಂಟೀರಿಯರ್ ಡಿಸೈನ್ ಮತ್ತು ತೈಲವರ್ಣ ಚಿತ್ರಗಳನ್ನು ಅಪಾರವಾಗಿ ಮೆಚ್ಚಿ ಕೆಲವೊಂದು ಚಿತ್ರಗಳನ್ನು ಆರ್ಡರ್ ಮಾಡಿ ಹೋಗಿದ್ದಾರೆ. ಇದಕ್ಕೆಲ್ಲ ಕಾರಣ ನಮ್ಮ ಹೋಟೆಲ್ಲಿಗೆ ಇಂಟೀರಿಯರ್ ಮಾಡಿಕೊಟ್ಟ ಹರಿಣಿ ಸದಾಶಿವ. ಅವರ ಕಾಲ್ಗುಣ ಎಷ್ಟು ಚೆನ್ನಾಗಿದೆ ಅಂದರೆ, ಅವರು ಕಾಲಿಟ್ಟ ಒಂದೇ ತಿಂಗಳಲ್ಲಿ ನಮ್ಮ ಹೋಟೆಲ್ಲಿನ ವ್ಯಾಪಾರ ವಹಿವಾಟುಗಳು ಹೆಚ್ಚತೊಡಗಿದವು. ಅವರೇ ಸ್ವತಃ ನಿಂತು ಎಲ್ಲಾ ಕೆಲಸಗಳನ್ನ ಮಾಡಿಸಿ, ತಮ್ಮ ವ್ಯಾಸಂಗವನ್ನೂ ಮಾಡಿಕೊಂಡು, ಮಕ್ಕಳಿಗೆ ಕಲೆಯ ಪಾಠ ಹೇಳಿಕೊಟ್ಟು ಅವರು ಬದುಕಲು ದಾರಿ ಮಾಡಿಕೊಂಡವರು. ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂದು ಧೃಢ ನಿರ್ಧಾರ ಮಾಡಿ ಯಾರ ಸಹಾಯವನ್ನೂ ತೆಗೆದುಕೊಳ್ಳದ ಮಹಾನ್ ಛಲಗಾರ್ತಿ. ಇವತ್ತಿಗೆ ಸರಿಯಾಗಿ ಒಂದುವರೆ ವರ್ಷದ ಹಿಂದೆ ಅವರ ಚಿತ್ರಕಲಾ ಶಾಲೆಗೆ ಭೇಟಿ ಕೊಟ್ಟ ನಾವು, ಅಂದು ಪ್ರದರ್ಶನದಲ್ಲಿ ಇಟ್ಟಿದ್ದ ಇವರ ತೈಲವರ್ಣ ಚಿತ್ರಗಳನ್ನು ನೋಡಿ ಬೆರಗಾಗಿ ಹೋಗಿ ಇವರ ಚಿತ್ರಗಳನನ್ನೇ ನಮ್ಮ ಹೋಟೆಲ್ಲಿನ ಇಂಟೀರಿಯರ್ ಗೆ ಬಳಸಿಕೊಳ್ಳುವೆವೆಂದು ನಿರ್ಧರಿಸಿದೆವು. ಆಗ ನಮಗೊಬ್ಬ ಇಂಟೀರಿಯರ್ ಡೆಕರೇಟರ್ ನ ಅವಶ್ಯಕತೆ ಇತ್ತು. ಇವರು ಅದರಲ್ಲೂ ಕೋರ್ಸೊಂದನ್ನು ಮಾಡಿದ್ದಾರೆಂದು ನಮಗೆ ತಿಳಿದ ಕೂಡಲೇ  ಇವರನ್ನು ಕೆಲಸದ ಬಗ್ಗೆ ವಿಚಾರಿಸಲು ಇವರ ತಂದೆತಾಯಿಗಳನ್ನೊಮ್ಮೆ ಕೇಳಿ ಹೇಳುತ್ತೇನೆಂದವರು ಮಾರನೆಯ ದಿನ ನಮ್ಮ ಆಫೀಸಿನ ಮುಂದೆ ಕ್ಯಾನ್ವಾಸ್ ಹಿಡಿದು ಕೆಲಸಕ್ಕೆ ತಯಾರಾಗಿಯೇ ಬಿಟ್ಟಿದ್ದರು. ಕಟ್ಟದ ನಿರ್ಮಾಣವಾಗುವಾಗ ಹೋಟೇಲ್ಲಿನಲ್ಲೇ ಇಳಿದುಕೊಂಡ ಇವರು ಆಮೇಲೆ ಅದರ ಬಿಲ್ಲನ್ನು ಮುರಿದುಕೊಂಡೇ ಪೇಮೆಂಟ್ ಕೊಡಿ ಎಂದು ಹೇಳಿ ನಮಗೇ ದಂಗುಬಡಿಸಿದರು. ಇಂಥವರು ನಮ್ಮೊಡನೆ ಇರುವುದು ನಮ್ಮ ಸೌಭಾಗ್ಯವೆಂದೇ ಹೇಳಬೇಕು. ಅವರ ತಂದೆ ತಾಯಿಗಳು ನಿಜವಾಗಿಯೂ ಪುಣ್ಯವಂತರು. ಇಂತಹಾ ಪುತ್ರಿಕಾರತ್ನವೊಂದನ್ನ ಲೋಕಕ್ಕೆ ಕೊಟ್ಟು ಅವರು ಕೃತಾರ್ಥರಾಗಿದ್ದಾರೆ. ಅವರು ಇಂದು ನಮ್ಮೊಡನೆ ಇದ್ದಾರೆ. ಅವರಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು.

ಹಾ…ನಮ್ಮೊಡನೆ ಇನ್ನೊಬ್ಬರಿದ್ದಾರೆ. ಅವರು ಹರಿಣಿಯ ಬಗ್ಗೆ ಒಂದಷ್ಟು ವಿಷಯಗಳನ್ನ ನಮ್ಮೊಡನೆ ಹಂಚಿಕೊಳ್ಳಬಯಸಿದ್ದಾರೆ. ಸರ್, ಬನ್ನಿ ” ಎಂದರು.

ವೇದಿಕೆಯ ಹಿಂಭಾಗದಿಂದ ಯಾರು ಬರಲಿದ್ದಾರೆ ಎಂದು ನೋಡಲು ರಾಯರು,ಶಾರದಾಂಬಾ ಮತ್ತು ಹರಿಣಿ ಮೂವರು ಕಾತರಾಗಿದ್ದರು. ಬಂದವರು ಭದ್ರ ಅಂಕಲ್. ಹರಿಣಿ ಆಶ್ಚರ್ಯಚಕಿತಳಾಗಿದ್ದಳು. ದಂಪತಿಗಳೂ ಮೂಕವಿಸ್ಮಿತರಾಗಿದ್ದರು. ಭದ್ರ ಅಂಕಲ್ ಸಭೆಗೊಮ್ಮೆ ನಮಸ್ಕರಿಸಿ ತಮ್ಮ ಮಾತನ್ನು ಆರಂಭಿಸಿದರು.

” ದೇವಹಿತ ಅಂದರೇನು ಅಂತ ತೋರಿಸಿಕೊಟ್ಟವಳು ಹರಿಣಿ. ದೊಡ್ಡವರ ಹತ್ತಿರ ಮಾತಾಡಿದರೆ ಎದುರುವಾದಿಸಿದಂತಾಗುತ್ತದೆ, ಅದು ನಮ್ಮ ತಂದೆ ತಾಯಿ ಕೊಟ್ಟ ಸಂಸ್ಕಾರಕ್ಕೆ ಧಕ್ಕೆ ತರುತ್ತದೆ ಎಂದು ಸಾವಿರ ಬಾರಿ ಯೋಚಿಸಿದ ಸಾಧ್ವಿ . ತನಗಾದ ಅವಮಾನ, ತಾನು ಪಟ್ಟ ಯಾತನೆಯನ್ನು ಹೇಳಿಕೊಳ್ಳಲೇಬೇಕೆನಿಸಿ, ಅತಿ ವಿನಯದಿಂದ ಈ ಪತ್ರವನ್ನು ಬರೆದಿಟ್ಟು, ನನ್ನ ಕಣ್ಣು ತೆರೆಸಿ ಅವಳು ಕಣ್ಮರೆಯಾದಳು. ಪಶ್ಚಾತ್ತಾಪದ ಬೇಗೆಯಲ್ಲಿ ನಾನು ಬೆಂದು ಈಗ ಪವಿತ್ರನಾಗಿದ್ದೇನಮ್ಮಾ..ಹಾ…ಆ ಪತ್ರವನ್ನೂಮ್ಮೆ ನಿಮ್ಮ ಮುಂದೆ ಓದಲಿಚ್ಛಿಸುತ್ತನೆ”

ಎದ್ದು ಅವರನ್ನು ತಡೆಯಲು ಹೊರಟಿದ್ದ  ಹರಿಣಿಯನ್ನು ಕೈಸನ್ನೆಯಲ್ಲೇ ತಡೆದ ಭದ್ರ ಅಂಕಲ್, ಪತ್ರವನ್ನು  ಓದಲಾರಂಭಿಸಿದರು.

“ನಮಸ್ಕಾರ ಅಂಕಲ್, ನಿಮ್ಮನ್ನು ಬೇಜಾರು ಮಾಡುವ ಉದ್ದೇಶ ಖಂಡಿತಾ ನನಗಿಲ್ಲ, ಜ್ಞಾನಿಗಳಾದ ನಿಮ್ಮ ಮುಂದೆ ವಿತಂಡವಾದಕ್ಕೆ ನಿಲ್ಲಲೂ ನನಗಿಚ್ಛೆಯಿಲ್ಲ. ಸಾಯಂಕಾಲ ನೀವು ಮನೆಗ ಬಂದಾಗ “ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ “ಶ್ಲೋಕವನ್ನು ಹೇಳುತ್ತಿದ್ದಿರಿ. ನಾನು ಚಿಕ್ಕವಳಿದ್ದಾಗ ಆ ಶ್ಲೋಕದ ಅರ್ಥ ಹೇಳಿದ್ದಿರಿ.ಆ ಶ್ಲೋಕವನ್ನು ಹೀಗೂ ಅರ್ಥೈಸಬಹುದಲ್ಲವೇ ?

ಭದ್ರಂ ಕರ್ಣೇಭಿಃ  ಶೃಣುಯಾಮ ದೇವಾಃ –  ದೇವತೆಗಳೇ, ನಾವು ಕಿವಿಗಳಿಂದ ಒಳ್ಳೆಯದನ್ನೇ ಕೇಳುವ ಹಾಗಾಗಲಿ ಎಂದಿದ್ದಿರಿ ನೀವು.  ಬೇರೆಯವರ ಮಾತನ್ನು ಒಮ್ಮೆಯಾದರೂ ಕೇಳಿ,  ಅದರಲ್ಲಿನ ಒಳಿತನ್ನು ಮಾತ್ರ ಗ್ರಹಿಸಬೇಕೆಂಬುದು ಇದರ ಅರ್ಥವಲ್ಲವೇ  ?

ಭದ್ರಂ ಪಶ್ಯೇಮಾಕ್ಷಿಭಿಃ – ಒಳ್ಳೆಯದನ್ನೇ ನೋಡೋಣ ಎಂದಿದ್ದಿರಿ ನೀವು.  ನೋಡಿದಾಕ್ಷಣ ಸರಿಯಿರದರ ಬಗ್ಗೆ ಮಾತಾಡಿ ಆಡಿಕೊಳ್ಳುವ ಬದಲು ಅವರಲ್ಲಿರುವ ಒಳ್ಳೆಯ ಗುಣವನ್ನು ಶ್ಲಾಘಿಸಬಹುದಲ್ಲವೇ ?  ಸರಿಯಿರದ ವಸ್ತುಗಳಲ್ಲಿಯೂ ಒಳ್ಳೆಯದಿರಹುದಲ್ಲವೇ ?  ಕೆಟ್ಟದರಲ್ಲೂ, ಚೆನ್ನಾಗಿರದ ವಸ್ತುಗಳಲ್ಲಿಯೂ ಒಳ್ಳೇ ಗುಣವನ್ನು ನೋಡಬೇಕೆಂಬುದಾಗಿ ಇದರ ಅರ್ಥ ಅಲ್ವೇ ? ಈಗ, ಚಾಕು ಮನುಷ್ಯರನ್ನು ಚುಚ್ಚಕ್ಕೆ ಬಳಸಲ್ಪಡುತ್ತದೆಂದು ಹಳಗಳಿಯುವ ಬದಲು ಅದನ್ನು ಹಣ್ಣು ಕುಯ್ಯಲೂ ಬಳಸಬಹುದಲ್ಲವೇ ?

ಯಜತ್ರಾಃ –  ಯಜ್ಞ ಕಾರ್ಯಗಳಲ್ಲಿ ನಿರತರಾಗಿರೋಣ ಎಂದು ಅರ್ಥೈಸಿದರಿ. ಈ ಯುಗದಲ್ಲಿ ನಮ್ಮ ನಮ್ಮ ಕೆಲಸವೇ ಯಜ್ಞವಲ್ಲವೇ ? ಅಂದರೆ ನಮ್ಮ ನಮ್ಮ ಕೆಲಸ ನಾವು ನೋಡಿಕೊಂಡಿರಬೇಕಲ್ಲವೇ ? ನಮ್ಮ ಕೆಲಸದಿಂದ ಲೋಕಕ್ಕೆ ಉಪಯೋಗವಾಗಬೇಕಲ್ಲವೇ ?

ಸ್ಥಿರೈಃ ಅಂಗೈಃ ಸುಷ್ಟುವಾನ್ ಸಸ್ತನೂಭಿಃ –  ನಮ್ಮ ಸ್ಥಿರವಾದ ಅಂಗಗಳಿಂದ ನಿಮ್ಮನ್ನು ಹೊಗಳುವಂಥವರಾಗೋಣ. ಅಂದರೆ ದೇವರು ಎಲ್ಲರಲ್ಲೂ ಇರುವನು, ಎಲ್ಲದರಲ್ಲೂ ಆದ್ದರಿಂದ ಯಾರನ್ನೇ ಆಗಲಿ ಅಪಹಾಸ್ಯ ಮಾಡುವುದು, ನಿಂದಿಸುವುದು, ಬೈಯ್ಯುವುದು, ನೋಯಿಸುವುದು ತಪ್ಪಲ್ಲವೇ ?

ವ್ಶಶೇಮ ದೇವಹಿತಂ ಯದಾಯುಃ- ಅಂದರೆ ನಾವು ನಮ್ಮ ಆಯುಷ್ಯವಿರುವವರೆಗೂ ದೇವರು ಮೆಚ್ಚುವಂತಹ ಕೆಲಸವನ್ನು ಮಾಡಬೇಕೆಂದಿದ್ದಿರಿ. ಅಂದರೆ, ನಾವು ಎಲ್ಲರಲ್ಲೂ ಇರುವ, ಎಲ್ಲವೂ ಆಗಿರುವ,  ಮನಸ್ಸಾಕ್ಷಿಯೂ ಆಗಿರುವ ಭಗವಂತನ ಆರಧನೆಯನ್ನು ಒಳ್ಳೆಯ ಮಾತು, ಕಾರ್ಯ ಹಾಗು ಶುದ್ಧ ಮನಸ್ಸನ್ನು ಹೊಂದಿ  ದೇವರಿಗೆ ಹಿತವಾಗುವಂತೆ ನಡೆದುಕೊಳ್ಳಬೇಕಲ್ಲವೇ ? ದೇವಹಿತವೆಂದರೆ ಇದೇ ಅಲ್ಲವೇ ?

ನೀವು ಅರ್ಥವನ್ನು ಹೇಳಿದ್ದಿರಿ ಅಷ್ಟೇ…ಆದರೆ ಶ್ಲೋಕ ಹೇಳಿದಂತೆ ಅನುಸರಿಸಿದ ಹಾಗೆ ಕಾಣಲಿಲ್ಲವಲ್ಲ ಭದ್ರ ಅಂಕಲ್ ?

ನನ್ನ ಜನ್ಮ ನಿಮಗೆ ಬೇಕಿತ್ತೋ ಇಲ್ಲವೋ ಅದು ಗೌಣ.ಅದರ ನಿಷ್ಕರ್ಷೆ ಮಾಡಬೇಕಿದ್ದುದು ಅಪ್ಪ ಅಮ್ಮ ಹೊರತು ನೀವಲ್ಲ. ಅವರು ನನ್ನನ್ನು ಭೂಮಿಗೆ ತಂದಿದ್ದಾರೆ ಎಂದ ಮೇಲೆ ನೀವದರ ಔಚಿತ್ಯ ಪ್ರಶ್ನಿಸುವುದು ಅನವಶ್ಯಕ. ನನ್ನ ರೂಪು ನಿಮಗೆ ಚಿಂತೆ ತರಿಸಿದರೆ ಅದರ ಪರಿಹಾರಕ್ಕಾಗಿ ನೀವು ಅಪ್ಪ ಅಮ್ಮಂದಿರನ್ನು ಕುಟೂಕುವುದು ಯಾವ ನ್ಯಾಯ ಭದ್ರ ಅಂಕಲ್ ? ಕೊಂಕು, ವ್ಯಂಗ್ಯ ಮತ್ತು ಕುಟುಕುಗಳಿಂದ  ನಾನು ಬೆಳ್ಳಗಾಗುತ್ತೇನೆ ಎಂದಾದರೆ, ಜನರು ಆಡಿರುವ  ಮಾತುಗಳು ಎಷ್ಟಿವೆ ಅಂದರೆ ಇಷ್ಟೊತ್ತಿಗೆ ನಾನು ಹಾಲಿಗೇ ಸ್ಪರ್ಧೆಯೊಡ್ಡುತ್ತಿದ್ದೆ !

ನನಗಾದ ಅವಮಾನ ಸಾಕು. ಅದರಿಂದ ನಾನು ಪಟ್ಟ ಯಾತನೆ ಈ ಜನ್ಮಕ್ಕೆ ಸಾಕು. ಇನ್ನು ಇನ್ಯಾರಿಗೂ ಹೀಗೆ ಹೇಳಿ ನಿಮ್ಮ ವಾಕ್ಚಾತುರ್ಯ ಮೆರೆಯದಿರಿ. ನನಗಾದ ಬೇಜಾರು ಮತ್ತಿನ್ಯಾರಿಗೂ ಆಗದ ಹಾಗೆ ನೋಡಿಕೊಳ್ಳುವುದು ಈಗ ನೀವು ಮಾಡಬೇಕಿರುವ ಪುಣ್ಯಕಾರ್ಯ.ಇದೊಂದು ಮಾತು ನಡೆಸಿಕೊಡಿ ಭದ್ರ ಅಂಕಲ್.

ನಾನು ಹೋಗುತ್ತಿದ್ದೇನೆ, ನಿಮ್ಮಂಥವರ ಮಾತು ಕೇಳಿ ಜಿಗುಪ್ಸೆ ಹೊಂದಿ ಸಾಯಲಿಕ್ಕಲ್ಲ, ನಿಮ್ಮಂಥವರನ್ನು ಎದುರಿಸಿ, ನಮ್ಮಂಥವರೂ ಬದುಕಬಹುದು ಎಂದು ಸಾಧಿಸಿ,  ಬದುಕಿ ತೋರಿಸಲಿಕ್ಕೆ. ಇದು ಅಂತರಾತ್ಮವನ್ನು ಮೆಚ್ಚಿಸುತ್ತದೆಯಾದ್ದರಿಂದ ದೇವಹಿತವಾಯ್ತು. ಅಲ್ಲವೇ ?

ಹರಿಣಿ. ”

ಎಲ್ಲರ ಕಣ್ಣಲ್ಲೂ ನೀರು ಹರಿಯುತ್ತಿತ್ತು. ಹರಿಣಿ ಬಿಕ್ಕುತ್ತಿದ್ದಳು. ಭದ್ರ ಅಂಕಲ್ ಮುಂದುವರೆಸಿದರು – “ತಾಯಿ, ನನ್ನಿಂದ ಮಹಾಪರಾಧವಾಯ್ತಮ್ಮ, ಮಕ್ಕಳನ್ನು ಪ್ರೋತ್ಸಾಹಿಸುವ ಬದಲು ಅವರನ್ನು ಅಲ್ಲಗಳೆದು ದೊಡ್ಡ ತಪ್ಪು ಮಾಡಿದೆ. ಆ ತಪ್ಪಿಗೆ ನನಗೆ ಸರಿಯಾದ ಶಿಕ್ಷೆ ಕೊಟ್ಟು ಪಶ್ಚಾತ್ತಾಪದಲ್ಲಿ ಬೇಯುವಂತೆ ಮಾಡಿದ ದೇವತೆ ನೀನು. ನೀನು ಚೆನ್ನಾಗಿರಮ್ಮ…ನೂರ್ಕಾಲ ಚೆನ್ನಾಗಿ ಬಾಳು !

ನಾನು ಆವತ್ತು ಮಾಡಿದ ತಪ್ಪಿಗೆ ಸದಾಶಿವನಿಗೆ ಮುಖ ತೋರಿಸಲು ನಾಚಿಕೆಯಾಗಿ, ನನ್ನ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಗುವವರೆಗೂ ನಾನು ಅವನ ಬಳಿಹೋಗುವುದಿಲ್ಲ ಎಂದು ನಿಶ್ಚಯಿಸಿ ಸುಳ್ಳು ಹೇಳಿ ಮನೆಯಿಂದ ಹೊರಟೆ. ಬೇಕಂತಲೇ ಅವನ ಫೋನುಗಳನ್ನು ಎತ್ತಲಿಲ್ಲ. ನನ್ನಿಂದ ತಪ್ಪಾಯ್ತೋ ಸದಾಶಿವ..ನನ್ನನ್ನು ದಯವಿಟ್ಟು ಕ್ಷಮಿಸಿಬಿಡಪ್ಪ !! ಮೊನ್ನೆ ಪೇಪರ್ರಿನಲ್ಲಿ ಈ ಹೋಟೆಲ್ಲಿನ ಇಂಟೀರಿಯರ್ ಬಗ್ಗೆ ಶ್ಲಾಘಿಸಿ ಆರ್ಟಿಕಲ್ ಬಂದಿತ್ತು,ಹರಿಣಿಯ ಬಗ್ಗೆಯೂ ಓದಿದೆ. ಇದೇ ಸದವಕಾಶವೆಂದುಕೊಂಡು  ನಾನೇ ಇಲ್ಲಿಗೆ ಬಂದು ನನ್ನ ತಪ್ಪೊಪ್ಪಿಕೊಳ್ಳುತ್ತೇನೆಂದು ಬೇಡಿಕೊಂಡೆ, ಮಾಲೀಕರ ಮನಸ್ಸು ದೊಡ್ಡದು, ಒಪ್ಪಿಕೊಂಡರು. ನಿಮಗೆ ಧನ್ಯವಾದ ಸರ್.” ಎಂದು ಕಣ್ಣೊರೆಸಿಕೊಂಡರು.

ಹರಿಣಿ ಎದ್ದೋಡಿ ಬಂದು , ” ಅಂಕಲ್, ನಿಮ್ಮನ್ನು ನೋಯಿಸುವ ಉದ್ದೇಶ ನನಗೆ ಖಂಡಿತಾ ಇಲ್ಲ, ಆದರೆ ನನ್ನ ಸಹನೆಯೂ ಮಿತಿಮೀರಿತ್ತು. ನೀವು ಮತ್ತೆ ಸಿಕ್ಕಿದಿರಲ್ಲ, ಬದಲಾಗಿದ್ದೀರಲ್ಲ, ನನಗಷ್ಟೇ ಸಂತೋಷ.”

ಆಗ ಹೋಟೆಲ್ಲಿನ ಮಾಲೀಕರು ಎದ್ದು ” ಎಲ್ಲವೂ ಸುಖಾಂತ್ಯವಾಯ್ತಲ್ಲ, ಅದೇ ಸಂತೋಷ. ನಾವು ಅನಂತರಾಮಯ್ಯನವರಿಂದ ಎಲ್ಲವನ್ನೂ ತಿಳಿದಿದ್ದೀವಿ. ಸದಾಶಿವರಾಯರು ತಮ್ಮ ಮಗಳ ಮದುವೆಯ ಬಗ್ಗೆ ಇನ್ನು ಯೋಚಿಸುವ ಅಗತ್ಯವಿಲ್ಲ. ನಮ್ಮ ಮಗನು ಹರಿಣಿಯನ್ನು ಮದುವೆಯಾಗಲು ಇಚ್ಛೆಪಟ್ಟಿದ್ದಾನೆ. ತಾವು ಮತ್ತು ಹರಿಣಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕಷ್ಟೇ. ”

ದಂಪತಿಗಳು ಹರಿಣಿಯ ಮುಖವನ್ನೊಮ್ಮೆ ನೋಡಿದರು.  ವಿಷಯ ಕೇಳಿದಾಕ್ಷಣ ಅವಳ ಕಣ್ಣುಗಳಲ್ಲಿ ಹೊಮ್ಮಿದ  ಕಾಂತಿಯೇ ಸಮ್ಮತಿ ಸೂಚಿಸುತ್ತಿದ್ದವು. ಇವರಿಬ್ಬರೂ ಕೂಡ ಸಂತೋಷದಿಂದ ಒಪ್ಪಿ, ವೇದಿಕೆಗೆ ಬಂದು ಮಾಲೀಕರಿಗೆ ತಮ್ಮ ಸಮ್ಮತಿ ತಿಳಿಸಿದರು. ಕಿವಿಗಡಚಿಕ್ಕುವ ಕರತಾಡನದ ಮಧ್ಯೆ ಹರಿಣಿಯ ವಿವಾಹ ನಿಶ್ಚಯವಾಯ್ತು. ಭದ್ರ ಅಂಕಲ್ ಮಾಡಿದ ಪಾಪಕ್ಕೆ ಪಟ್ಟ ಪ್ರಾಯಶ್ಚಿತ್ತ ಪರಿಪೂರ್ಣವಾಯ್ತು. ದೇವಹಿತವೂ ಆಯ್ತು !

ಮುಂದಿನ ಪುಟ »

Create a free website or blog at WordPress.com.