ನಾನು ಎಮ್. ಎಸ್ಸಿ ಮುಗಿಸಿದ ಮೇಲೆ ಮನೆಯಲ್ಲಿ ಇರಲೇಬೇಕೆಂದು ಅಪ್ಪ ಅಮ್ಮನ strict order ಆದಮೇಲಂತೂ ನನಗೆ ಅಡಿಗೆ, ಬ್ಲಾಗಿಂಗ್ ಬಿಟ್ಟರೆ ಬೇರೇನು ಕೆಲಸವೇ ಇಲ್ಲ. ಟೈಮ್ ಪಾಸಿಗೆಂದೇ ಒಂದು ಬ್ಲಾಗ್ ಪ್ರಾರಂಭಿಸಿ ಅನ್ನಿಸಿದ ಕಥೆ ಕವನವನ್ನೆಲ್ಲಾ ಗೀಚಲು ಆರಂಭಿಸಿದ್ದೇನೆ ಎಂದಮೇಲೆ ನಾನೆಷ್ಟು ಆರಾಮಾಗಿದ್ದೇನೆ ಎಂದು ನಿಮ್ಮೆಲ್ಲರಿಗೂ ಗೊತ್ತಾಗತ್ತೆ.
ಮೊನ್ನೆ ಮದ್ಯಾಹ್ನ ಮನೆ ಗೇಟಿನ ಮುಂದೆ ಬಂದು ನಿಂತೆ. ಏನೂ ವಿಶೇಷವಿರಲಿಲ್ಲ, ಸುಮ್ಮನೇ ಟೈಮ್ ಪಾಸಿಗೆ. ಕರೆಂಟಿರಲಿಲ್ಲ, ಕಂಪ್ಯುಟರ್ ಗೆ ಬ್ರೇಕ್ ಸಿಕ್ಕಿತ್ತು ನನ್ನಿಂದ. ಅಪರಾಹ್ನ ಮೂರು ಘಂಟೆಗೆ ನಮ್ಮ ರಸ್ತೆ ಹೇಗೆ ಕಾಣತ್ತೆ ಅನ್ನೋ ಒಂದು ಕಲ್ಪನೆ ನನಗೆ ಇಷ್ಟು ವರ್ಷಗಳಿಂದ ಇರಲಿಲ್ಲ. ಅದನ್ನು ಪ್ರತ್ಯಕ್ಷ ನೋಡಲು ಮೊನ್ನೆ ಇದ್ದಕ್ಕಿದ್ದ ಹಾಗೇ ಅನ್ನಿಸಿತು…ಅನ್ನಿಸಿದ್ದನ್ನು ಮಾಡಬೇಕೆಂಬುದು ನನ್ನ ಪಾಲಿಸಿ.
ಪಕ್ಕದ ಮನೆಯವರು ಅವರ ಮನೆ ಮೇಲೆ ಇನ್ನೊಂದು ಮನೆ ಕಟ್ಟಿಸುತ್ತಿದ್ದಾರೆ…ಅದರ ಧೂಳು, ಇಟ್ಟಿಗೆ, ಮರಳು ರಸ್ತೆಯನ್ನು ವ್ಯಾಪಿಸಿ ಒಂಥರಾ ಮಬ್ಬುಗೊಳಿಸಿತ್ತು. ಬೆಂಗಳೂರಿನ ನಾಗರಿಕರ ಗುಣಲಕ್ಷಣವನ್ನು ಎತ್ತಿ ತೋರಿಸುವಂತೆ, ಎಲ್ಲರ ಮನೆಯ ಬಾಗಿಲುಗಳೂ ಬಿಗಿಯಾಗಿಯೇ ಜಡಿದಿದ್ದವು. ಮರಗಳು ಆಷಾಢದ ಗಾಳಿಗೆ ಓಲಾಡುತ್ತಿದ್ದವು. ಇವೆಲ್ಲದರ ಮಧ್ಯೆ ನಾನು ಕಿಂಕರ್ತವ್ಯಮೂಢಳಾಗಿ ಗೇಟಿನ ಮುಂದೆ ರಸ್ತೆಯನ್ನು ದಿಟ್ಟಿಸುತ್ತಾ ನಿಂತಿದ್ದೆ.
ನಮ್ಮ ಬೀದಿಯಲ್ಲಿ ಎರಡು ನಾಯಿಗಳಿವೆ. ಒಂದರ ಹೆಸರು ಟಿಪ್ಪು. ಇನ್ನೊಂದರ ಹೆಸರು ವಿವಾದದಲ್ಲಿ ಸಿಲುಕಿರುವಾಗಲೇ ಆ ನಾಯಿ ಶಿವನ ಪಾದ ಸೇರಿತೆಂದು ವರದಿ ಬಂದಿತು. ಅದಕ್ಕೆ ರೋಹಿಣಿ ಮತ್ತು ಟೋನಿ ಎಂಬ ಎರಡು ಹೆಸರಿದ್ದವು. ಆದರೆ ಅದರ ಹೆಸರು ಯಾವುದೆಂದು ಯಾರೂ ನಿರ್ಧರಿಸಲು ಆಗಿಲ್ಲವಾದ್ದರಿಂದ ನಾನು ಅವೆರಡೂ ಹೆಸರನ್ನು ಸೇರಿಸಿ ಟೋಹಿನಿ ಎಂದು ನಾಮಕರಣ ಮಾಡುವ ಹೊತ್ತಿಗೆ ಅದು ದೈವಾಧೀನವಾಗಿತ್ತು.
ಇದನ್ನು ಇಲ್ಲಿ ಯಾಕೆ ಬರೆದೆನೆಂದರೆ, ನಾನು ಕಿಂಕರ್ತವ್ಯಮೂಢಳಾಗಿ ನಿಂತಿದ್ದಾಗ ಟಿಪ್ಪುವಿನ ಆಗಮನವಾಯ್ತು. ಅದೂ ನಮ್ಮ ಮನೆಯ ಗೇಟಿನ ಮುಂದೆಯೇ.
ಬಂದದ್ದೇ ನನ್ನ ನೋಡಿ ಅದು ಸಲ್ಪ ದಿಗ್ಭ್ರಮೆಗೊಂಡಿತು. ಬಾಯಿ ಬಿಟ್ಟು ಆಶ್ಚರ್ಯಚಕಿತವಾಗಿ ನನ್ನನ್ನೇ ದಿಟ್ಟಿಸಿ ನೋಡಿತು ಬೇರೆ !
ನಾನು : ಏನೋ ಟಿಪ್ಪು….ಹೇಗಿದ್ದೀಯ ?
ಅದು : ಕೇಳ್ಬೇಡ.
ಈಗ ದಿಗ್ಭ್ರಮೆಗೊಳ್ಳುವ ಸರದಿ ನನ್ನದಾಗಿತ್ತು. ನಾಯಿ ಮನುಷ್ಯರ ದನಿಯಲ್ಲಿ ಮಾತಾಡುತ್ತಿತ್ತು…ಅದೂ ನಮ್ಮ ಟಿಪ್ಪು !
ನಾನು : ಯಾಕೋ, ಅಮ್ಮ bread ಹಾಕೋದನ್ನ ನಿಲ್ಲಿಸಿದರಾ ?
ಅದು : ಇಲ್ಲ, ಸಂಪದ್ಭರಿತವಾಗಿ ಊಟಗಳು ಸಿಗುತ್ತಿವೆ. ಜನ ಊಟವನ್ನ ಚೆನ್ನಾಗೇ ಚೆಲ್ಲುತ್ತಿದ್ದಾರೆ. ಸದ್ಯಕ್ಕೆ ತೊಂದರೆ ಅದಲ್ಲ.
ನಾನು: ಆಹ…11.3 % inflation rate ನಲ್ಲೂ ಜನ ಊಟ ಚೆನ್ನಾಗೇ ಚೆಲ್ಲುತ್ತಿದ್ದಾರೆಯೇ ? ಭೇಷ್ ! ಮತ್ತಿನ್ನೇನು ತೊಂದರೆ ನಿಂದು ?
ಅದು: ಗಾದೆಯಿಂದ ನಮ್ಮ ಮಾನ ಮರ್ಯಾದೆ ಹರಾಜಾಗಿದೆ !
ನಾನು : ಗಾದೆನೆಲ್ಲಾ ಬೈಯ್ಯಬೇಡ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ತಿಳಿಯಿತೇ ?
ಅದು : ಹಾಗಂತ ನಮ್ಮ ಮಾನ ತೆಗೆಯುವುದು ಎಷ್ಟು ಸರಿ ?
ನಾನು : ನಿನ್ನ ಮಾನ ಕಳೆದಿರುವ ಗಾದೆ ಯಾವುದು ?
ಅದು : ನಾವು ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲವಂತೆ ?
ನಾನು : ಹೌದು, ಹಾಳಾಗುವುದಿಲ್ಲ.
ಅದು : ನೀವು ಭಕ್ತಿಯಿಂದ ಕೇಳಿಕೊಂದರೆ ಅಥವ ಕುಪಿತಗೊಂಡರೆ ದೇವಲೋಕಕ್ಕೆ ಒಳಿತು ಕೆಡಕುಗಳಾಅಗುತ್ತವೆಯೋ ?
ನಾನು : ಹೌದು.
ಅದು : ನಿನ್ನ ತಲೆ !
ನನಗೆ ರೇಗಿ ಹೋಯ್ತು. ನಾಯಿಯೊಂದು ಈ ತರಹ ನನ್ನನ್ನ ಬೈದಿದ್ದು ನನಗೆ ಸರ್ವಥಾ ಸಮ್ಮತವಾಗಲಿಲ್ಲ. ನಾನಂದೆ, ನೋಡು, sound waves do not travel through vacuum, ಅದಕ್ಕೆ ನಿನ್ನ ಬೊಗಳಿಕೆ ದೇವಲೋಕಕ್ಕೆ ಕೇಳೋಲ್ಲ.
ಅದು : ನೀವು ಗಂಟೆ ಜಾಗಟೆಗಳನ್ನ ಬಾರಿಸಿದರೆ ಕೇಳತ್ತೋ ?
ನಾನು for the first time, struck ಆದೆ. ನನ್ನದೇ physics ನಲ್ಲಿ !
ಅದು : see ! you people don’t know what you are doing ! don’t think we don’t know and understand English, we wear collars…which implies we are taught to obey orders in English !
shock ಆಗೋದೆ ನಾನು !!
ನಾನು ನಮ್ಮ ಮನುಕುಲದ ಮರ್ಯಾದೆ ಹೀಗೆ ಹರಾಜಾವುದನ್ನು ನೋಡಲು ತಯಾರಿರಲಿಲ್ಲ. ನಾನಂದೆ, ನೋಡು, ನಾವು ಮನಸ್ಸಿಟ್ಟು ಪ್ರಾರ್ಥನೆ ಮಾಡುತ್ತೀವಿ…ಅದು ದೇವರನ್ನ ಮುಟ್ಟತ್ತೆ.
ಅದು : ನಮಗೆ ಮನಸ್ಸಿಲ್ಲ ಅಂತ ನೀವು ಹೇಗೆ assume ಮಾಡಿಕೊಂಡಿರಿ ? ನಮಗೆ ಮಾತು, ಬೈಗುಳ, ಪ್ರಾರ್ಥನೆ, ಎಲ್ಲ ಬೊಗಳಿಕೆಯೇ. ಹಾಗಾದರೆ ನಮ್ಮ ಪ್ರಾರ್ಥನೆ ದೇವರು ಕೇಳಿಸಿಕೊಳ್ಳುವುದಿಲ್ಲವೇ ? ನಿಮ್ಮ ಮಾತು ಮಾತು, ನಮ್ಮ ಬೊಗಳಿಕೆ ಮಾತೇ ಅಲ್ಲವೇ ? ಹ ? ಮಾತಾಡು ! rather, ಬೊಗಳು !
checkmate question !ನಾಯಿಯೊಂದರ ಮುಂದೆ ನಾನು ನಿರುತ್ತರಳಾದೆ !
ಅದು ಮುಂದುವರಿಸಿತು. ನೋಡು, ನಮಗೂ ಮನಸ್ಸಿದೆ. ನೀವು ನಮ್ಮ ಬೊಗಳಿಕೆಯನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ಅನ್ನುವ ಮಾತ್ರಕ್ಕೆ ದೇವಲೋಕವನ್ನು ಅದು ತಲುಪುವುದಿಲ್ಲ ಎಂದುಕೊಳ್ಳಬೇಡ. ಆನೆ ಕೂಗಿದ್ದಕ್ಕೆ ವಿಷ್ಣು ಬಂದ, ನಾವು ಕೂಗಿದರೆ ಹರಿಹರಬ್ರಹ್ಮಾದಿಗಳು ಬರ್ತಾರೆ ! ತಿಳೀತಾ ? ನಾವು ವಿಶ್ವ ಶ್ವಾನ ಹಕ್ಕು ಪುನಸ್ಸ್ಥಾಪನಾ ಸಂಘದಿಂದ ಆಷಾಢ ಅಮಾವಾಸ್ಯೆಯಂದು ಒಕ್ಕೊರಲಿನಿಂದ ಬೊಗಳಿ ಮತ್ತು ಊಳಿಟ್ಟು ನಮ್ಮ ಬೇಡಿಕೆಯನ್ನು ಸಲ್ಲಿಸಲಿದ್ದೇವೆ. ನೋಡು ಆಗ ಏನಾಗತ್ತೆ ಅಂತ !
ಅಷ್ಟೊತ್ತಿಗೆ ಅಮ್ಮ ” ಲೇ…ಏನೆ ಮಾಡ್ತಿದ್ಯಾ…ಗೇಟ್ ಮೇಲೆ ನಿದ್ದೆ ಮಾಡುವ ಹಣೆಬರಹ ಯಾಕೆ ? ನೋಡಿದವರು ಹಾಸಿಗೆ ಗತಿ ಇಲ್ಲ ಅಂದುಕೊಳ್ಳಬೇಕೆ ? “
ಕಣ್ಣು ಬಿಟ್ಟೆ.ಅಯ್ಯೋ…ನಾನು ನಿದ್ದೆ ಮಾಡಿದ್ದೆನೆ ? ಅದೂ ಗೇಟ್ ಮುಂದೆ ನಿಂತು ತೂಕಡಿಸಿದ್ದೆನೆ ? ಕನಸು ಬೇರೆ ಬಿದ್ದಿತ್ತೇ ? ಟಿಪ್ಪೂ ? ಮಾಯ ! ಸದ್ಯ…ಕನಸಿನಲ್ಲಿ ಅವಮಾನ ಆಯ್ತು…ನಿಜವಾಗಿಯೂ ಅಲ್ಲ !
ಅಮ್ಮ : ನೋಡಿದವರು ಆಡಿಕೊಳ್ಳುತ್ತಾರೆ…ಹುಡುಗಿ ಹೊರಗೆ ಸುಮ್ಮನೆ ಕಣ್ಣಾಡಿಸುತ್ತ ಇರ್ತಾಳೆ ಕೆಲ್ಸ ಇಲ್ಲದೇ !
ನಾನು : ಬಿಡಮ್ಮ…ನಾಯಿ ಬೊಗಳಿದರೆ…
ನನಗೆ ಯಾಕೋ ಆ ಗಾದೆ ಹೇಳಲು ಮನಸ್ಸೇ ಆಗಲಿಲ್ಲ.