ಟೈಂ ಪಾಸ್ ಬರಹಗಳು

ಏಪ್ರಿಲ್ 13, 2010

ಜೀವನಕ್ಕೊಂದು reset,rewind ಮತ್ತು forward button ಇದ್ದಿದ್ದರೆ..?!

Filed under: ಜಸ್ಟ್ ಲೈಕ್ ದಟ್ — saagari @ 9:20 ಅಪರಾಹ್ನ

ಹೇಗಿರ್ತಿತ್ತು ಅಲ್ವಾ? just imagine  ಮಾಡ್ಕೊಳಿ ! ನಾವು ಮಾಡಿದ ತಪ್ಪುಗಳನ್ನೆಲ್ಲಾ erase ಮಾಡಿಬಿಡಬಹುದಿತ್ತು. ಕಹಿ ನೆನಪುಗಳನ್ನೆಲ್ಲಾ format  ಮಾಡಿಬಿಡಬಹುದಿತ್ತು. ಎದೆಭಾರವೇ ಇಲ್ಲದೇ, ಯಾವುದೇ ಖಾಯಿಲೆ ಕಸಾಲೆ ಕಾಡದೇ ಹಾಯಾಗಿ ನೂರಿನ್ನೂರು ವರ್ಷ ಬದುಕಬಹುದಿತ್ತು ! ರೆಸೆಟ್ ಬಟನ್ ಗೆ ಎಂಥಾ ಮಾಂತ್ರಿಕ ಶಕ್ತಿ ಇದೆ ಅಲ್ವಾ ?

ನಾವು ಚಿಕ್ಕವಯಸ್ಸಿನಲ್ಲಿ ಗಾಳಿಪಟ ಹಾರಿಸಿಲ್ಲಾ ಅಂತ ಇಟ್ಟುಕೊಳ್ಳಿ. ಈಗ ಮಕ್ಕಳು ಗಾಳಿಪಟ ಹಾರಿಸುವುದನ್ನ ನೋಡಿದಾಗ ನಾವೂ ಮಕ್ಕಳ ಹಾಗೆಯೇ ಗಾಳಿಪಟ ಹಾರಿಸಬೇಕೂ ಅನ್ಸತ್ತೆ ಅಲ್ವಾ ? ಆಗ  rewind ಬಟನ್ ನ ಒತ್ತಿ ನಾವೂ ಮಕ್ಕಳಾಗಿಹೋಗಬೇಕು. ಅವರೊಟ್ಟಿಗೆ ಗಾಳಿಪಟ ಹಾರಿಸಬೇಕು. ಆಮೇಲೆ ಮತ್ತೆ forward ಆಗಿ, ದೊಡ್ಡವರಾಗಿ ಸುಮ್ಮನೆ ರಸ್ತೆಯಲ್ಲಿ ನಡೆದುಕೊಂಡು ಹೋಗಿಬಿಡಬೇಕು. ಹೇಗಿದೆ ಐಡಿಯಾ ?

ಮನಃಕ್ಲೇಶಗಳಾಗುತ್ತವಲ್ಲಾ ಜೀವನದಲ್ಲಿ,ಆಗ ನಮಗೆ ರಿಸೆಟ್ ಬಟನ್ ನ ಹೆಚ್ಚು ಅವಶ್ಯಕತೆ ಇರತ್ತೆ. ಮನಸ್ಸಿನ್ನಿಂದ ಆ ವ್ಯಕ್ತಿಯನ್ನ, ಅವರೊಟ್ಟಿಗೆ ಕಳೆದ ಸಮಯದ ನೆನಪನ್ನ ಹಾಗೇ ಅಳಿಸಿಹಾಕಿಬಿಡಬೇಕು, ಯಾರದೇ ಮುಖ ಮುಲಾಜು ನೋಡದೇ. ಅಲ್ಲಿ ರಿವೈಂಡು ಫಾರ್ವರ್ಡು ಬಟನ್ ಗಳು disable  ಆಗಬೇಕು.  ಆ ನೆನಪುಗಳು ನಮ್ಮನ್ನೆಂದೂ ಕಾಡಬಾರದು. ಸವಿ ನೆನಪುಗಳಿಗೆ ಮಾತ್ರ ರಿವೈಂಡ್ ಇರಬೇಕು 🙂

ನೀವೇನೇ ಹೇಳಿ, ನೆನಪೊಂದು Slow poison. ನಿಧಾನಕ್ಕೆ ಇರಿಯುತ್ತಾ ಕೊಲ್ಲುವ ಚಾಕು ಅದು. ಅದರ ಇರಿತ ನಮಗೆ ಮಾತ್ರ ಅರಿವಾಗತ್ತೆ, ರಕ್ತಕಣ್ಣೀರು ಹರಿಯುತ್ತಲೇ ಇರುತ್ತದೆ.ಈ ಇರಿತಕ್ಕೆ ಮದ್ದಾಗಿ ಆ ಸೋ ಕಾಲ್ಡ್ ದೇವರು ಈ ಮೂವರು ಬಟನ್ ಗಳನ್ನು ಯಾಕೆ ದಯಪಾಲಿಸಲಿಲ್ಲ ? ಜೀವನಕ್ಕೆ ಪ್ಲೇ ಬಟನ್ ಮಾತ್ರ ಕೊಟ್ಟು ನಮಗೆ ಅನ್ಯಾಯ ಮಾಡಿಲ್ವಾ ದೇವರು ?

Love Failureಗಳಾದಾಗ ನಮ್ಮ ಮನಸ್ಸನ್ನೇ ಕಿತ್ತು ಬಿಸಾಕುವಷ್ಟು ಜಿಗುಪ್ಸೆ ಬಂದಿರತ್ತೆ. ಆಗ ರಿಸೆಟ್ ಬಟನ್ ಇದ್ರೆ ನಾವು ರಿಸೆಟ್ ಆಗಿ ಮುಂದಿನ ಜೀವನದ ಕಡೆಗೆ ಗಮನ ಹರಿಸಬಹುದಿತ್ತು. ದೇವದಾಸ್ ಪರಿಸ್ಥಿತಿ ಎಲ್ಲಾ ಬರಲ್ಲ. infact,  ದೇವದಾಸ್ ಗೆ ದೇವದಾಸ್ ಗತಿ ಬರ್ತಿರ್ಲಿಲ್ಲ !

ಪ್ರಾಣ ಸ್ನೇಹಿತೆಯರೊಂದಿಗೆ ಜಗಳ ಆದಾಗ ಆ ಜಗಳವನ್ನಷ್ಟೇ “‘delete selection” ಅಂತ ಒಂದೇ ಒಂದು ಬಟನ್ ಇಂದ ಅಷ್ಟೆಲ್ಲಾ ಕೋಪ , ಮಾತು ಕತೆ, ವಾದ,, ತರ್ಕ, ಕ್ಲೇಶ ಎಲ್ಲಾ ಒಟ್ಟಿಗೆ ಕಿತ್ತುಹಾಕಿಬಿಡುವಂತಿದ್ದರೆ….

ಜೀವನದ mp3 ಸದಾ ಕಾಲ ಒಳ್ಳೊಳ್ಳೆ ಹಾಡನ್ನೇ ಕೇಳಿಸುತ್ತಿರಬೇಕೆಂದರೆ ಈ ಬಟನ್ನುಗಳ ಅವಶ್ಯಕತೆ ಇದೆ ಅಲ್ವಾ ?

ಅಕ್ಟೋಬರ್ 12, 2009

ಹಳೆ ನೆನಪುಗಳ ಕಂತೆ ತೆಗೆದಾಗ..

Filed under: ಜಸ್ಟ್ ಲೈಕ್ ದಟ್ — saagari @ 7:14 ಅಪರಾಹ್ನ

“ಟೇಬಲ್ ಕ್ಲೀನ್ ಮಾಡದಿದ್ದರೆ ಮನೆಯಿಂದ ಓಡಿಸುತ್ತೇನೆ ” ಅನ್ನೋ ಅಮ್ಮಂದಿರ ಬೆದರಿಕೆ ಪ್ರಾಯಶಃ ಎಲ್ಲರ ಜೀವನದಲ್ಲೂ ಸಾಮಾನ್ಯವೆನಿಸುತ್ತದೆ. ಕೆಲವೊಮ್ಮೆ ಅಮ್ಮಂದಿರೇ ಕ್ಲೀನ್ ಮಾಡಲಿಕ್ಕೂ ಹೋಗಿರುತ್ತಾರೆ. ಅವರು ಕ್ಲೀನ್ ಮಾಡಿದರೆ ನಾವು ಬಚ್ಚಿಟ್ಟುಕೊಂಡ ವಸ್ತುಗಳೆಲ್ಲಾ ಹೊರಗೆಬಂದು, ” ಇದೆಲ್ಲಾ ಯಾಕೆ ಇಟ್ಟುಕೊಂಡಿದಿಯಾ ? ಸುಮ್ಮನೆ ಜಾಗ ಹಾಳುಮಾಡ್ತಿ” ಅಂತೆಲ್ಲಾ ಬೈದು, ಕೆಲ ಅತ್ಯಮೂಲ್ಯ ವಸ್ತುಗನ್ನು ನಿರ್ದಾಕ್ಷಿಣ್ಯವಾಗಿ ಕಸದಬುಟ್ಟಿಗೆ ರವಾನಿಸುತ್ತಾರಾದ್ದರಿಂದ ನಾವೇ ನಮ್ಮ ಟೇಬಲ್ಲು, ಕಪಾಟುಗಳನ್ನು ಶುದ್ಧಗೊಳಿಸಿಕೊಳ್ಳುವುದು ನಮ್ಮ ಜಾಣ್ಮೆಯನ್ನು ತೋರಿಸುತ್ತದೆ.

ನಿಜ ಹೇಳಬೇಕೆಂದರೆ ಅಮ್ಮಂದಿರಿಗೆ ಒಂದು ವಿಷಯ ಅರ್ಥವೇ ಆಗೊಲ್ಲ. ನಮ್ಮ ಟೇಬಲ್ಲು ಚೆನ್ನಾಗಿಲ್ಲದಿದ್ದರೇನೆ ನಮಗೆ ಬೇಕಾದ ವಸ್ತುಗಳು ಸಿಕ್ಕೋದು ! ನೀಟಾಗಿ, ಜೋಪಾನವಾಗಿ ವಸ್ತುಗಳನ್ನ ಇದ್ದಲ್ಲಿ ಇಟ್ಟುಬಿಡಿ, ಆಮೇಲೆ ನಿಮಗೆ ಬೇಕಾದಾಗ ಅವುಗಳು ಸಿಗುತ್ತವಾ ನೋಡಿ !

ಇದೇ ವಾದವನ್ನು ಮಂಡಿಸಿದೆ ನಾನು ನಮ್ಮಮ್ಮನ ಮುಂದೆ ಇವತ್ತು. ಅಮ್ಮ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿಬಿಟ್ಟರು ! ” ಇದೆಲ್ಲಾ ಸೋಮಾರಿತನದ ಲಕ್ಷಣ. ಮರ್ಯಾದೆಯಾಗಿ ಕ್ಲೀನ್ ಮಾಡಿಕೊಂಡರೆ ಸರಿ, ಇಲ್ಲಾಂದ್ರೆ  ನಿಜವಾಗಲು ಮನೆಯಿಂದ ಹೊರಗೇನೆ ಹೋಗ್ತಿ ನೀನು” ಅಂದದ್ದೇ ಸೂಟ್ಕೇಸ್ ಕೆಳಗಿಳಿಸಿದರು !

ಸೂಟ್ ಕೇಸ್ ನೋಡಿದ್ದೇ ನನಗೆ ಪುಕಪುಕಶುರುವಾಯ್ತು. ನಾನು  ಮನೆಬಿಟ್ಟು ಹೋಗೋದು, ಪಾರ್ಕಲ್ಲಿ, ಬಸ್ ಸ್ಟ್ಯಾಂಡಿನಲ್ಲಿ ಮಲಗೋದು…ಇವೆಲ್ಲ ಕಣ್ಣೆಂಬ ಸೆವೆಂಟಿ ಎಮೆಮ್ ಪರದೆಯ ಮೇಲೆ ಒಮ್ಮೆ ಬಂದು ಹೋದವು. ಯಾಕಿವೆಲ್ಲಾ ಸುಮ್ಮನೆ ಅಂತ ನನ್ನ ಟೇಬಲ್ಲನ್ನು ಕ್ಲೀನ್ ಮಾಡಲು ಟೊಂಕ ಕಟ್ಟಿ ನಿಂತೆ.

ಹೇಳಿಕೊಳ್ಳುವಂಥಾ ಕಷ್ಟಕರವಾದ ಮತ್ತು  ದೊಡ್ಡ ಕೆಲಸವೇನಲ್ಲ ಎಂದುಕೊಂಡಿದ್ದ ನನ್ನ ಉತ್ತರಕುಮಾರನಂತಹ ಪೌರುಷ ಟೇಬಲ್ ಮುಂದೆ ಸಾಲದಾಯ್ತು. ಅದು ಏನೇನು ತುಂಬಿಸಿದ್ದೆ ನಾನು ಅದರ ಮೇಲೆ ! ಏನೆಲ್ಲ ತುಂಬಿಸಿಲ್ಲಾ ಅಂತ ಕೇಳಬೇಕು ನ್ಯಾಯವಾಗಿ ! ಹೋದ ವರ್ಷದ ಪ್ರಜಾವಾಣಿ ದೀಪಾವಾಳಿ ಕಥಾಸ್ಪರ್ಧೆಯ ಪೇಪರ್ ಕಟಿಂಗ್ ಇಂದ ಹಿಡಿದು ಮೊನ್ನೆ ನೆರೆ ಸಂತ್ರಸ್ಥರ ಪರಿಹಾರಧನಕ್ಕೆ ಕೊಟ್ಟ ಹಣಕ್ಕೆ ರಸೀತಿಯವರೆಗೂ ಎಲ್ಲಾ ಇದ್ದವು !

ಇದ್ದ ಹಾಳೆಗಳ ರಾಶಿಯಲ್ಲಿ ಯಾವ್ಯಾವುದನ್ನು ಬಿಸಾಕಲಿ ಅಂತ ತೀರ್ಮಾನಿಸುವುದರಲ್ಲಿ ನನ್ನ ಜೀವಮಾನವೇ ಕಳೆದುಹೋಗುತ್ತದೆ ಅನ್ನೋ ಅನುಮಾನ ನನಗೆ ಬರದಿರಲಿಲ್ಲ. ಅಮ್ಮ ಬೇರೆ ಎರಡು ಘಂಟೆಗಳ ಗಡುವು ಕೊಟ್ಟಿದ್ದರು. ನಾನು ಏನು ಮಾಡಲಿ ಅಂತ ಯೋಚನೆ ಮಾಡುವಷ್ಟರಲ್ಲಿಯೇ ಅರ್ಧಘಂಟೆ ಆಗಿಹೋಗಿತ್ತು. ” ಎರಡು ಘಂಟೆಯಲಲ್ಲಿ ಖಂಡಿತಾ ಕ್ಲೀನ್ ಮಾಡಕ್ಕೆ ಆಗಲ್ಲ ” ಅಂತ ಗೊಣಗಿದೆ. ಅಮ್ಮ  ಅಷ್ಟೇ ನಿರ್ಲಿಪ್ತರಾಗಿ ” ಕ್ಲೀನ್ ಆಗೋವರ್ಗು ಊಟ ಇಲ್ಲ” ಅಂದುಬಿಟ್ರು !

ಉದರನಿಮಿತ್ತಂ ಬಹುಕೃತವೇಷಂ ಅಂತ ಸುಮ್ಮನೇ ಬರೆದಿಲ್ಲ ಹಿರಿಯರು ಅಂದುಕೊಂಡೆ.

ರಾಶಿ ಬಿದ್ದಿದ್ದ ಒಂದೊಂದೆ ಹಾಳೆ ಓದುತ್ತಾ ಹೋದೆ. “ಇದಿರಲಿ, ಇದು ಬೇಕಾಗತ್ತೆ, ಯಾವುದಕ್ಕೂ ಇರಲಿ, ಹಾಳಾಗೋಗ್ಲಿ ಹತ್ತರ ಮಧ್ಯ ಹನ್ನೊಂದು” ಅಂತ ಇಟ್ಟುಕೊಂಡಿದ್ದ ಹಾಳೆಗಳನ್ನೆಲ್ಲಾ ಮುಖಾ ಮುಲಾಜಿಲ್ಲದೇ ಬಿಸಾಕಿದೆ. ಮತ್ತೆ ಅದರ ಕಡೆ  ನೋಡಿದರೆ ಎಲ್ಲಿ ಮನಸ್ಸು ಬದಲಾಯಿಸಿಬಿಡುತ್ತೀನೋ ಅಂತ ಕವರ್ ಒಳಗೆ ಹರಿದು ಹರಿದು ಹಾಕಿದೆ. ಅದೂ ಕಣ್ಣು ಮುಚ್ಚಿಕೊಂಡು !ರೀಫಿಲ್ ಇಲ್ಲದ, ರೀಫಿಲ್ ಸಿಗದ ಪೆನ್ನುಗಳನ್ನು ನಿರ್ದಾಕ್ಷಿಣ್ಯವಾಗಿ ಬಿಸಾಕಬೇಕಾಯ್ತು. ಮುದ್ದು ಮುದ್ದಾದ,ಚೆನ್ನಾಗಿ ಬರೆಯುತ್ತಿದ್ದ ಪೆನ್ನುಗಳಿದ್ದವಾದರೂ ಅವೆಲ್ಲ ” use and throw ”  ಆಗಿದ್ದವು. ಉಪಯೋಗಿಸಿದ್ದೆ, ಬಿಸಾಡಿರಲಿಲ್ಲ, ಅದನ್ನೂ ಮಾಡಿ ಆಯ್ತು.

ನನ್ನ ಟೇಬಲ್  ಕ್ಲೀನಾಯ್ತು.ಇನ್ನು ಕಪಾಟಿನ  ಸರದಿ. ಮೊದಲನೆಯ  ವಿಭಾಗದಲ್ಲಿ ಕೆಲ ಮುಖ್ಯ ದಾಖಲೆಗಳ ಜೆರಾಕ್ಸುಗಳು ಅನಾಥವಾಗಿ ಬಿದ್ದಿದ್ದವು. ಇದ್ದ ದಾಖಲೆಗಳನ್ನೇ ಇಲ್ಲವೆಂದುಕೊಂದು ಹಲವಾರು ಬಾರಿ ಜೆರಾಕ್ಸ್ ಮಾಡಿಸಿದ ನನ್ನ ಅವಸರಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಎಲ್ಲವನ್ನು ಒಂದು ಫೈಲಿನಲ್ಲಿ ಹಾಕಿಟ್ಟು, ಯಾವ್ಯಾವ ದಾಖಲೆ ಎಷ್ಟೆಷ್ಟು ಪ್ರತಿಗಳಿವೆ ಎಂದು ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡೆ. ಆಮೇಲೆ ಈಡೈರಿಯನ್ನು ಹುಡುಕಬೇಕಾದ ಪರಿಸ್ಥಿತಿ ಬರಬಹುದು ಅನ್ನೋದು ನನಗೆ ಆಗ ಹೊಳೆದಿರಲಿಲ್ಲ.

ಎರಡನೆಯ ಕಪಾಟಿನಲ್ಲಿ ನನ್ನ ನೆನಪಿನ ಕಂತೆಗಳಿದ್ದವು. ಹೈ ಸ್ಕೂಲಿನ ಮೊದಲನೆಯ ದಿನ ಸಿಕ್ಕ ಗೆಳತಿಯ “books to buy” ಹಾಳೆ, ನವಿಲುಗರಿ, ಫೇವರೈಟ್ ಟೀಚರ್ ಕೊಟ್ಟ ಪೆನ್ನು, ಬಹಳ ಕಷ್ಟಪಟ್ಟು ಆರಿಸಿ ಹುಡುಕಿ ಜತನದಿಂದ ಕಾಪಾಡಿದ್ದ ಪೆನ್ ಪೆನ್ಸಿಲ್ಲು,…ಇವೆಲ್ಲವನ್ನು ಹೊರಹಾಕಲು ನನಗೆ ಮನಸ್ಸೇ ಬರಲಿಲ್ಲ. ನಾನು ನನ್ನ ಆಪ್ತಗೆಳತಿ ಆಡದ ಗಾಸಿಪ್ಪಿರಲಿಲ್ಲ, ಅರಿಯದ ಕೋಡ್ language ಇರಲಿಲ್ಲ ! ಅವೆಲ್ಲದರ ಒಂದೊಂದು ಪ್ರತಿ ಇಟ್ಟುಕೊಳ್ಳಬೇಕೆನಿಸಿತ್ತು ನನಗೆ, ಆದರೆ ಅದೇಕೋ ಆಗಲಿಲ್ಲ. ಹುಡುಗರು ನನ್ನ ಪೆನ್ ಪೆನ್ಸಿಲ್ಲನ್ನು ಕದ್ದಾಗ ಅತ್ತಿದ್ದಂತೂ ಮರೆಯಲಾರೆ ! ಇಂಥಾ ನವಿರು ಭಾವನೆಗಳ , ಮರೆಯದ ನೆನಪುಗಳಭರಪೂರ ರಾಶಿ ಹೊತ್ತ ಆ ವಸ್ತುಗಳನ್ನು ಬಿಸಾಕಲು ಆಗುತ್ತದೆಯೇ ? ಹೇಗೆ ಜೋಪಾನವಾಗಿ ತೆಗೆದೆನೋ ಹಾಗೆಯೇ ಮತ್ತೆ ಅಲ್ಲಿಯೇ ಇರಿಸಿದೆ, ಅಮ್ಮ ಬೈದರೂ ಸರಿ, ಅದನ್ನು ಬಿಸಾಡುವುದಿಲ್ಲ ಎಂದು ಸಾವಿರದ ನೂರ ಹನ್ನೊಂದನೆಯ ಸರ್ತಿ ಪ್ರತಿಜ್ಞೆ ಮಾಡಿ.

ಇನ್ನು ಕಾಲೇಜಿನ ನೆನಪುಗಳಿದ್ದ ಕಪಾಟಿನ ವಿಭಾಗವನ್ನು ತೆಗೆದಾಗ ಅವೆಲ್ಲವನ್ನು ಅರೆಕ್ಷಣದಲ್ಲಿ ನಿರ್ದಾಕ್ಷಿಣ್ಯವಾಗಿ ಬಿಸಾಡಿಬಿಟ್ಟೆ. ಕಾಲೇಜಿನಲ್ಲಿ ಯಾಕೋ ಎಲ್ಲರೂ ಬರೀ ಕಾರ್ಯವಾಸಿಗಳು, ಭಾವನಾಶೂನ್ಯರೇ ಸಿಕ್ಕರು ನನಗೆ ಸ್ನೇಹಿತೆಯರಾಗಿ. ಅವರ ನೆನಪುಗಳನ್ನು ಹೊಂದದಿರುವುದೇ ಸರಿಯೆನಿಸಿತು. ಮನಸ್ಸು ಇಂಥವುಗಳನ್ನೆಲ್ಲಾ ಸುಲಭಕ್ಕೆ ಮರೆಯುವುದಿಲ್ಲವಾದರೂ, ಯಾರೋ ಸಿಕ್ಕಾಗ, “ಅವಳು ಹೇಗಿದ್ದಾಳೆ ? ಇವಳು ಹೇಗಿದ್ದಾಳೆ ? ಅವಳ ಮದುವೆಗೆ ನೀನ್ಯಾಕೆ ಬರಲಿಲ್ಲ ?” ಅಂತೆಲ್ಲಾ ಕೇಳಿ ನೆನಪಿಸಿದಾಗ ” ಗೊತ್ತಿಲ್ಲ” ಅಂದು ತಪ್ಪಿಸಿಕೊಳ್ಳುವುದು ಸುಲಭ. ಆದರೇ ಈ ನೆನಪಿನ ನೇಣುಹಗ್ಗದ ನಿಧಾನದ ಜಗ್ಗುವುಕೆಯನ್ನು ಏಗುವುದು ಕಷ್ಟ. ನನ್ನನ್ನೇ ಸಾಯಿಸುವ ಶಕ್ತಿಯುಳ್ಳ ನೆನಪನ್ನು ನಾನು ಸಾಯಿಸಿ ಬದುಕುವುದು ಆ ಕ್ಷಣದ ಅನಿವಾರ್ಯತೆಯಾಯ್ತು ನನಗೆ.ಸ್ಲಾಂ ಬುಕ್ಕುಗಳನ್ನ  ತೂಕಕ್ಕೆ ಇಟ್ಟೆ, ಯೋಗರಾಜ ಭಟ್ಟರಿಂದ ಪ್ರೇರಿತಳಾಗಿ. ಫೋಟೋಗಳನ್ನ ಸುಟ್ಟು ಹಾಕಿದೆ, ಕರೀನಾಳ ಪ್ರಭಾವದಿಂದ.

ಹಳೇ ನೆನಪುಗಳ ಕಂತೆ ತೆಗೆದಾಗಲೆಲ್ಲ ಮನಸ್ಸೆಂಬ ಹುಚ್ಚುಕುದುರೆಗೆ ಹುಚ್ಚು ಹೆಚ್ಚಾಗುತ್ತದೆ ! ಲಗಾಮು ಹಾಕುವುದು ಸುಲಭದ ಮಾತಲ್ಲ. ಹೀಗೇ  ಕಪಾಟನ್ನು ಕ್ಲೀನ್ ಮಾಡುತ್ತಿದ್ದಾಗ  ನಾಲ್ಕು ತಾಸು ಕಳೆದಿದ್ದು ಗೊತ್ತೇ ಆಗಿರಲಿಲ್ಲ !  ಅಮ್ಮ ಅನ್ನವನ್ನು  ತಟ್ಟೆಯಲ್ಲಿ ತಂದಿಟ್ಟು, ” ಅನ್ನ ತಿನ್ನು ಮೊದಲು ! ಆಮೇಲೆ ಮುಂಡುವರೆಸು ನಿನ್ನ ಶ್ರಮದಾನ !  ಎಲ್ಲ ಕ್ಲೀನಾದಮೇಲೆ ಬಿಸಾಕೋದೆಲ್ಲವನ್ನ ಆ ಸೂಟ್ ಕೇಸಿನಲ್ಲಿ ಹಾಕಿಡು, ಅದರ ಸಮೇತ ನಾಳೆ ಹಳೇ ಪೇಪರ್ ನವನಿಗೆ ಕೊಡೋಣಂತೆ ! ” ಅಂದು ಹೊರಟರು. ಆಮೇಲೆ ನಾನು ಮಾಡಿದ ಕೆಲಸಗಳನ್ನೆಲ್ಲಾ ಟಿಕ್ ಮಾಡಲು ಡೈರಿ ಹುಡುಕಿದೆ, ಮತ್ತೆ ನಾಪತ್ತೆ ! ಕ್ಲೀನ್ ಮಾಡಿದ್ದರ ಪರಿಣಾಮವಾಗಿ ನಾನು ಡೈರಿಯನ್ನು ಎಲ್ಲೋ ಇಟ್ಟಿದ್ದೆ. ಹುಡುಕಲು ಹೋಗಿ ಮತ್ತೆ ಟೇಬಲ್ ಗಲೀಜಾಯ್ತು ! ಆಮೇಲೆಲ್ಲೋ ಸಿಕ್ಕಿತು. ಅದನ್ನ ಬೇರೆಕಡೆ ಇಟ್ಟು, ಮತ್ತೆ ಎಲ್ಲ ಸರಿಮಾಡುತ್ತಾ ಕೂತೆ. ಆರು ತಾಸಿನ, ಅರ್ಧ ಘಂಟೆ ಲಂಚ್ ಬ್ರೇಕಿನ ನನ್ನ ಟೇಬಲ್ ಮತ್ತು ಕಪಾಟು ಸ್ವಚ್ಛತಾ ಅಭಿಯಾನ ಸಾಂಗವಾಗಿ ನೆರವೇರಿತ್ತು.

ಕ್ಲೀನ್ ಆದ ಮೇಲೂ ನನಗೆ  ನೆನಪುಗಳು ಕಾಡುತ್ತಿದ್ದವು. ವಸ್ತುಗಳನ್ನು ನಾಶಮಾಡಿಯಾಗಿತ್ತು. ಆದರೆ ಕೆಟ್ಟ, ಕಾಡುವ ನೆನಪನ್ನೆಲ್ಲಾ ಸೂಟ್ ಕೇಸ್ ನಲ್ಲಿ ಹಾಕಿಟ್ಟು ಬಿಸಾಕುವಂತಿದ್ದರೆ ಎಷ್ಟು ಚೆಂದ ಇರ್ತಿತ್ತು ಅಲ್ವಾ ?

ನವೆಂಬರ್ 28, 2008

ಮಳೆಯಲ್ಲಿ ಅಳಬೇಕು !

Filed under: ಜಸ್ಟ್ ಲೈಕ್ ದಟ್ — saagari @ 12:02 ಫೂರ್ವಾಹ್ನ

ಮಳೆ  ಕೆಲವರಿಗೆ romantic, ಕೆಲವರಿಗೆ  irritating, ಮತ್ತೊಬ್ಬರಿಗೆ ಮತ್ತಿನ್ನೇನೊ! ಆದರೆ ನಾನು ಚಾರ್ಲಿ ಚಾಪ್ಲಿನ್ ಅವರ ಮಾತನ್ನು ಅನುಮೋದಿಸುತ್ತೇನೆ. ಮಳೆ ಬಂದಾಗ ನಾವು ಅತ್ತರೆ ಯಾರಿಗೂ ಕಾಣುವುದಿಲ್ಲ ಅನ್ನುವ ಅವರ ಮಾತು ತುಂಬಾ ನಿಜ. ನಾನು ಅಳುವುದು ಇಂಥಾ ಸಂದರ್ಭಗಳಲ್ಲಿಯೇ.

ಅನಿರೀಕ್ಷಿತ ಮಳೆಯಾದರೆ ಸಂದರ್ಭ ತಂತಾನೆ ಒದಗಿ ಬಂದಹಾಗಾಗುತ್ತೆ. ದಿನಗಟ್ಟಲೆ ತಡೆದಿಟ್ಟುಕೊಂಡಿರುವ ಯಾರದೋ ಮೇಲಿನ ಸಿಟ್ಟು, ಫಲಕೊಡದ ನನ್ನ ಪಾಕಪ್ರಯೋಗಗಳು, ಬ್ಲಾಗ್ ಅಪ್ಡೇಟ್ ಮಾಡಲು ಹೊರಟಾಗ ಡೌನಾಗುವ ಸರ್ವರ್ರು..ಇವೆಲ್ಲದರ ಮೇಲೆ ನಾನು ಆಗಾಗಲೇ ಕಿರ್ಚಾಡಿದರೆ ಜನ ಹುಬ್ಬೇರಿಸುತ್ತಾರೆ…ಶಾಂತ ಸ್ವಭಾವದವರು ಹೀಗೆ ಜ್ವಾಲಾಮುಖಿಯಂತೆ ಹೇಗಾದರಪ್ಪಾ ಅಂತ.ಅದಕ್ಕೆ ಯಾರ್ಗೂ ಗೊತ್ತಾಗ್ದೆ ಇರೋ ಹಾಗೆ ಅಳ್ಬೇಕು ಯಾವಾಗ್ಲು. ನಮ್ಮ ಅಳು, ದುಃಖ ಮತ್ತು ಕೋಪದ ಕಾರಣ ಕೇಳುವಷ್ಟು ವಿವೇಕಿಗಳಾಗಿಲ್ಲ ಜನ ಇನ್ನು…ಕೋಪಕ್ಕೆ ಕೋಪವೇ ಉತ್ತರ ಅಷ್ಟೆ ಅನ್ನೋ ಲೆವೆಲ್ಲಲ್ಲೇ ಇದಾರೆ…ಇರ್ಲಿ ಪಾಪ…ಇಷ್ಟಾ ಬಂದಾಗ ಮೇಲೆ ಬರ್ಲಿ ಜನ.No compulsion.

ಮಳೆ ನೋಡ್ತಾ ಅಳೋದು ಒಂಥರಾ. ಆಗ ಮನೆಯಲ್ಲಿ ಯಾರೂ ಇರ್ಬಾರ್ದು. ಮಳೆ ಥರಾನೆ ನಾವು ಒಂದೇ ಸಮ ಅತ್ತುಬಿಡಬೇಕು. ಗುಡುಗಿದಾಗ ಜಾಸ್ತಿ ಬಿಕ್ಕಳಿಸೋದು…ಮಿಂಚಿದಾಗ ಸಮಾಧಾನದ ನಗು ಬೀರೋದು ಇದೆಲ್ಲಾ ಆಗ್ಬೇಕು. ಆಗ್ಲೆ ಮಳೆಯ ಪ್ರಯೋಜ್ನ ಆಗೋದು.

ಇನ್ನೊಂದು ಮಳೇಲಿ ನೆನೆಯುತ್ತಾ ಅಳೋದು. ಇದು ನನ್ನ ಫೇವರೆಟ್. ಛತ್ರಿ ನಾಮ್ಕೆ ವಾಸ್ತೆ ಇಟ್ಕೊಳ್ಳೋದು. ದುಪಟ್ಟ ನ ಸ್ಕಾರ್ಫ್ ಹಾಗೆ ಸುತ್ತ್ಕೊಳ್ಳೋದು…ರಸ್ತೆಯ ನೀರಲ್ಲಿ ಟಪ ಟಪ ಕಾಲ್ ಹಾಕೋದು…ಬೇಕಂತಲೇ ಹೈ ಹೀಲ್ಡ್ ಚಪ್ಪಲಿ ಹಾಕಿ ಕಾಲ್ ಉಳುಕಿಸಿಕೊಳ್ಳೋದು…ಛತ್ರಿ ಮುಚ್ಚಿ, ಕಾಲ್ ಎಳೆದುಕೊಂಡು ಕುಂಟುತ್ತಾ ನಡೆಯೋದು. ಅದು ಅಳುವಿಗೆ ಸ್ಟಾರ್ಟಿಂಗ್ ಪಾಯಿಂಟು. ಕುಂಟುತ್ತಾ ಅತ್ಕೊಂಡ್ ಹೋಗ್ತೀವಲ್ಲಾ…ಸಾರ್ಥಕ ಅಳು ಅದು. ಜೀವನದಲ್ಲಿ ನಾವು ತಪ್ಪು ಬೇಕಂತಲೇ ಮಾಡಿರ್ತಿವೋ, ಗೊತ್ತಿಲ್ದೇ ಮಾಡಿರ್ತಿವೋ…ಎಲ್ಲಾ ಆವಾಗ್ಲೆ ನಮ್ಮ ಕೈಕೊಟ್ಟ ಹೀಲ್ಸ್ ಚಪ್ಪಲಿ ರೂಪದಲ್ಲಿ ನೆನಪಾಗ್ತವೆ. ನಮಗರಿವಿಲ್ಲದಂತೆಯೇ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿರುತ್ತೇವೆ.

ಇನ್ನು ನಾಸ್ಟಾಲ್ಜಿಯಾ ಅಳು. ಈ ಅಳುಗೆ ಮನೆಯ ಬಾಲ್ಕನಿ ಸರಿಯಾದ ಜಾಗ. ಬಾಲ್ಕನಿ ಇಲ್ದೇ ಇದ್ದೋರು ಅವರ ರೂಮಿನ ಕಿಟ್ಕಿಗೆ compromise ಮಾಡ್ಕೊಳ್ಳಿ. ಕೈಯಲ್ಲಿ ಒಂದು ಕಪ್ ಕಡಕ್ ಚಹಾ…(ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು) ಹೆಗಲ ಮೇಲೆ ದಪ್ಪ ಕರ್ಚೀಫು.. ಉಯ್ಯಾಲೆಯೋ ಚೇರೋ ನೆಲವೋ..ಯಾವ್ದಾದ್ರು ಸರಿ..ಅದರಮೇಲೆ ಕೂತು… ಹಿಂದೆ ಯಾರೊಂದಿಗೋ ಕುಡಿದ ಕಾಫಿ/ಟೀ/ ಜ್ಯೂಸು ನೆನೆಸಿಕೊಂಡು ಸಂತೋಷಕ್ಕೋ ದುಃಖಕ್ಕೋ ಅಳೋದು…ಇನ್ನು ಆ ಸಮಯ ಬರಲ್ವಲ್ಲಾ…ಅಂತ. ಅಥ್ವಾ…ಇಂಥಾ ಮಳೆಲಿ ಅವನ/ಅವಳ ಜೊತೆ ಬಿಸಿಬಿಸಿಯಾಗಿ ಚಹಾ ಹೀರುತ್ತಾ ಬೆಚ್ಚಗೆ ಇರ್ಬಹುದಿತ್ತು… ನಾ ಹೋಗಲಾರದೇ/ ಅವಳು ಸಿಗಲಾರದೇ/ ಅವ ಕರೆಯದೇ/ ನಾನ್ ಕೇಳದೇ..ಅನ್ಯಾಯ ಮಳೆ ವೇಸ್ಟ್ ಆಗೋಯ್ತಲ್ಲಾ ಅನ್ನೋ ಜಿಗುಪ್ಸೆ…ಮೊಟ್ಟಮೊದಲ ಕ್ರಶ್ಷ್ಹು…ಅವ ಬೇರೆ ಹುಡ್ಗಿ ಗೊತೆ ಹೋದಾಗ ಆದ ಹಾರ್ಟ್ ಬ್ರೇಕು..ಮತ್ತೊಂದಿಷ್ಟು ಬ್ರೇಕಪ್ಪು ಪ್ಯಾಚಪ್ಪುಗಳು…ಪ್ರೊಪೋಸಲ್ , ರಿಜೆಕ್ಷನ್ ಗಳು…ಹ್ಮ್ಮ್ಮ್ಮ್ಮ್…ಇವೆಲ್ಲಾ ನೆನೆಸ್ಕೊಂಡ್ ಚೆನ್ನಾಗಿ ಅತ್ತುಬಿಡಬೇಕು…ಅಮೇಲೆ ತಪ್ಪದೆ ಶುಂಟಿ ಹಾಕಿದ ಚಹಾ ಕುಡಿಬೇಕು. ತಲೆ ನೋವಿದ್ದ್ರೆ  ಮುಂದಿನ ಮಳೆಯಲ್ಲಿ ಅಳಕ್ಕೆ  interest  ಇರಲ್ಲ.

ಹೀಗೆ ಅತ್ತ ಮೇಲೆ ಯಾರಿಗೇನಾಗತ್ತೋ ಬಿಡತ್ತೋ, ನನಗಂತೂ ಒಂಥರಾ ಸಮಾಧಾನ ಆಗತ್ತೆ. ಮನುಷ್ಯರಿಗೆ ನನ್ನ ಮಾತು ಕೇಳುವ ವ್ಯವಧಾನ ಇದ್ಯೋ ಇಲ್ವೊ, ಆ ಪ್ರತ್ಯೊಂದು ಮಳೆಹನಿ ನನ್ನ ಮಾತು ಕೇಳಿಸಿಕೊಂಡ ಹಾಗಾಗತ್ತೆ ನನಗೆ. ಜನ ನನ್ನ ಮಾತನ್ನು ಮುಂದೆ ಹೊಗಳಿ ಹಿಂದೆ ತೆಗಳಬಹುದು…ಆದ್ರೆ ಈ ಮಳೆ ಹನಿಗಳು ನಿಶ್ಕಲ್ಮಷ. ಅವು ಸ್ಪಂದನೆಯ ಮುಖವಾಡ ಹಾಕೊಲ್ಲ, ನಿಜವಾಗಿಯೂ ಸ್ಪಂದಿಸುತ್ತವೆ. ಅವುಗಳ ಸ್ಪರ್ಶದಲ್ಲಿ ಅದೆಂಥದ್ದೋ ಮಮತೆ, ಅದೆಂಥದ್ದೋ ಸಾಂತ್ವನ. ಮನುಷ್ಯರು ತಿಪ್ಪರ್ಲಾಗ ಹಾಕಿದ್ರೂ ಕೊಡಕ್ಕಾಗಲ್ಲ ಇಂಥಾ ಸಂತ್ವಾನ ನ.

ನನಗೆ ಮಳೆಯಲ್ಲಿ ಯಾಕಪ್ಪಾ ಅಳಾಬೇಕು ಅನ್ನಿಸತ್ತೆ ಅಂದ್ರೆ ಮೇಲಿಂದ ಕೆಳಗೆ ಬಿದ್ದು ಒಡೆದರೂ ಮಳೆ ಹನಿ ಮತ್ತೆ ಒಟ್ಟುಗೂಡಿ ಹನಿಯಾಗುತ್ತದೆ. ಇಂಥದ್ದೇ ಜಲಮೂಲಗಳ ಆಸೆಯಿಲ್ಲದೇ ಎಲ್ಲದರಲ್ಲೂ ಒಂದೇ ಭಾವದಿಂದ ಒಡಗೂಡುತ್ತದೆ. ಮಣ್ಣಿಗೆ ಹೋದರೂ ಕೆಳಗೆ ಸೇರಿ ಮುಂದೆ ಬಾವಿಯಾಗುತ್ತದೆ. ಬದುಕಿನ ಹೋರಾಟದಲ್ಲಿ ಕಾದಾಡಿ ಸುಸ್ತಾದವರಿಗೆ ಮಳೆ ಹೋರಾಟ ಮುನ್ನಡೆಸಲು ಸಾಂತ್ವನಪೂರ್ವಕ ಚೈತನ್ಯ ನೀಡುತ್ತದೆ. ಇದನ್ನು ಅನುಭವಿಸಲಿಕ್ಕಾದರೂ ಮಳೆಯಲ್ಲಿ ಅಳಬೇಕು !

ನನ್ನನ್ನು ತುಂಬಾ ಜನ ಕೇಳುವುದುಂಟು..ನೀನು ಜನರ ಹತ್ತಿರ ಹೆಚ್ಚು ಭಾವನಾತ್ಮಕವಾಗಿಲ್ಲ, ಸಖತ್ practical. ಕಡ್ಡಿ ತುಂಡಾದ ಹಾಗೆ ಮಾತಾಡ್ತೀಯ. ಆದ್ರೆ ಪ್ರಕೃತಿಯ ಹತ್ತಿರ ಹೆಚ್ಚು ಭಾವನಾತ್ಮಕವಾಗಿರ್ತಿ…ಯಾಕೆ ಅಂತ. ನಾನನ್ನುವೆ – ”  Earth deserves emotions, world does not ” ಅಂತ. ಇದು ಅರ್ಥವಾಗಬೇಕಿದ್ದರೆ ಒಮ್ಮೆ ಮಳೆಯಲ್ಲಿ ಅಳಬೇಕು !

PS : Quote ನನ್ನದು…ಕಾಪಿರೈಟ್ ಇದೆ ಅದಕ್ಕೆ 🙂

Create a free website or blog at WordPress.com.